ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಆರ್ಥಿಕತೆಗೆ ಸಹಕಾರಿ - ಆರಗ ಜ್ಞಾನೇಂದ್ರ
ತೀರ್ಥಹಳ್ಳಿಯ ಎಪಿಎಂಸಿ
ಆವರಣದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೂತನ ಶಾಖೆಯನ್ನು ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್
ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಗುರುವಾರ ಉದ್ಘಾಟಿಸಿ ಅವರು ಮಾತನಾಡಿ, ಮೈಕ್ರೋ ಫೈನಾನ್ಸ್ ಹಣಕಾಸು
ಸಂಸ್ಥೆಗಳಿಂದ ಮಾರುಕಟ್ಟೆಯಲ್ಲಿ ಆರ್ಥಿಕ ವಹಿವಾಟು ನಿರ್ಭಿತಿಯಿಂದ ನಡೆಯುತ್ತದೆ. ಡಿಸಿಸಿ ಬ್ಯಾಂಕ್
ಹೊಸ ಶಾಖೆಯಿಂದ ಮಂಡಿ ವರ್ತಕರು, ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕೃಷಿ ಉತ್ಪನ್ನ ಮಾರಾಟ
ಮಾಡುವ ರೈತರು ಚೆಕ್ ನೀಡಿ ನೇರವಾಗಿ ಹಣ ಪಡೆಯಲು ಸಹಾಯವಾಗುತ್ತದೆ. ಭಾರತ 3ನೇ ಅತಿದೊಡ್ಡ ಆರ್ಥಿಕ
ಶಕ್ತಿಯಾಗಿ ಬೆಳೆಯುತ್ತಿರುವ ಹಿಂದೆ ಇಂತಹ ಅನೇಕ ಸಂಸ್ಥೆಗಳ ಯೋಗದಾನವಿದೆ. ಕೇಂದ್ರ ಸರ್ಕಾರದಿಂದ ಸಹಕಾರ
ಸಂಸ್ಥೆಗಳನ್ನು ಕಟ್ಟುವ ನಿಟ್ಟಿನಲ್ಲಿ ಅನೇಕ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಕೃಷಿ ಇಲಾಖೆಯಿಂದ ಬೇರ್ಪಡಿಸಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸಲಾಗಿದೆ. ಹಣಕಾಸು ಸಂಸ್ಥೆಗಳನ್ನು ಸದೃಢ
ಪಡಿಸುವಲ್ಲಿ ಶ್ರಮಿಸುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್
ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಪಟ್ಟಣದ ಆಜಾದ್ ರಸ್ತೆಯ ಶಾಖೆ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.
ಅಲ್ಲಿನ ಒತ್ತಡ ತಗ್ಗಿಸುವುದು, ವಾಹನ ನಿಲುಗಡೆ, ಖಾತೆ ಬಳಕೆದಾರರ ಪ್ರಮಾಣ ಹಿತ ದೃಷ್ಟಿಯಿಂದ ಎಪಿಎಂಸಿ
ಆವರಣದಲ್ಲಿ ಶಾಖೆ ಆರಂಭಿಸಲಾಗಿದೆ. ಗ್ರಾಹಕರಿಗೆ ತ್ವರಿತ ಸೇವೆ ಒದಗಿಸಲು ನೂತನ ಶಾಖೆ ಸಹಕಾರಿಯಾಗಿದೆ
ಎಂದರು.
ಶಿಮುಲ್ ಅಧ್ಯಕ್ಷ
ವಿದ್ಯಾಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್, ಪರಮೇಶ್ವರಪ್ಪ, ಪಟ್ಟಣ ಪಂಚಾಯಿತಿ
ಅಧ್ಯಕ್ಷ ರತ್ನಾಕರ ಶೆಟ್ಟಿ, ಪ್ರಮುಖರಾದ ಮಹಾಬಲೇಶ್ವರ ಹೆಗಡೆ, ರೇವತಿ ಅನಂತಮೂರ್ತಿ, ಸುಷ್ಮ ಸಂಜಯ್,
ಜ್ಯೋತಿ ಮೋಹನ್, ಸುಶೀಲ ಶೆಟ್ಟಿ, ಅಜಿತ್ ಎಚ್.ವಿ. ಮತ್ತಿತರರು ಇದ್ದರು.
