ಅರಣ್ಯ ಇಲಾಖೆ ನಿರ್ಲಕ್ಷ್ಯ ಖಂಡನೀಯ
ಅರಣ್ಯ ಕಚೇರಿ ಮುಂಭಾಗ ಪ್ರತಿಭಟನೆಗೆ ಬೇಗುವಳ್ಳಿ ಕವಿರಾಜ್, ಮಧುರಾಜ್ ಹೆಗ್ಡೆ ಆಗ್ರಹ
ತೀರ್ಥಹಳ್ಳಿ ತಾಲ್ಲೂಕಿನ ಬೇಗುವಳ್ಳಿ ಭಾಗದಲ್ಲಿ ಕಾಡಾನೆ ಲೂಟಿ ಮಾಡುತ್ತಿದ್ದು ತಕ್ಷಣ ಅರಣ್ಯ ಇಲಾಖೆ ಆನೆಯನ್ನು ಸ್ಥಳಾಂತರಕ್ಕೆ ಮುಂದಾಗಬೇಕು. ನಿರ್ಲಕ್ಷ್ಯ ವಹಿಸಿದರೆ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಬೇಗುವಳ್ಳಿ ಕವಿರಾಜ್, ಬಿಜೆಪಿ ಕಾರ್ಯದರ್ಶಿ, ತೂದೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ತೂದೂರು ಮಧುರಾಜ್ ಹೆಗ್ಡೆ ಆಗ್ರಹಿಸಿದ್ದಾರೆ.
ಬೇಗುವಳ್ಳಿ ಭಾಗದಲ್ಲಿ ಆನೆ ಕಾಣಿಸಿಕೊಂಡಿದ್ದರು ಇದುವರೆಗೂ ಅರಣ್ಯ ಇಲಾಖೆ ಆನೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿಲ್ಲ. ನಿರ್ಲಕ್ಷ್ಯ ವಹಿಸಿದ್ದು ರೈತರ ಬೆಳೆ ನಷ್ಟವಾಗುತ್ತಿದೆ. ಈಗಾಗಲೇ ಅತೀವೃಷ್ಟಿಯಿಂದ ಇಳುವರಿಯಲ್ಲಿ ತೀವ್ರ ಇಳಿಮುಖವಾಗಿದ್ದು ಬೆಳೆ ಉಳಿಸಿಕೊಳ್ಳುವ ದೊಡ್ಡ ಸವಾಲು ಇದೆ. ಈ ನಡುವೆ ಕಾಡು ಪ್ರಾಣಿಗಳು ದಿನೆ ದಿನೆ ಹಾವಳಿ ನಡೆಸಿ ರೈತರ ಗದ್ದೆ, ತೋಟಗಳಿಗೆ ಹಾನಿ ಮಾಡುತ್ತಿದೆ. ಫಸಲು ಇನ್ನೇನು ಕೈ ಸೇರುತ್ತದೆ ಎಂಬ ಹೊತ್ತಿನಲ್ಲಿ ಇಂತಹ ಪ್ರಾಣಿಗಳ ಲೂಟಿ ರೈತಾಪಿ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ತಕ್ಷಣ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಆನೆಯನ್ನು ಸೆರೆ ಹಿಡಿದು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಬೇಗುವಳ್ಳಿ ಕವಿರಾಜ್, ತೂದೂರು ಮಧುರಾಜ್ ಹೆಗ್ಡೆ ಒತ್ತಾಯಿಸಿದ್ದಾರೆ.
