ಶರಾವತಿ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ಒಂದು ವರ್ಷ ಕಾಲಮಿತಿ
ವಿಶೇಷ ಜಿಲ್ಲಾಧಿಕಾರಿ ನೇತೃತ್ವದ ತಂಡ ರಚನೆ
ಶರಾವತಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ವಿಶೇಷ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯನ್ನು ರಚನೆ ಮಾಡಿಲಾಗಿದೆ. ಒಂದು ವರ್ಷದೊಳಗೆ ಸಂತ್ರಸ್ತರ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ತಾಲೂಕು ಶರಾವತಿ, ಚಕ್ರ ಸಂತ್ರಸ್ತರಿಗೆ ಮೀಸಲಿಟ್ಟಿರುವ 2033 ಎಕರೆ ಕಂದಾಯ ಜಮೀನಿನ ಬಗ್ಗೆ ಚರ್ಚೆಯಾಯಿತು.
ಮೇ ಅಂತ್ಯದೊಳಗೆ ಜಾಗದಲ್ಲಿ ಅನುಭವದಲ್ಲಿರುವ ಮೂಲ ಸಂತ್ರಸ್ತರು ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡಿರುವವರು, ಯಾವ ದಾಖಲೆಯೂ ಇಲ್ಲದೆ ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿರುವವರ ಸಮಗ್ರ ಮಾಹಿತಿಯನ್ನು ತಯಾರಿ ಮಾಡಲು ಸಭೆ ಸೂಚಿಸಿದೆ.
ಜಿಲ್ಲೆಯ ಶಿವಮೊಗ್ಗ, ಹೊಸನಗರ, ಸಾಗರ ತೀರ್ಥಹಳ್ಳಿ ಹಾಗೂ ಸೊರಬ ತಾಲೂಕಿನಲ್ಲಿರುವ ಶರಾವತಿ ಸಂತ್ರಸ್ತರ ಭೂಮಿಯನ್ನು ಸರ್ವೆ ಮಾಡಿ ಅಲ್ಲಿನ ಸರ್ಕಾರ ಮತ್ತು ನ್ಯಾಯಾಲಯದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಸಮಿತಿ ರಚನೆ ಮಾಡಬೇಕೆಂದು ಸಚಿವರು ಸೂಚನೆ ನೀಡಿದ್ದಾರೆ.
ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ಜಿಲ್ಲಾಧಿಕಾರಿಗಳ ಡಾ.ಸೆಲ್ವಮಣಿ, ಎಡಿಸಿ ನಾಗೇಂದ್ರ ಹೊನ್ನಳ್ಳಿ, ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಾಲೇಕೊಪ್ಪ ರಾಮಚಂದ್ರ, ಹಣಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋಧ, ಉಪಾಧ್ಯಕ್ಷರಾದ ಅಶೋಕ, ಸದಸ್ಯರಾದ ರಾಘವೇಂದ್ರ ಮತ್ತಿತರು ಭಾಗವಹಿಸಿದ್ದರು
ವಿಶೇಷ ಜಿಲ್ಲಾಧಿಕಾರಿ ತಂಡ
ಶರಾವತಿ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮಕ್ಕೆ ಸರ್ಕಾರ ವಿಶೇಷ ಜಿಲ್ಲಾಧಿಕಾರಿ ನೇತೃತ್ವದ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ. ವಿಶೇಷ ಜಿಲ್ಲಾಧಿಕಾರಿ ನೇಮಕವಾಗುವ ತನಕ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಜವಾಬ್ದಾರಿ ನಿರ್ವಹಿಸಲು ಸೂಚಿಸಲಾಗಿದೆ. ಸಹಾಯಕ ಅರಣ್ಯ ಅಧಿಕಾರಿ ಎರಡು ಮಂದಿ ಸರ್ವೆಯರ್ ಗಳು ಹಾಗೂ ಒಬ್ಬ ದ್ವಿತೀಯ ದರ್ಜೆ ಸಹಾಯಕ ಹುದ್ದೆಯನ್ನು ಸೃಷ್ಠಿಸಿ ಸರ್ಕಾರ ಆದೇಶ ಹೊರಡಿಸಿದೆ. ಒಂದು ವರ್ಷದ ಅವಧಿಯ ಕಾಲಮಿತಿಯಲ್ಲಿ ಸಮಿತಿಯು ಇಡೀ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಯಧುಕುಮಾರ್ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
Tags:
ಮುಳುಗಡೆ ಸಂತ್ರಸ್ತರು