ಕಟ್ಟೇಹಕ್ಕಲು ಸಮೀಪದ ಏರಿಗೆಯಲ್ಲಿ ಘಟನೆ
ತಲೆಗೆ ಬಂದೂಕು ಇಟ್ಟು ಅಡ್ಡದಿಡ್ಡಿ ಮಚ್ಚಿನಿಂದ ಕೊಚ್ಚಿದ ದುಷ್ಕರ್ಮಿಗಳು
ತೀರ್ಥಹಳ್ಳಿಯ ನಡು ರಸ್ತೆಯಲ್ಲಿ ಬಂದೂಕು ಕರಾಮತ್ತು

ತೀರ್ಥಹಳ್ಳಿ ತಾಲ್ಲೂಕಿನ ಶೇಡ್ಗಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಳೆಕೊಪ್ಪ ಗ್ರಾಮದ ಬಾಳೇಕೊಪ್ಪ ಪುನೀತ್ ಮೇಲೆ ಮಚ್ಚಿನಿಂದ ಅಡ್ಡದಿಡ್ಡಿ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಭಾನುವಾರ ಏರಿಗೆ ಸಮೀಪ ನಡೆದಿದೆ.
ಪುನೀತ್ ಬೈಕ್ ಚಾಲನೆ ಮಾಡಿಕೊಂಡು ಏರಿಗೆ ಉಬ್ಬು ಹತ್ತುವಾಗ ಶ್ರೀಧರ್ ಮತ್ತು ಸಂದೀಪ್ ಎನ್ನುವವರು ತಲೆಗೆ ಬಂದೂಕು ಇಟ್ಟು ಹೆದರಿಸಲು ಮುಂದಾಗಿದ್ದಾರೆ. ಸ್ಪಲ್ಪ ಅಲುಗಾಡಿದರು ತಲೆಗೆ ಗುಂಡು ಹಾರಿಸುವುದಾಗಿ ಹೆದರಿಸಿ ಅಡ್ಡದಿಡ್ಡಿ ಮಚ್ಚಿನಿಂದ ಕೊಚ್ಚಿದ್ದಾರೆ ಎನ್ನಲಾಗಿದೆ.
ಗಲಾಟೆ ಜೆಜೆಎಂ ಪೈಪ್ ಅಳವಡಿಸುವ ಕಾಮಗಾರಿ ಹಿನ್ನಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಹಲ್ಲೆ ಮಾಡಿದ ಇಬ್ಬರು ಪುನೀತ್ ಮೇಲೆ ಮಚ್ಚು ಪ್ರಯೋಗಿಸುತ್ತಿದ್ದಂತೆ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಲು ಮುಂದಾಗಿದ್ದಾರೆ. ಆಗ ಮತ್ತೆ ಬಂದೂಕು ಹಿಡಿದು ಗುಂಡು ಹಾರಿಸುವುದಾಗಿ ಹೆದರಿಸಿದ್ದು ಇನ್ನಷ್ಟು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಪುನೀತ್ ಸದ್ಯ ಜೆ.ಸಿ.ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪೊಲೀಸ್ ಇಲಾಖೆ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿದೆ. ರಾಜಕೀಯ ಪ್ರೇರಿತ ಹಲ್ಲೆಯಾಗಿರುವ ಸಾದ್ಯತೆ ಕೂಡ ಇದ್ದು ನಡು ರಸ್ತೆಯಲ್ಲಿ ಬಂದೂಕು ತೋರಿಸಿದ ದುಷ್ಕರ್ಮಿಗಳಿಗೆ ರಕ್ಷಣೆ ನೀಡದೆ ನಿಷ್ಪಕ್ಷಪಾತ ತನಿಖೆ ನಡೆಸಿ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.