ಯೋಧ ಮತ್ತವರ ಕುಟುಂಬಸ್ಥರಿಗೆ ಗೌರವ
ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೇಕೇರಿಯ ಹೆಮ್ಮೆಯ ಯೋಧ ರಾಕೇಶ್ ಮತ್ತು ಅವರ ಕುಟುಂಬಸ್ಥರನ್ನು ಆತ್ಮೀಯವಾಗಿ ಗೌರವಿಸುವ ಮೂಲಕ ತೀರ್ಥಹಳ್ಳಿ ಆರೋಗ್ಯ ಇಲಾಖಾ ನೌಕರರ ಸಂಘ ನೂತನ ವರ್ಷಾಚರಣೆಯನ್ನು ವಿಶಿಷ್ಟವಾಗಿ ಸಂಭ್ರಮಿಸಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸತೀಶ ಟಿ.ವಿ. ಮಾತನಾಡಿ, ನೂತನ ವರ್ಷಾಚರಣೆಯ ವಿಶೇಷ ದಿನದಂದು ಭಾರತದ ಹೆಮ್ಮೆಯ ಸೈನಿಕರೊಬ್ಬರನ್ನು ಮತ್ತು ಅವರ ಕುಟುಂಬಸ್ಥರನ್ನು ಗೌರವಿಸುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ. ಭಾರತೀಯ ಯೋಧರ ಅಪಾರ ದೇಶಪ್ರೇಮ, ಶೌರ್ಯ, ಸಾಹಸ, ತ್ಯಾಗ, ಬಲಿದಾನಗಳಿಂದ ದೇಶದ ಪ್ರಜೆಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಇಂತಹ ಧೀರರನ್ನು ಅವರ ಕುಟುಂಬಸ್ಥರನ್ನು ಗೌರವ ಅಭಿಮಾನದಿಂದ ಕಾಣಬೇಕಾದುದು ಸಮಸ್ತ ಭಾರತೀಯರ ಕರ್ತವ್ಯ ಮಾತ್ರವಲ್ಲ ಅವರ ಋಣ ಸಂದಾಯದ ನಿಟ್ಟಿನಲ್ಲಿ ಪುಟ್ಟ ಪ್ರಯತ್ನವೂ ಹೌದು. ಈ ಸಮ್ಮಾನದ ಮೂಲಕ ತೀರ್ಥಹಳ್ಳಿ ಆರೋಗ್ಯ ಇಲಾಖಾ ನೌಕರರ ಸಂಘ ಭಾರತದ ಹೆಮ್ಮೆಯ ಸಮಸ್ತ ಸೈನಿಕರು ಮತ್ತವರ ಕುಟುಂಬಸ್ಥರಿಗೆ ಧನ್ಯವಾದ ಸಮರ್ಪಿಸುತ್ತಿದೆ. ಅವರೆಲ್ಲರಿಗೂ ಹಾರ್ದಿಕವಾಗಿ ನೂತನ ವರ್ಷದ ಶುಭಾಶಯ ಕೋರುತ್ತಿದೆ ಎಂದರು.
ಈ ಸಂದರ್ಭದಲ್ಲಿ ಯೋಧ ಶ್ರೀ ರಾಕೇಶ್ ಮತ್ತು ವೀಣಾ ದಂಪತಿಗಳನ್ನು ಆತ್ಮೀಯವಾಗಿ ಗೌರವಿಸಲಾಯಿತು. ವೈದ್ಯಾಧಿಕಾರಿ ಡಾ.ಸ್ಪಂದನಾ, ಸಂಘದ ಪದಾಧಿಕಾರಿಗಳಾದ ಹನುಮಂತ ರೆಡ್ಡಿ, ಗಿರಿ ಡಿ.ಟಿ., ಸಂಜನಾ ಮತ್ತಿತರರಿದ್ದರು.
