ಜಿಲ್ಲಾಧಿಕಾರಿ ಗಮನದ
ಸೆಳೆದ ತೀರ್ಥಹಳ್ಳಿ ಹುಡುಗರು
ಮೆಚ್ಚುಗೆಯೊಂದಿಗೆ
ಪ್ರಥಮ ಸ್ಥಾನಕ್ಕೆ ಆಯ್ಕೆ
ಎದುರಾಳಿಗಳಿಂದಲೂ ಅಭಿನಂದನೆ
ಕುರುವಳ್ಳಿಯ ಶಿಲ್ಪಕಲಾ ಕೇಂದ್ರ ಹಾಗೂ ಉತ್ಸಾಹಿ ಯುವಕರ ತಂಡ ನಿರ್ಮಾಣ ಮಾಡಿರುವ ಶಿವಮೊಗ್ಗ ಸ್ಮಾರ್ಟ್ ಸಿಟಿ ಸ್ಥಬ್ದಚಿತ್ರಕ್ಕೆ ಪ್ರಥಮ ಸ್ಥಾನ ದೊರೆತಿದೆ. ಈ ಸ್ಪರ್ಧೆಯಲ್ಲಿ ಪ್ರವಾಸೋದ್ಯಮ ಇಲಾಖೆ, ಸ್ವಚ್ಚ ಭಾರತ್ ಮಿಷನ್, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ, ಶಿವಮೊಗ್ಗ ಮಹಾನಗರ ಪಾಲಿಕೆ, ಕೆಎಸ್ಆರ್ಟಿಸಿ, ಅರಣ್ಯ ಇಲಾಖೆ ಮುಂತಾದ ಇಲಾಖೆಗಳಿಂದ 13ಕ್ಕೂ ಹೆಚ್ಚು ಸ್ಥಬ್ದಚಿತ್ರಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ತೀರ್ಥಹಳ್ಳಿ ಕುರುವಳ್ಳಿ ಶಿಲ್ಪಕಲಾ ಕೇಂದ್ರದ ಶಿಲ್ಪಿ ಜಗದೀಶ್ ಎಂ.ಬಿ., ಮಣಿಕಂಠ, ಪತ್ರಕರ್ತ ನಿರಂಜನ ವಿ, ಚಿತ್ರಕಲಾವಿದರಾದ ಸುಭಾಷ್ ಕುಲಾಲ್, ಭರತ್ ಕೆ ಹೂಗಾರ್ ಸೇರಿಕೊಂಡು ಅತ್ಯಂತ ಆಕರ್ಷಕ ಹಾಗೂ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಶಿವಮೊಗ್ಗ ಸ್ಮಾರ್ಟ್ ಸಿಟಿ ಸ್ಥಬ್ದಚಿತ್ರ ಎಲ್ಲರ ಮೆಚ್ಚುಗೆಯೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ಶಿವಮೊಗ್ಗದ ಶಿವಪ್ಪನಾಯಕ ಅರಮನೆ, ಮೈನ್ ಮಿಡಲ್ ಸ್ಕೂಲ್, ಸೈನಿಕ ಪಾರ್ಕ್, ಸ್ಮಾರ್ಟ್ ಕ್ಲಾಸ್, ಐಸಿಸಿಸಿ, ಸ್ಮಾರ್ಟ್ ರಸ್ತೆ, ಸ್ಮಾರ್ಟ್ ಪೋಲ್ ಹಾಗೂ ಸಿಸಿಟಿವಿ ಅಂಶಗಳನ್ನು ವಿಶೇಷ ಆಸಕ್ತಿಯಿಂದ ಗಮನಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅಂತಿಮವಾಗಿ ಮೊದಲ ಸ್ಥಾನಕ್ಕೆ ಆರಿಸಿದ್ದಾರಲ್ಲದೇ ಈ ಯುವ ಕಲಾವಿದರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಸ್ಥಬ್ದಚಿತ್ರವನ್ನು ಶಿವಪ್ಪನಾಯಕ ಅರಮನೆಯಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುವುದು ಎಂದು ತಿಳಿದು ಬಂದಿದೆ.






