375 ಮರ ಕಡಿತಲೆಗೆ
ತಯಾರಿ
ಬೇರು ಸಡಿಲಗೊಳಿಸಿ
ಸಾರ್ವಜನಿಕರ ಅಹವಾಲು ಸಭೆ
ತೀರ್ಥಹಳ್ಳಿ ತಾಲ್ಲೂಕಿನ ನಾಲೂರು ಸಮೀಪ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ 375 ಮರಗಳನ್ನು ಕಟಾವು ಮಾಡುವ ಕಾಮಗಾರಿ ಆರಂಭವಾಗಿದೆ. ಈ ಮಧ್ಯೆ ಕಟಾವು ಮಾಡಬಹುದೇ ಎಂದು ಸಾರ್ವಜನಿಕರ ಅಹವಾಲು ಸಭೆ ನಡೆಸಿದ ಅರಣ್ಯ ಇಲಾಖೆ ನಡೆಯ ಬಗ್ಗೆ ಸ್ಥಳೀಯವಾಗಿ ವಿಪರೀತ ಭಿನ್ನಾಭಿಪ್ರಾಯ ಆರಂಭಗೊಂಡಿದೆ.
96 ಕೋಟಿ ವೆಚ್ಚದಲ್ಲಿ ಮೇಗರವಳ್ಳಿಯಿಂದ ಆಗುಂಬೆವರೆಗೆ ಚತುಷ್ಪತ ರಸ್ತೆ ಕಾಮಗಾರಿಗೆ ಈಗಾಗಲೇ ಸರ್ಕಾರ ಗುತ್ತಿಗೆ ನೀಡಿದೆ. ಅಲ್ಲಲ್ಲಿ ಕಾಮಗಾರಿ ಆರಂಭಗೊಂಡಿದ್ದು ಮಧ್ಯೆ ರಸ್ತೆಗೆ ಅಡ್ಡಿಯಾಗುವ ಕೆಲವು ಮರಗಳನ್ನು ಕಡಿತಲೆ ಮಾಡಲಾಗಿದೆ. ಇನ್ನಷ್ಟು ಕಡಿತ ಮಾಡುವುದಕ್ಕಾಗಿ ಅರಣ್ಯ ಇಲಾಖೆ ನಾಟಕೀಯವಾಗಿ ಸಾರ್ವಜನಿಕರ, ಪರಿಸರ ಆಸಕ್ತರ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯ ಸರ್ವೆ ಕಾರ್ಯ ಮುಕ್ತಾಯಗೊಳಿಸಿ ಕಾಮಗಾರಿ ಆರಂಭಿಸಿದೆ. ಕಾಮಗಾರಿಯ ನಡುವಿನ ರಸ್ತೆಗಳಲ್ಲಿ ಮನೆ, ಮರ, ಬಾವಿ, ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣ, ಗುಡ್ಡ ಮುಂತಾದ ಜಾಗಗಳನ್ನು ಗುರುತು ಹಚ್ಚಲಾಗಿದೆ. ಅಲ್ಲದೇ ಅನುಮತಿಗೂ ಮುನ್ನವೇ ಅನೇಕ ಕಡೆಗಳಲ್ಲಿ ಜೆಸಿಬಿ, ಬುಲ್ಡೋಜರ್ ಕೆಲಸ ಆರಂಭಿಸಲಾಗಿದೆ. ಮನಸೋ ಇಚ್ಚೆ ಕಾಮಗಾರಿ ಕೈಗೆತ್ತಿಕೊಂಡು ಈಗ ಹೆದ್ದಾರಿ ಪ್ರಾಧಿಕಾರ ರಸ್ತೆ ಅಗಲೀಕರಣಕ್ಕೆ ಸಭೆ ನಡೆಸುವುದು ಏಕೆ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಪರಿಹಾರಕ್ಕಾಗಿ ಜನರ ಪರದಾಟ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಖಾಸಗಿ, ಅರಣ್ಯ ಜಾಗಗಳಿಗೆ ಸಲೀಸಾಗಿ ಪರಿಹಾರ ಲಭಿಸುತ್ತಿದೆ. ಪ್ರಾಧಿಕಾರ ನಿಗಧಿಪಡಿಸಿದ ಪರಿಹಾರದ ಮೊತ್ತ ಸಂತ್ರಸ್ತರ ಪಾಲಿಗೆ ಆಶಾದಾಯವಾಗಿದೆ. ಆದರೆ ಮನೆಯ ಹಕ್ಕುಪತ್ರ, ಒತ್ತುವರಿ ಮಾಡಿಕೊಂಡ ಜಮೀನಿನ ದಾಖಲೆ ಇಲ್ಲದವರ ಪಾಡು ಹೇಳತೀರದು. ಪರಿಹಾರವೂ ಇಲ್ಲ ಇತ್ತ ಮನೆ, ಜಮೀನು, ತೋಟ, ