ಯಕ್ಷಗಾನದಲ್ಲಿ ಮುಖ್ಯಮಂತ್ರಿಯಾದ ಆರಗ ಜ್ಞಾನೇಂದ್ರ
ನೂರಾರು ಯಕ್ಷಪ್ರಿಯರಿಗೆ ರಸದೌತಣ
ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೇಕೊಪ್ಪ ಯಕ್ಷರಂಗದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಭೀಷ್ಮಾರ್ಜುನ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ಯಕ್ಷಗಾನ ಪ್ರಿಯರು ರಸದೌತಣ ನೀಡಿತು.
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಗಾನಸಿರಿಯಲ್ಲಿ ಮೂಡಿ ಬಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ. ರಮೇಶ್ ಆಚಾರ್ಯ ವಿರಚಿತ ಅಭಿನಂದನಾ ಪದ್ಯ ವಿಶೇಷವಾಗಿ ಪ್ರೇಕ್ಷಕರ ಮನತುಂಬುವಂತೆ ಮೂಡಿ ಬಂದಿದೆ.
ಗೃಹಸಚಿವರ ಸ್ವಭಾವ, ಶ್ರೇಷ್ಠತೆ, ಶುಭ ಹಾರೈಕೆ, ಜನಸಾಮಾನ್ಯರ ಪರವಾದ ಧ್ವನಿ ಮುಂತಾದ ವಿಷಯಗಳಿಂದ ಕೂಡಿರುವ ಯಕ್ಷಗಾನ ಪದ್ಯ ಗುಡ್ಡೇಕೊಪ್ಪದ ಶಾಲಾ ಆವರಣದ ಸುತ್ತ ಮೇಳೈಸಿತ್ತು. ಜನರು ಏಕಾಂತದಿಂದ ಕೇಳಿ ಸಿಳ್ಳೆ ಹಾಕಿ ಖುಷಿ ಪಟ್ಟರು.
ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯ, ರೋಹಿತ್ ಉಚ್ಚಿಲ, ಬಡಗು ಕು.ರಕ್ಷಾ ಹೆಗಡೆ, ಎನ್.ಜಿ.ಹೆಗಡೆ, ಶ್ರೀಕಾಂತ್ ಶೆಟ್ಟಿ ಅರ್ಥದಾರಿಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ. ಪ್ರಭಾಕರ ಜೋಷಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಕೆ.ರಮೇಶ್ ಆಚಾರ್ಯ, ಯಕ್ಷಶೀರೋಮಣಿ ಉಜಿರೆ ಅಶೋಕ್ ಭಟ್, ಯಕ್ಷಕವಿ ಪವನ್ ಕಿರಣಕೆರೆ ಭಾಗವಹಿಸಿದ್ದರು.
ಗೃಹಸಚಿವ ಆರಗ ಜ್ಞಾನೇಂದ್ರ ಅತಿಥಿಗಳಿಗೆ ಸನ್ಮಾನಿಸಿ ಮಾತನಾಡಿ, ಬಾಲ್ಯದಿಂದಲೂ ಯಕ್ಷಗಾನದ ಗೀಳು ನನಗೆ ಇತ್ತು. ಯಕ್ಷಗಾನ ನೋಡುವುದಕ್ಕಾಗಿ ತಂಡೋಪ ತಂಡವಾಗಿ ಹೋಗುತ್ತಿದ್ದೆವು. ಯಕ್ಷಗಾನದಲ್ಲಿ ಬಳಕೆಯಾಗುವ ಕನ್ನಡದ ಪದಗಳಿಗೆ ಎಷ್ಟೊಂದು ಅರ್ಥವಿದೆ. ಅಷ್ಟು ಸರಾಗವಾಗಿ ಸಲೀಸಾಗಿ ಕನ್ನಡವನ್ನು ಹೇಗೆ ಹೇಳಲು ಸಾಧ್ಯವಾಗುತ್ತದೆ ಎಂದು ಆಶ್ಚರ್ಯವಾಗುತ್ತದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಯಕ್ಷಗಾನ ತಾಳ ಮದ್ದಲೆ ಆಯೋಜನೆ ಇನ್ನಷ್ಟು ಸಂಭ್ರಮ ಹೆಚ್ಚಿಸಿದೆ. ಮತ್ತೊಮ್ಮೆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುವ ಸೌಭಾಗ್ಯ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಆರಗ ಜ್ಞಾನೇಂದ್ರರ ಕುರಿತು ಎ.ಕೆ. ರಮೇಶ್ ಆಚಾರ್ಯ ರಚಿಸಿರುವ ಯಕ್ಷಗಾನ ಪದ್ಯ
ಸಾರ ಸದ್ಗುಣರಾಲಿಸಿಯೇ ಆರಗ ಜ್ಞಾನೇಂದ್ರರೊಂದಿನಿಯೇ...
ಮೀರಿದುತ್ಸಾಹದಲಿ ಶ್ರಮಿಪರು ಗೃಹಸಚಿವರಾಗಿ...
ಮೆರೆಯುತಿಹ ಕರ್ನಾಟಕದೊಳ್ ಪರಶುರಾಮನ ಪಾಪ ಕಳೆದಿಹ ಪರಮ ಪಾವನ ನೆಲದಿ...
ಜನಿಸಿದರು ನಮ್ಮ ಜ್ಞಾನೇಂದ್ರ...
ತೀರ್ಥಹಳ್ಳಿಯ ಘನತೆ ಹೆಚ್ಚಿಸಿ ಆರ್ಥರೊಂದಿಗೆ ರಕ್ಷಣೆ ನೀಡುತಾ...
ಸ್ವಾರ್ಥವ ಮರೆತಿಹ ಯೋಗ್ಯತಾ ಪುರುಷ...
ನಮ್ಮಯ ಆರಗ ಜ್ಞಾನೇಂದ್ರ...
ಮುಂದೆ ಕರ್ನಾಟಕ ಮುಖ್ಯಮಂತ್ರಿಗಳಾಗಿ....
ಕುಂದು ಕೊರತೆಯ ನೀಗುತಾ...
ಚೆಂದದಿ ಬಳಿರಿ ಮುಂದು ಆನಂದದಿ...
ಇಂದು ನಿಮಗೆ ನಮನ...
ಯಕ್ಷಗಾನದ ಆಟ ಕೂಟಗಳ ನಿಷ್ಠೆಯಿಂದಲಿ ವೀಕ್ಷಿಸುತ್ತಾ...
ಶ್ರೇಷ್ಠ ಮನುಜರೇ ಮಾಗಿಸುವರು ನಮ್ಮ ಜ್ಞಾನೇಂದ್ರ....
ಆರಗ ಜ್ಞಾನೇಂದ್ರ...