ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಪಡೆ ಅಸ್ತಿತ್ವಕ್ಕೆ..
ಪಟ್ಟಣ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕಾಣಿಸಿಕೊಂಡ ಅಸಮಾಧಾನದ ಹೊಗೆ ಭುಗಿಲಾಗುವ ಸೂಚನೆ ಕಾಣಿಸಿಕೊಂಡಿದೆ. ಬುಧವಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸುದ್ದಿಗೋಷ್ಠಿ ನಡೆಸಿ ಪಟ್ಟಣ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ನಡೆದ ಪ್ರಹಸನಗಳ ಕುರಿತು ಸ್ವಪಕ್ಷಿಯರು ಮತ್ತು ಪರೋಕ್ಷವಾಗಿ ಬಿಜೆಪಿಯ ಓರ್ವ ಮುಖಂಡನ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಮೋಸಗಾರರು ಎಂದು ಕುಟುಕಿದ್ದರು.
ಜೊತೆಗೆ ಪ್ರಹಸನದ ಹಿಂದೆ ಲಕ್ಷಾಂತರ ರೂಪಾಯಿಗಳ ಲಂಚದ ಆಮಿಷ ಕೆಲಸ ಮಾಡಿದೆ ಎಂಬ ಗಂಭೀರ ಆರೋಪ ಕೂಡ ಮಾಡಿದ್ದರು. ಎಲ್ಲ ಬೆಳವಣಿಗೆಗಳ ಹಿಂದೆ ಏಕಾಏಕಿ ಭಿನ್ನರು ನಿಷ್ಠಾವಂತರ ಹೆಸರಲ್ಲಿ ಸೆಡ್ಡು ಹೊಡೆದಿರುವುದು ಕುತೂಹಲ ಹುಟ್ಟಿಸಿದೆ. ಮಾರ್ಕೆಟ್ ರಸ್ತೆಯ ಕೆಬಿಎಸ್ ಸಭಾಂಗಣದಲ್ಲಿ ಅಸಮಾಧಾನಿತರ ಸಭೆ ನಡೆಯಲಿದೆ. ಸಭೆಯಲ್ಲಿ ಎಷ್ಟು ಜನ ಅಸಮಾಧಾನಿತ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.