ಅಧ್ಯಕ್ಷ ಜಿ ಎಸ್ ನಾರಾಯಣ ರಾವ್ ದಕ್ಷತೆಗೆ ಪ್ರಶಸ್ತಿ ಗರಿ
ಕೋಣಂದೂರಿನಂತ ಗ್ರಾಮೀಣ ಭಾಗದಲ್ಲಿ ತೀರ್ಥಹಳ್ಳಿಯಲ್ಲಿಯೇ ಅತ್ಯುತ್ತಮ ಶಿಕ್ಷಣ ನೀಡುವ ಗುರಿಯೊಂದಿಗೆ ಆರಂಭ ಗೊಂಡ ಕೇಂದ್ರೀಯ ಪಠ್ಯಕ್ರಮದ ರಾಷ್ಟ್ರೀಯ ವಸತಿ ಶಾಲೆಗೆ ಶಿವಮೊಗ್ಗ ಜಿಲ್ಲೆಯ ಶಾಲೆಗಳ ಪೈಕಿ ನಂ. 1 ಶಾಲೆ ಸ್ಥಾನ ಲಭಿಸಿದೆ.
ಎಜುಕೇಶನ್ ಟುಡೇ ನಡೆಸಿದ ಸಮೀಕ್ಷೆಯಲ್ಲಿ ಡೇ ಕಮ್ ಬೋರ್ಡಿಂಗ್ ಸಿಟಿ ಶಾಲೆ ವಿಭಾಗದಲ್ಲಿ ಕೋಣಂದೂರಿನ ರಾಷ್ಟ್ರೀಯ ವಸತಿ ಶಾಲೆಗೆ ಜಿಲ್ಲೆಯ ನಂ.1 ಸ್ಥಾನ ಲಭಿಸಿದೆ. ಪತ್ರಿಕೆ ದೇಶದ ಪ್ರಮುಖ ಶಾಲೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತದೆ. ಐ.ಸಿ.ಎಸ್.ಈ. , ಸಿ.ಬಿ.ಎಸ್.ಈ ಮತ್ತು ರಾಜ್ಯ ಪಠ್ಯಕ್ರಮ ಆಧಾರಿತ 2167ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದು, ವಿದ್ಯಾಸಂಸ್ಥೆಯ ಗುಣಮಟ್ಟ, ಶಿಕ್ಷಕರ ತರಬೇತಿ, ಪಠ್ಯೇತರ ಚಟುವಟಿಕೆ, ಕ್ರೀಡಾ ಕ್ಷೇತ್ರದ ಸಾಧನೆ ಸೇರಿದಂತೆ 15 ಮಾನದಂಡಗಳ ಆಧಾರದ ಮೇಲೆ 400 ಕ್ಕೂ ಹೆಚ್ಚು ಶಾಲೆಗಳ ಪೈಕಿ ರಾಷ್ಟ್ರೀಯ ವಸತಿ ಶಾಲೆಗೆ ನಂ.1 ಸ್ಥಾನ ಸಿಕ್ಕಿದೆ. ಪೋಷಕರ ಅಭಿಪ್ರಾಯ ಮತ್ತು ಮತಗಳು, ಪತ್ರಿಕೆಯ ತಂಡದ ವಿಶ್ಲೇಷಣೆಯ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗಿದೆ.
ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಶಾಲೆಯ ಪ್ರಾಂಶುಪಾಲ ಕೆ.ಎಸ್.ವಾಸುದೇವ ಪ್ರಶಸ್ತಿ ಸ್ವೀಕರಿಸಿದರು. ಎಜುಕೇಷನ್ ಟುಡೇ ಸ್ಥಾಪಕ ಹಾಗೂ ನಿರ್ದೇಶಕ ಅನಿಲ್ ಶರ್ಮ, ಎನ್ತಾಬ್ ನಿರ್ದೇಶಕ ಷಾಜಿ ಥಾಮಸ್ ಇದ್ದರು. ಪ್ರಶಸ್ತಿಗೆ ಕಾರಣರಾದ ಪ್ರಾಂಶುಪಾಲರು, ಶಾಲಾ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅಭಿನಂದಿಸಿದೆ.
ರಾಷ್ಟೀಯ ಶಿಕ್ಷಣ ಸಂಸ್ಥೆ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಂತ ವಿಶ್ವಾಸರ್ಹ ಎನಿಸಿಕೊಂಡಿದೆ.
ತೀರ್ಥಹಳ್ಳಿಯ ಸಜ್ಜನ ರಾಜಕಾರಣಿ, ಸಹಕಾರಿ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹೊಸ ಆಲೋಚನೆಗಳೊಂದಿಗೆ ಗಮನ ಸೆಳೆಯುತ್ತಿದೆ.