ಆಸ್ಪತ್ರೆಯ ಅವ್ಯವಸ್ಥೆಗೆ ಬೇಕಿದೆ ಕಾಯಕಲ್ಪ
ರಾಜ್ಯದಲ್ಲಿ ವೈದ್ಯರಿಗೆ ರಕ್ಷಣೆ ಇಲ್ಲವೇ..!
ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಶುಕ್ರವಾರ ವೈದ್ಯರ ಮೇಲೆ ಕನ್ನಂಗಿ ಮೂಲದ ವ್ಯಕ್ತಿಯೊಬ್ಬರಿಂದ ಹಲ್ಲೆ ನಡೆದಿದೆ. ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ವ್ಯಕ್ತಿಯೋರ್ವ ಏಕಾಏಕಿ ಮೈಮೇಲೆ ಎರಗಿ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಅವ್ಯವಸ್ಥೆಯ ವಾತಾವರಣ ನಿರ್ಮಾಣವಾಗುತ್ತಿದೆ. ಅಂತೆಯೆ ಆಸ್ಪತ್ರೆಯ ಸೇವೆ ಬಗ್ಗೆ ಚಿಕಿತ್ಸೆ ಪಡೆದ ನಾಗರೀಕರಲ್ಲಿ ವಿಭಿನ್ನ ರೀತಿಯ ನಿಲುವುಗಳಿವೆ. ಕೆಲವು ವೈದ್ಯರ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿ ಬಂದರೆ ಇನ್ನು ಕೆಲವರ ಬಗ್ಗೆ ಬೇಸರಗಳಿವೆ. ಕೆಲವರು ಹಣಕ್ಕಾಗಿಯೇ ಬೇಡಿಕೆ ಇಡುತ್ತಾರೆ. ಇನ್ನು ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ ಎಂಬ ಅನೇಕ ರೀತಿಯ ಅನಿಸಿಕೆಗಳಿವೆ. ಚಿಕಿತ್ಸೆ ಪಡೆದ ಕೆಲವರು ಜೆಸಿ ಆಸ್ಪತ್ರೆ ಸಹವಾಸವೇ ಬೇಡ ಎನ್ನುವ ಬೇಕಾದಷ್ಟು ಉದಾಹರಣೆಗಳಿವೆ. ಇದಕ್ಕೆ ತದ್ವಿರುದ್ಧವಾಗಿ ಜೆಸಿ ಆಸ್ಪತ್ರೆಯ ಚಿಕಿತ್ಸೆಗಾಗಿಯೇ ಹೊರಗಿನ ತಾಲ್ಲೂಕು, ಜಿಲ್ಲೆಗಳಿಂದಲೂ ಅನೇಕರು ಆಗಮಿಸುತ್ತಿದ್ದಾರೆ.
ತ್ರಿಶಂಕು ಸ್ಥಿತಿಯಲ್ಲಿರುವ ಜೆ.ಸಿ. ಆಸ್ಪತ್ರೆಯ ವ್ಯವಸ್ಥೆಗೆ ಸರಿಯಾದ ಸಮಯದಲ್ಲಿ ಕಾಯಕಲ್ಪ ನೀಡದಿದ್ದರೆ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ವೈದ್ಯರೊಬ್ಬರ ಮೇಲೆ ಯಾವ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡಿದವರ ಮನಸ್ಥಿತಿ ಬಗ್ಗೆ ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ತನಿಖೆ ನಡೆಸಬೇಕಾಗಿದೆ.
ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದು ಅದಕ್ಕೆ ಸರಿಯಾದ ವೈದ್ಯರ ಸಂಖ್ಯೆ ಇಲ್ಲ. ವೈದ್ಯರು ತಮ್ಮ ಮಿತಿಯೊಳಗೆ ಅತ್ಯುತ್ತಮವಾದ ಸೇವೆಯನ್ನು ನೀಡಬೇಕಾಗಿದೆ. ವೈದ್ಯರ ಜೊತೆಗೆ ದಾದಿಯರು, ನೌಕರರ ಸಂಖ್ಯೆ ಕೂಡ ಕಡಿಮೆ ಇರುವುದರಿಂದ ನಿತ್ಯ ಒತ್ತಡದ ಆರೋಗ್ಯ ಸೇವೆಯನ್ನು ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಲ್ಲದೇ ಸುಮಾರು 20ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗಳ ಹುದ್ದೆ ಖಾಲಿ ಇದ್ದು, ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಸೆಕ್ಯೂರಿಟಿ ಗಾರ್ಡ್ ಇಲ್ಲದೆ ಸಮಸ್ಯೆ ತಲೆದೋರುತ್ತಿದೆ.