ತೀರ್ಥಹಳ್ಳಿಗೆ ಸಿಹಿ ಸುದ್ದಿ ನೀಡಿದ ಸಿಎಂ ಡಿ.ಕೆ.ಶಿವಕುಮಾರ್

ಬೀದರಗೋಡು ಶ್ರೀಧರ್ ಈಗ ಸರ್ಕಾರದ ಜಂಟಿ ಕಾರ್ಯದರ್ಶಿ
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ತೀರ್ಥಹಳ್ಳಿಗೆ ಎರಡು ಸಿಹಿ ಸುದ್ದಿ
ಕೆಲವು ದಿನದ ಹಿಂದೆ ತೀರ್ಥಹಳ್ಳಿ ಅಳಿಯ ವಿನಯ್ ಕಾರ್ತಿಕ್ ಕಾಂಗ್ರೆಸ್ ಪಕ್ಷದ ಐದನೇ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಘೋಷಣೆಗೊಂಡಿದ್ದರು.
ಈಗ ಬಹು ನಿರೀಕ್ಷೆಯಂತೆ ತೀರ್ಥಹಳ್ಳಿ ಬಿದರಗೋಡು ಕುಟುಂಬದ ಶ್ರೀಧರ್ ಅವರು ಮುಖ್ಯಮಂತ್ರಿ ವಿಶೇಷ ಕರ್ತವ್ಯಧಿಕಾರಿ ಜೊತೆಗೆ ನೂತನ ಸರ್ಕಾರದ ಪದ ನಿಮಿತ್ತ ಜಂಟಿ ಕಾರ್ಯದರ್ಶಿಯಂತಹ ಅತ್ಯಂತ ಮಹತ್ವದ ಹಾಗೂ ಜವಾಬ್ದಾರಿಯುತ ಹುದ್ದೆಗೇರಿದ್ದಾರೆ.
ಈ ಸಂಬಂಧ ನಿನ್ನೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಧರ್ ತಮ್ಮ ವಿಶ್ವಾಸನೀಯ ಪ್ರತಿಭೆ ಹಾಗೂ ಪ್ರಖರ ದಕ್ಷತೆಯ ಕಾರಣ ಹಿಂದೆ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಎಚ್.ಕೆ.ಪಾಟೀಲ್ ರಂತಹ ರಾಜ್ಯ ರಾಜಕಾರಣದ ದಿಗ್ಗಜರಿಗೆ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುಂದೆ ಅವರ ಕಾರ್ಯ ಶೈಲಿ ಆಗ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆದು ಅವರು ಉಪ ಮುಖ್ಯಮಂತ್ರಿಯಾದಾಗ ಅವರ ಆಪ್ತ ಕಾರ್ಯದರ್ಶಿಯಾದರು.
ಇದೀಗ ಮುಖ್ಯಮಂತ್ರಿ ಆದಾಗಲೂ ಶಿವಕುಮಾರ್ ಶ್ರೀಧರ್ ಅವರ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆ ಇರಿಸಿ ಅವರನ್ನು ಸರ್ಕಾರದ ಪದ ನಿಮಿತ್ತ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಇದರಿಂದ ಶ್ರೀಧರ್ ಇನ್ನು ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸುಲಲಿತ ಆಡಳಿತಕ್ಕೆ ಬೇಕಾದ ಸಂದರ್ಭ ಸೃಷ್ಟಿ. ಮುಖ್ಯಮಂತ್ರಿ ಕಚೇರಿಯ ದೈನಂದಿನ ಆಡಳಿತ ನಿರ್ವಹಣೆ, ಆಡಳಿತ ಸುಗಮವಾಗಿ ಸಾಗಲು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಪ್ರಮುಖ ಪಾತ್ರ ವಹಿಸುವುದು ಶ್ರೀಧರ್ ಅವರ ಜವಾಬ್ದಾರಿಯಾಗಲಿದೆ.
ಜೊತೆಗೆ ಗ್ಯಾರಂಟಿ ಯೋಜನೆಗಳು ಹಾಗೂ ಸರ್ಕಾರದ ಇನ್ನಿತರ ಜನಪರ ಯೋಜನೆಗಳ ಸಮರ್ಪಕ ಉಸ್ತುವಾರಿ ಮತ್ತು ಅನುಷ್ಠಾನದ ಮೇಲ್ವಿಚಾರಣೆ. ಇವೆಲ್ಲದರ ಜೊತೆಗೆ ನೂತನ ಮುಖ್ಯಮಂತ್ರಿಗೆ ತಮ್ಮ ಆಡಳಿತಾತ್ಮಕ ಅನುಭವದಿಂದ ಪರಿಣಾಮಕಾರಿಯಾದಂತ ಜನಪರ ಸಲಹೆ ನೀಡುವುದು ಮತ್ತು ಮುಖ್ಯವಾಗಿ ನೀತಿ ನಿರೂಪಣೆ ವಿಚಾರದಲ್ಲಿ  ರಾಜ್ಯದ ಸಮಗ್ರ ಜನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುನ್ನಡೆಯಲು ಬೇಕಾದ ಸಲಹೆ ನೀಡುವುದು ಅವರ ಜವಾಬ್ದಾರಿಯಾಗಲಿದೆ.
ಬಿದರಗೋಡು ಶ್ರೀಧರ್ ಲೋಕೋಪಯೋಗಿ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ, ತೀರ್ಥಹಳ್ಳಿ ತುಂಗಾ ಕಾಲೇಜು ನಿವೃತ್ತ ಪ್ರಾಶುಪಾಲ ಬಿ.ಎಸ್.ನಾಗರಾಜ್  ಅವರ ಸಹೋದರ. ಸಜ್ಜನ ರಾಜಕಾರಣಿ, ತೀರ್ಥಹಳ್ಳಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಬಳ ಶಚಿಂದ್ರ ಹೆಗಡೆ ಶ್ರೀಧರ್ ರವರ ಸೋದರಳಿಯ.
ತೀರ್ಥಹಳ್ಳಿಯಲ್ಲಿ ಶ್ರೀಧರ್ ಆಯ್ಕೆ ಸಂತೋಷ ಮೂಡಿಸಿದ್ದು ಕ್ಷೇತ್ರಕ್ಕೆ ಯಾವುದಾದರು ಮಹತ್ವದ ಜನಪರ ಕೊಡುಗೆಯ ನಿರೀಕ್ಷೆ ಉಂಟಾಗಿದೆ.
ಅಂದ ಹಾಗೆ ಕೆಲ ದಿನಗಳ ಹಿಂದೆ ಶ್ರೀಧರ್ ಕುರಿತು 'ನೆಲದ ಧ್ವನಿ' ಲೇಖನ ಪ್ರಕಟಣೆ ಮಾಡಿದಾಗ ರಾಜ್ಯದಾದ್ಯಂತ ಒಂದು ಲಕ್ಷದ ಎಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದರಲ್ಲದೆ ಅವರಿಂದ ರಚನಾತ್ಮಕ ಸಹಕಾರ ಪಡೆದುಕೊಂಡ ಅನೇಕರು ಶ್ರೀಧರ್ ಅವರ ಸಜ್ಜನಿಕೆ ಮತ್ತು ಸರಳತೆಯನ್ನು ಸ್ಮರಿಸಿಕೊಂಡಿದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post