ಪ್ರಾಮಾಣಿಕ ಕ್ಷೇತ್ರ
ಶಿಕ್ಷಣಾಧಿಕಾರಿ ಮೇಲೆ ರಾಜಕೀಯ ಅಸ್ತ್ರ
ಅಸಾದಿ, ಗೀತಾ ಮೇಲೆ
ಕ್ರಮ ಯಾಕಿಲ್ಲ – ಮಧುರಾಜ್ ಹೆಗ್ಡೆ ಪ್ರಶ್ನೆ
ತೀರ್ಥಹಳ್ಳಿಯ ಶಾಂತವೇರಿ
ಗೋಪಾಲಗೌಡ ರಂಗಮಂದಿರದಲ್ಲಿ ನಡೆದಿರುವ ಸ್ವೆಟರ್ ಮತ್ತು ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ
ಉಲ್ಲಂಘನೆಯಾಗಿಲ್ಲ. ಪಟ್ಟಣ ಪಂಚಾಯಿತಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ
ಗೀತಾ ರಮೇಶ್ ಕೂಡ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರಿಗೂ ಕೂಡ ವೇದಿಕೆಯಲ್ಲಿ ಮಾತನಾಡುವ
ಅವಕಾಶ ಲಭಿಸಿದೆ. ಕೇಂದ್ರ ಸರ್ಕಾರದ ಮಕ್ಕಳ ಮೇಲಿನ ಪ್ರೀತಿಯ ಬಗ್ಗೆ ಮುಕ್ತವಾಗಿ ಸ್ವಾಗತಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ಭಾಗವಹಿಸಿ ಇದೀಗ ಶಿಷ್ಟಾಚಾರ ಉಲ್ಲಂಘನೆ ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ
ಎಂದು ಬಿಜೆಪಿ ಮಂಡಲದ ಕಾರ್ಯದರ್ಶಿ, ತೂದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಧುರಾಜ್
ಹೆಗ್ಡೆ ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ
ಕರ್ತವ್ಯ ನಿರ್ವಹಿಸುತ್ತಿರುವ ವೈ.ಗಣೇಶ್ ಅವರು ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಉತ್ಸಾಹದಿಂದ
ಕೆಲಸ ಮಾಡಿದ್ದಾರೆ. ಅವರ ನಿರಂತರ ಶ್ರಮದಿಂದಾಗಿ ರಾಜ್ಯದಲ್ಲಿಯೇ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ
ತೀರ್ಥಹಳ್ಳಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ನೇರವಾಗಿ ಬಿಇಓ ವೈ.ಗಣೇಶ್ ಅವರ ಅವಿರತ ಪ್ರಯತ್ನ
ಮುಖ್ಯ ಕಾರಣವಾಗಿದೆ. ಅಲ್ಲದೇ ನಿತ್ಯ ವಾಹನದ ವ್ಯವಸ್ಥೆ ಇಲ್ಲದಿದ್ದರೂ ತಮ್ಮ ಸ್ವಂತ ಬೈಕ್ನಲ್ಲಿಯೇ
ಗ್ರಾಮೀಣ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿರುವ
ಅವರು ಮಕ್ಕಳಲ್ಲಿ ಹೊಸ ಉತ್ಸಾಹವನ್ನು ಮೂಡಿಸುತ್ತಿದ್ದಾರೆ. ಅವರ ಕೆಲಸವನ್ನು ನೋಡಿ ಸಹಿಸಲಾಗದವರು
ಕುತಂತ್ರ ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆಯೊಳಗೆ ಮತ್ತು ಹೊರಗಿರುವ ಕೆಲವರಿಂದ ಇಂತಹ ಕುಕೃತ್ಯ
ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಶಿಷ್ಟಚಾರ ಉಲ್ಲಂಘನೆಯಾಗಿದೆ ಎನ್ನಲಾದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್ ಭಾಗವಹಿಸಿದ್ದರು. ಅವರನ್ನು ಬಿಟ್ಟು ಕೇವಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳುಬೇಕು ಎಂಬುದು ಕಾಂಗ್ರೆಸ್ ಪಕ್ಷದ ಕೆಟ್ಟ ರಾಜಕೀಯಕ್ಕೆ ಉದಾಹರಣೆಯಾಗಿದೆ. ಬಿಇಓ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕಾಂಗ್ರೆಸ್ ಮುಖಂಡರು ತಮ್ಮದೇ ಪಕ್ಷದ ಇಬ್ಬರು ಪಟ್ಟಣ ಪಂಚಾಯಿತಿಯ ಜವಾಬ್ದಾರಿಯುತ ಸದಸ್ಯರ ವಿರುದ್ಧ ಯಾಕೆ ಮಾತನಾಡುತ್ತಿಲ್ಲ. ಬಿಇಓ ವಿಚಾರದಲ್ಲಿ ಮಾತ್ರ ರಾಜಕೀಯ ಹುಳುಕು ನೋಡುತ್ತಿರುವುದು ಪಕ್ಷದ ಹೀನಾಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಮಧುರಾಜ್ ಹೆಗ್ಡೆ ಹೇಳಿದ್ದಾರೆ.
