ಬ್ಯಾರಿ ಸಾಹಿತ್ಯ
ಕಮ್ಮಟ ಏರ್ಪಡಿಸಲು ಚಿಂತನೆ
ಜನವರಿ 24, 30,
31 ಮತ್ತು ಫೆಬ್ರವರಿ 1 ರಂದು ವಿವಿಧ ಕಾರ್ಯಕ್ರಮ
1976 ರಲ್ಲಿ ಆರಂಭವಾದ
ಮುಸ್ಲಿಂ ಎಜುಕೇಷನ್ ಸೊಸೈಟಿ ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಮುದಾಯದಲ್ಲಿ ಧಾರ್ಮಿಕ
ಹಾಗೂ ಶೈಕ್ಷಣಿಕ ಮೌಲ್ಯಗಳನ್ನು ಹರಡಲು ಆರಂಭಗೊಂಡ ಸೊಸೈಟಿ ತನ್ನ ಉದ್ದೇಶದಲ್ಲಿ ಸಫಲತೆಯನ್ನು ಸಾಧಿಸಿದ
ತೃಪ್ತಿಯೊಂದಿಗೆ ಜನವರಿ 24, 30, 31 ಮತ್ತು ಫೆಬ್ರವರಿ 1 ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇಂದು ಏರ್ಪಡಿಸಿದ್ದ
ಸುದ್ದಿಗೋಷ್ಟಿಯಲ್ಲಿ ಜಲಾಲಿಯಾ ಸುನ್ನಿ ಜಾಮಿಯಾ ಮಸ್ಜಿದ್ ಮುಸ್ಲಿಂ ಎಜುಕೇಷನ್ ಸೊಸೈಟಿ ಅಧ್ಯಕ್ಷ
ಸುಲೇಮಾನ್ ಸಾಹೇಬ್ ಮಾತನಾಡಿ, ವಿದ್ಯೆಯ ಮಹತ್ವ ಹಾಗೂ ಅದರಿಂದ ದೊರಕುವ ಪ್ರಯೋಜನ ಹಾಗೂ ಉತ್ತಮ ನಾಗರೀಕರಾಗಿ
ರೂಪುಗೊಳ್ಳಲು ಧಾರ್ಮಿಕ ಮೌಲ್ಯಗಳ ಸೃಜನಶೀಲ ಅಳವಡಿಕೆ ಕುರಿತು ಅರಿವು ಮೂಡಿಸುವ ಪ್ರಯತ್ನದಿಂದ ಆರಂಭಗೊಂಡ
ಸೊಸೈಟಿ ಸಮುದಾಯದಲ್ಲಿ ಆತ್ಮವಿಶ್ವಾಸ ಬಿತ್ತಲು ಯಶಸ್ವಿಯಾಗಿದೆ. ಮಹಿಳೆಯರು ಕೂಡ ಉತ್ತಮ ಶಿಕ್ಷಣ ಪಡೆದು
ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದರು.
ಸುವರ್ಣ ಮಹೋತ್ಸವ
ಸಮಿತಿ ಅಧ್ಯಕ್ಷ ಡಿ.ಎಸ್.ಅಬ್ದುಲ್ ರೆಹಮಾನ್ ಮಾತನಾಡಿ, ಸಂಸ್ಥೆಯಿಂದ ಶಿಕ್ಷಣ ಪಡೆದ ಹಿರಿಯ ವಿದ್ಯಾರ್ಥಿಗಳು
ಉತ್ತಮ ಭವಿಷ್ಯವನ್ನು ಸೃಷ್ಟಿಸಿಕೊಂಡಿದ್ದಾರೆ. ದಾರ್ಮಿಕ, ಲೌಕಿಕ ಶಿಕ್ಷಣದಿಂದ ಸಹಬಾಳ್ವೆಯ ತತ್ವವನ್ನು
ಅನುಸರಿಸುತ್ತಿದ್ದಾರೆ. ಬ್ಯಾರಿ ಸಮುದಾಯ ಕನ್ನಡ ಸಾಹಿತ್ಯಕ್ಕೆ ಕೂಡ ಉತ್ತಮ ಕೊಡುಗೆಗಳನ್ನು ನೀಡಿದೆ.
