ಬಿಜೆಪಿ ಯುವ ಮೋರ್ಚಾ ಪ್ರಶ್ನೆ

ತೀರ್ಥಹಳ್ಳಿಯಲ್ಲಿ  ಶವ ಶೀತಲೀಕರಣಕ್ಕೆ ಹಣ ವಸೂಲಿ – ಯಾರು ಆ ಕಾಂಗ್ರೆಸ್ ನಾಯಕರ "ಎಡಗೈ"?
ತೀರ್ಥಹಳ್ಳಿ ಪ್ರಮುಖ ಕಾಂಗ್ರೆಸ್ ನಾಯಕರೊಬ್ಬರ ಆಪ್ತ ವ್ಯಕ್ತಿಯೊಬ್ಬ ಶವ ಶೀತಲಿಕರಣ ಯಂತ್ರದ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದಾನೆ ಎಂಬ ಆರೋಪವನ್ನು ಬಿಜೆಪಿ ಯುವ ಮೋರ್ಚಾ ಮಾಡಿದ್ದು ಆ ಕುರಿತು ಸಾರ್ವಜನಿಕ ಹೇಳಿಕೆ ನೀಡಿದೆ ಅದರ ವಿವರ ಹೀಗಿದೆ.

ತೀರ್ಥಹಳ್ಳಿಯ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಈಗಾಗಲೇ 2 ಶವ ಶೀತಲೀಕರಣ ಘಟಕವಿದ್ದು, ಹೆಚ್ಚುವರಿ ವ್ಯವಸ್ಥೆಗೆ 2024 ರಲ್ಲಿ ಪಟ್ಟಣ ಪಂಚಾಯತ್ ಸದಸ್ಯರ ಅನುಮೋದನೆ ಮೇರೆಗೆ ಮಂಜೂರಾಗಿ, ಇದೀಗ ಟೆಂಡರ್ ಪ್ರಕ್ರಿಯೆಗೆ ಕರೆಯಲಾಗಿದೆ.
ಆದರೆ ಈಗ ಅದೇ ಶವ ಶೀತಲೀಕರಣದ ಹೆಸರಿನಲ್ಲಿ ಮತ್ತೊಮ್ಮೆ ಹಣ ಸಂಗ್ರಹಣೆ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಒಂದು ಸಂಘಟನೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ನಡೆಯುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಈ ಸಂಘಟನೆಯ ಹಿಂದೆ ತೀರ್ಥಹಳ್ಳಿಯ ಪ್ರಭಾವಿ ನಾಯಕರ "ಎಡಗೈ" ಆಪ್ತ ಕಾಂಗ್ರೆಸ್ ನ ಯುವ ಪುಡಾರಿ ವ್ಯಕ್ತಿಯೊಬ್ಬ ವಸೂಲಿಗೆಂದೆ ಸೃಷ್ಟಿಸಿಕೊಂಡ ಒಂದು ಸಂಘಟನೆಯ ಹೆಸರಲ್ಲಿ ವಸೂಲಿ ನಡೆಸುತ್ತಿದ್ದಾನೆ ಆರೋಪವೂ ಕೇಳಿಬರುತ್ತಿದೆ.

ಇಲ್ಲಿ ಸಾರ್ವಜನಿಕರು ಕೇಳುತ್ತಿರುವ ಪ್ರಮುಖ ಪ್ರಶ್ನೆ ಏನೆಂದರೆ —2024 ರಲ್ಲೇ ಮಂಜೂರಾಗಿ, ಸರ್ಕಾರಿ ವ್ಯವಸ್ಥೆಯಲ್ಲೇ ಶವ ಶೀತಲೀಕರಣ ಘಟಕವಾಗುವಾಗ , ಮತ್ತೆ ಅದೇ ಕಾರಣ ಹೇಳಿ ಹಣ ವಸೂಲಿ ಮಾಡುವ ಅಗತ್ಯವೇನು?

ಹಾಗೆ ಶಿಮುಲ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರ ಬಳಿ ಕೂಡ ಹಣ ಸಂಗ್ರಹ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಈ ವಸೂಲಿ ನಿಜವಾಗಿಯೂ ಸಾರ್ವಜನಿಕ ಸೇವೆಯ ಉದ್ದೇಶದಿಂದ ನಡೆಯುತ್ತಿದೆಯೇ, ಅಥವಾ ಕೆಲವರ ವೈಯಕ್ತಿಕ ಲಾಭಕ್ಕಾಗಿ ನಡೆಯುತ್ತಿರುವುದೇ ಎಂಬುದನ್ನು ಸಂಬಂಧಪಟ್ಟವರು ಸ್ಪಷ್ಟಪಡಿಸಬೇಕಾಗಿದೆ. ಜೊತೆಗೆ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಕರ್ನಾಟಕ ಸರ್ಕಾರ ಈ ವಿಷಯದಲ್ಲಿ ತಮ್ಮ ನಿಲುವು ಏನು ಎಂಬುದನ್ನೂ ಸಾರ್ವಜನಿಕರಿಗೆ ತಿಳಿಸಬೇಕಾಗಿದೆ.

ಸಾರ್ವಜನಿಕರ ಹೆಸರಿನಲ್ಲಿ, ಸಾರ್ವಜನಿಕ ಸೇವೆಯ ಹೆಸರಿನಲ್ಲಿ ಹಣ ಸಂಗ್ರಹಣೆ ನಡೆಯುವಾಗ ಅದರಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಇಲ್ಲದಿದ್ದರೆ ಇದು ಜನರಲ್ಲಿ ಅನುಮಾನಗಳನ್ನು ಹುಟ್ಟಿಸುವುದು ಸಹಜ. ತೀರ್ಥಹಳ್ಳಿಯ ಜನತೆಗೆ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಾಗಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post