ಕಲ್ಲುಕೊಪ್ಪ ಹಾಲು ಉತ್ಪಾದಕರ ಸಂಘ ಯಶಸ್ವಿ ಸರ್ವ ಸದಸ್ಯರ ಸಭೆ

ಕರಕುಚ್ಚಿ ಲೋಕೇಶ್‌ ನೇತೃತ್ವದಲ್ಲಿ 4 ಲಕ್ಷದ ಸಮೀಪ ನಿವ್ವಳ ಲಾಭ
ಜಿಲ್ಲೆಯ ಉತ್ತಮ ಸಹಕಾರ ಸಂಘ ಗೌರವ

ಮಲೆನಾಡು ಭಾಗದಲ್ಲಿ ಅಡಿಕೆ ಕೃಷಿ ವ್ಯಾಪಕವಾಗಿ ಹೆಚ್ಚುತ್ತಿದೆ. ಆದರೆ ಒಂದೆ ಬೆಳೆಯನ್ನು ನಂಬಿಕೊಳ್ಳುವುದು ಆರ್ಥಿಕ ಸುರಕ್ಷತೆ ದೃಷ್ಟಿಯಿಂದ ಸಮಂಜಸವಲ್ಲ. ಉಪ ವೃತ್ತಿಗಳು ಅದರಲ್ಲೂ ಹೈನುಗಾರಿಕೆ ಅಡಿಕೆ ಹಾಗೂ ಇತರ ಬೆಳೆಗಳ ಕೃಷಿಗಾರಿಕೆಗೆ ಅತ್ಯಂತ ಪೂರಕ. ಹೈನುಗಾರಿಕೆಯನ್ನೆ ವೈಜ್ಞಾನಿಕವಾಗಿ ಮುಖ್ಯ ಕಸುಬು ಮಾಡಿಕೊಂಡು ಯಶಸ್ವಿಯಾದವರೂ ಇದ್ದಾರೆ. ಗುಣಮಟ್ಟದ ಹಾಲು ಉತ್ಪಾದಿಸಲು ಆಧುನಿಕ ತಂತ್ರಜ್ಞಾನವನ್ನು ಮತ್ತು ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಮತ್ತು ಶಿಮುಲ್‌ ನೀಡುತ್ತಿರುವ ನೆರವನ್ನು ಕೃಷಿಕರು ಬಳಸಿಕೊಳ್ಳಬೇಕು ಎಂದು ಡಾ.ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಹಾಲಿನ ಜೊತೆಗೆ ಜಾನುವಾರುಗಳ ಗೊಬ್ಬರ ಒಂದು ದೊಡ್ಡ ಮಾರುಕಟ್ಟೆಯಾಗಿ ಬೆಳೆದಿದೆ. ಹಾಗಾಗಿ ಹೈನುಗಾರಿಕೆ ಹಾಗೂ ಇತರ ಚಟುವಟಿಕೆಗಳಿಂದಲೂ ಕೃಷಿಕರು ಆರ್ಥಿಮ ಸ್ಥಿರತೆ ಕಂಡುಕೊಳ್ಳುವುದು ಸಾಧ್ಯ ಎಂದರು.

ಶಿಮುಲ್‌ ಅಧ್ಯಕ್ಷ ವಿದ್ಯಾಧರ್‌ ಮಾತನಾಡಿ, ಕಲ್ಲುಕೊಪ್ಪ ಹಾಲು ಉತ್ಪಾದಕರ ಸಂಘವು ಕೇವಲ 200 ಲೀಟರ್‌ ಹಾಲು ಉತ್ಪಾದನೆಯಿಂದ 1000 ಲೀಟರ್‌ ಹಾಲು ಉತ್ಪಾದನೆಯ ವರೆಗೆ ಬೆಳೆದು ನಿಂತಿರುವುದು ಗಮನಾರ್ಹ ಸಾಧನೆ. ಹೈನುಗಾರಿಕಾ ಚಟುವಟಿಕೆಗಳಿಗೆ ಶಿಮುಲ್‌ ವತಿಯಿಂದ ವಾರ್ಷಿಕ 35 ಕೋಟಿ ಸಬ್ಸಿಡಿ ನೀಡಲಾಗುತ್ತಿದೆ. ಸುಸ್ಥಿರ ಕೃಷಿಗೆ ಹೈನುಗಾರಿಕೆ ಅನಿವಾರ್ಯ ಎಂದರು.