ಮುಂದಿನ ದಿನಗಳಲ್ಲಿ ಬ್ಯಾರಿ ಸಾಹಿತ್ಯ ಕುರಿತಾದ ಸಾಹಿತ್ಯ ಕಮ್ಮಟಗಳನ್ನು ತೀರ್ಥಹಳ್ಳಿಯಲ್ಲಿ ಏರ್ಪಡಿಸಲು
ಪ್ರಯತ್ನಿಸಲಾಗುವುದು. ಎಲ್ಲಾ ಧರ್ಮಗಳು ಕೂಡ ಭಾರತೀಯ ಸಂಸ್ಕೃತಿಯ ಬೇರುಗಳನ್ನು ಬಲಪಡಿಸಲು ಪ್ರಮಾಣಿಕವಾಗಿ
ಶ್ರಮಿಸಿದೆ ಎಂದರು.
ಜಲಾಲಿಯಾ ಸುನ್ನಿ
ಜಾಮಿಯಾ ಮಸ್ಜಿದ್ ಆವರಣದಲ್ಲಿ 24 ರಂದು ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
30 ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ವಿಭಾಗದ ಜಿಲ್ಲಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್
ಮಾಣಿ ಸುವರ್ಣ ಸಂಚಿಕೆ ಬಿಡುಗಡೆ ಮತ್ತು ಮತ ಪ್ರವಚನ ನಡೆಸಿಕೊಡಲಿದ್ದಾರೆ.
31 ರಂದು ಸೌಹಾರ್ದ
ಸಂಗಮದಲ್ಲಿ ಗೌರಿಗದ್ದೆ ಗಾಂಧಿ ಸೇವಾ ಆಶ್ರಮದ ಅವಧೂತ ವಿನಯ್ ಗುರೂಜಿ, ಲೂರ್ದುಮಾತೆ ಚರ್ಚ್ ಫಾದರ್
ವಿರೇಶ್ ವಿಕ್ಟರ್ ಮೋರಸ್, ಮಂಗಳೂರು ಖತೀಬರು ಅಬ್ದುಲ್ ಅಝೀಝ್ ದಾರಿಮಿ, ಕರಾವಳಿ ಪ್ರದೇಶಾಭಿವೃದ್ಧಿ
ಮಂಡಳಿ ಅಧ್ಯಕ್ಷ ಎಂ.ಎಂ. ಗಫೂರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೊಕಟ್ಟೆ ಅಲ್ಮುಝೈನ್,
ಮುಖ್ಯ ಅತಿಥಿಗಳಾಗಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಎಂಎಡಿಬಿ ಅಧ್ಯಕ್ಷ
ಆರ್.ಎಂ.ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.
ಫೆಬ್ರವರಿ 1 ರಂದು ಗ್ರಾಂಡ್ ಅಜ್ಮೀರ್ ಮೌಲೀದ್ ಹಾಗೂ ಸ್ವಲಾತ್ ಕಾರ್ಯಕ್ರಮ ನಡೆಯಲಿದೆ ಎಂದು
ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ
ಜಲಾಲಿಯಾ ಸುನ್ನೀ ಜಾಮಿಯಾ ಮಸ್ಜಿದ್ ಖತೀಬ ಅಬೂಬಕ್ಕರ್ ಸಿದ್ದೀಖ್ ತಂಙಳ್, ಸುವರ್ಣ ಮಹೋತ್ಸವ
ಸಮಿತಿ ಅಧ್ಯಕ್ಷ ಡಿ.ಎಸ್.ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಅಬ್ದುಲ್ ಸಮದ್, ತನ್ವೀರ್ ಅಗಮ್ಮದ್,
ಷರೀಫ್ ಕೊಂಡ್ಲೂರು, ರಿಯಾಜ್ ಮುಂತಾದವರು ಇದ್ದರು.
