ಕಾಂಗ್ರೆಸ್ ಪ್ರತಿಭಟನೆಯಲ್ಲಿ ಅಸಾದಿ ಗೈರು - ಗೀತಾ ಹಾಜರ್
ಶಿಷ್ಟಾಚಾರ ಉಲ್ಲಂಘನೆ ಹಿನ್ನಲೆಯಲ್ಲಿ ತೀರ್ಥಹಳ್ಳಿಯ ಬಿಇಓ ಕಚೇರಿ ಮುಂಭಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಗೈರಾಗಿದ್ದರು. ಉಪಾಧ್ಯಕ್ಷೆ ಗೀತಾ ರಮೇಶ್ ಹಾಜರಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇವೆರಡು ವಿಚಾರಗಳು ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೀಡಾಗಿದ್ದು ಪಟ್ಟಣದ ಆಡಳಿತದ ಬಗ್ಗೆ ಗುಸು ಗುಸು ಆರಂಭಗೊಂಡಿದೆ.
ಕೇಂದ್ರ ಸರ್ಕಾರದ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ಹಂಚಿಕೆಯಾದ ಶಾಲಾ ಬ್ಯಾಗ್ ಮತ್ತು ಸ್ವೆಟರ್ ವಿತರಣೆ ಕಾರ್ಯಕ್ರಮ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಶಾಸಕ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಇಬ್ಬರ ಜೊತೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರಹಮತ್ ಉಲ್ಲಾ ಅಸಾದಿ ಭಾಗಿಯಾಗಿದ್ದರು. ಸಂಸದರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಸಾದಿಯೊಂದಿಗೆ ಉಪಾಧ್ಯಕ್ಷೆ ಗೀತಾ ರಮೇಶ್ ಕೂಡ ಹಾಜರಿದ್ದರು. ಅಲ್ಲದೇ ಸಂಸದರನ್ನು ಪಟ್ಟಣ ಪಂಚಾಯಿತಿಗೆ ಕರೆಸಿಕೊಂಡು ಸನ್ಮಾನಿಸಿ ವಿವಿಧ ಬೇಡಿಯನ್ನು ಸಲ್ಲಿಸಿದ್ದರು.
ಅದೇ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್ ಪಕ್ಷ ಶಿಷ್ಟಾಚಾರದ ವಿಷಯ ಮುಂದಿಟ್ಟುಕೊಂಡು ಸೋಮವಾರ ಪ್ರತಿಭಟನೆ ನಡೆಸಿದೆ. ಆದರೆ ಅಸಾದಿ ಕಾರ್ಯಕ್ರಮಕ್ಕೆ ಗೈರಾಗಿ ಗೀತಾ ಹಾಜರಾಗಿರುವ ಕುರಿತು ಪಕ್ಷದೊಳಗಿನ ಹಲವು ಊಹಾಪೋಹಗಳಿಗೆ ಪುಷ್ಟಿ ನೀಡಿದಂತಾಗಿದೆ.
