ನಂದನ್‌ ಕುಪ್ಪಳಿ ಎರಡನೇ ಕವನ ಸಂಕಲನ ಬಿಡುಗಡೆ

ʼನೀಲಿ ಹೂವಿನ ನೆನಪುಗಳುʼ 21ಕ್ಕೆ ಬಿಡುಗಡೆ
“ಪುಸ್ತಕ ಬಿಡುಗಡೆಗೆ ನಂಕು ಮಾತ್ರ ಇಲ್ಲ”

ಪ್ರಯೋಗಶೀಲ ಯುವ ಕವಿ, ಎಲ್ಲರು ಪ್ರೀತಿಯಿಂದ ನಂಕು ಎಂದೇ ಕರೆಯುವ ನಂದನ ಕುಪ್ಪಳಿ ಬರೆದ ಎರಡನೇ ಕವನ ಸಂಕಲನ "ನೀಲಿ ಹೂವಿನ ನೆನಪುಗಳು" ಪುಸ್ತಕ ಬಿಡುಗಡೆ ಸಮಾರಂಭ ಡಿಸೆಂಬರ್‌ 21ರ ಭಾನುವಾರ ಬೆಳಿಗ್ಗೆ ಕುಪ್ಪಳಿಯ ಅವರ ಮನೆಯಂಗಳದಲ್ಲಿ ಬಿಡುಗಡೆಯಾಗಲಿದೆ.

ಸುವ್ವಿ ಪಬ್ಲಿಕೇಷನ್ಸ್ ಶಿಕಾರಿಪುರ, ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ, ನಂದನ್ ಕುಪ್ಪಳಿ ಅವರ ಸ್ನೇಹಿತರು ಮತ್ತು ಕುಟುಂಬದವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಗಣಪತಿ ಉತ್ತುಂಗ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಪುಸ್ತಕದ ಕುರಿತು ಬರಹಗಾರ, ಸಾಮಾಜಿಕ ಹೋರಾಟಗಾರ ನೆಂಪೆ ದೇವರಾಜ್ ಮಾತನಾಡಲಿದ್ದಾರೆ.

ಅಧ್ಯಕ್ಷತೆಯನ್ನು ಶಿವಮೊಗ್ಗದ ನಿವೃತ್ತ ಪ್ರಾಂಶುಪಾಲ, ಸಾಹಿತಿ ಡಾ.ಹೆಚ್.ಟಿ. ಕೃಷ್ಣಮೂರ್ತಿ ವಹಿಸಲಿದ್ದಾರೆ. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಂದನ್ ತಂದೆ ರಾಮಸ್ವಾಮಿ, ರೇಖಾಚಿತ್ರ ಕಲಾವಿದ ರಾಂಚಂದ್ರ ಕೊಪ್ಪಲು, ರಾಮನಗರದ ಸಹ ಪ್ರಾಧ್ಯಾಪಕ ಡಾ.ಶಿವಲಿಂಗೇ ಗೌಡ ಡಿ ಹಾಗೂ ಪ್ರಕಾಶಕ ಸುನೀಲ್ ಕುಮಾರ್ ಬಿ.ಎನ್. ಶಿಕಾರಿಪುರ ಉಪಸ್ಥಿತರಿರುತ್ತಾರೆ.

“ಭಾವರೇಖೆ” ಎಂಬ ಕವನ ಸಂಕಲವನ್ನು ಹೊರ ತಂದಿದ್ದ ಅವನು ಅದಾಗಲೇ ಎಂಎನ್ಡಿ ಕಾಯಿಲೆಗೆ ತುತ್ತಾಗಿ ದೈಹಿಕ ಸ್ವಾಧೀನ ಕಳೆದುಕೊಂಡಿದ್ದ. ಆತ ಸೆಪ್ಟೆಂಬರ್‌ 21 ರಂದು ಸಾಯುವಾಗ ವಯಸ್ಸು ಕೇವಲ 33. ಬಿಸಿ ರಕ್ತದ ಯುವಕನ ಕಣ್ಣುಗಳಲ್ಲಿ ಅದೆಂತಹ ಜೀವನೋತ್ಸಾಹ ಇತ್ತೆಂದರೆ ಸಾಯುತ್ತೇನೆ ಎಂಬ ಸುದ್ದಿ ತಿಳಿದಾಗಲು ಅದಕ್ಕೆ ಮರುಗಿರಲಿಲ್ಲ. ಸಾವು ನಿಶ್ಚಿತ ಎಂಬ ದೃಢ ನಿರ್ಧಾರದಲ್ಲಿಯೇ ಹಾಸಿಗೆ ಹಿಡಿದಾಗಲೂ ತಾನು ಮತ್ತೊಂದು ಕವನ ಸಂಕಲನ ಹೊರ ತರುತ್ತೇನೆ ಎಂದು ಉಸಿರಾಡುತ್ತಿದ್ದ. ಆತ ಸಾಯುವ ಹೊತ್ತಿಗೆ ಪುಸ್ತಕವನ್ನು ಚೆಂದವಾಗಿ ತಯಾರಿಸಿ ಅದರ ಅಚ್ಚುಕಟ್ಟು ಲೇಔಟ್‌ ಸಿದ್ಧಪಡಿಸಿ ಮುದ್ರಣಕ್ಕೂ ಕಳಿಸಿಯಾಗಿತ್ತು. ಇನ್ನೇನು ಒಂದು ವಾರದಲ್ಲಿ ಪುಸ್ತಕ ಕೈ ಸೇರುತ್ತದೆ ಎಂಬ ದೃಢ ನಿರ್ಧಾರದಲ್ಲಿದ್ದ ನಂದನ್‌ ಅದೇಕೋ ಉಸಿರು ಚೆಲ್ಲಿಬಿಟ್ಟ. ಭಾನುವಾರ ಪುಸ್ತಕ ಬಿಡುಗಡೆಯಾಗಲಿದೆ. ಆದರೆ ನಂದನ್‌ ಮಾತ್ರ ವೇದಿಕೆಯಲ್ಲಿ ಇರುವುದಿಲ್ಲ. ಅವನ ನೆನಪು ಮಾತ್ರ ಹಸಿಯಾಗಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post