ಸಂಘದ ಅಧ್ಯಕ್ಷ ಲೋಕೇಶ್‌ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಉತ್ತಮ ಸಹಕಾರ ಸಂಘವೆಂಬ ಪ್ರಶಸ್ತಿ ಮತ್ತು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಹಾಲು ಶೇಖರಿಸುವ ಸಂಘವೆಂಬ ಪ್ರಶಸ್ತಿ ಪಡೆದಿದೆ. ಅಲ್ಲದೆ ಈ ಸಾಲಿನಲ್ಲಿ ಒಂದು ಕೋಟಿ 50 ಲಕ್ಷ ರೂ ಸಮೀಪದ ವ್ಯವಹಾರ ನಡೆಸಿ ನಾಲ್ಕು ಲಕ್ಷದ ಸಮೀಪ ನಿವ್ವಳ ಲಾಭ ಗಳಿಸಿದ್ದು ಭರವಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಹಾಲಿನ ಉತ್ಪಾದನೆಗೆ ಆಧ್ಯತೆ ನೀಡಲಾಗುವುದು. ಅಲ್ಲದೇ ಮಂಜುನಾಥ ಗೌಡರ ಮಾರ್ಗದರ್ಶನದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಸಭಾ ಭವನ ನಿರ್ಮಿಸಲಾಗುತ್ತಿದೆ. ಅಲ್ಲದೇ ಪಶು ಆಸ್ಪತ್ರೆ ತೆರೆಯಲು ಎಲ್ಲಾ ನಿಟ್ಟಿನಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಿಮುಲ್‌ ನಿರ್ದೇಶಕ ಆನಂದ್‌, ರೇವಣ ಸಿದ್ಧಪ್ಪ, ಎಸ್.ಕುಮಾರ್‌, ಅಶೋಕ್‌ ಕೆ.ಎಂ.‌ ಹೆಚ್.ಬಿ.ದಿನೇಶ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಾಲಿಂಗ ಶಾಸ್ತ್ರಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮರಿಯಪ್ಪ, ಎಸ್‌.ಪಿ. ದಿನೇಶ್‌, ಶಿಮುಲು ಸಹಾಯಕ ವ್ಯವಸ್ಥಾಪಕಿ ದೀಪಿಕ, ವಿಸ್ತರಣಾಧಿಕಾರಿ ನವೀನ್ ಮುಂತಾದವರು ಇದ್ದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿಗಳಾದ ಡಾ.ರಾಮಪ್ಪ ದಂಪತಿ ಮತ್ತು ಡಿಸಿಸಿ ಬ್ಯಾಂಕ್‌ ನಿರ್ದೇಶಕ, ಅಪೆಕ್ಸ್‌ ಬ್ಯಾಂಕ್‌ ಪ್ರತಿನಿಧಿ ಎಂ.ಶ್ರೀಕಾಂತ್‌ ಅವರನ್ನು ಅಭಿನಂದಿಸಲಾಯಿತು. ಕಲ್ಲುಕೊಪ್ಪ ಸುರೇಶ್‌ ನಿರೂಪಿಸಿದರು.

ಕಲ್ಲುಕೊಪ್ಪ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಆನಂದಪ್ಪ, ನಿರ್ದೇಶಕರಾದ ಕೆ.ಎಂ.ಭಾಸ್ಕರ್‌, ಎಂ ನಾಗೇಶ್‌, ಶ್ರೀನಿವಾಸ್‌ ಅಜ್ಜಿ, ಸುನಿಲ್‌ ಕೆ, ಸುಧಾಕರ್‌ ಕೆ, ನರಸಿಂಹಮೂರ್ತಿ ಎಚ್‌, ಜಯಲಕ್ಷ್ಮೀ, ಶ್ರೀಮತಿ, ಶೋಭಾ ಮುಂತಾದವರು ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post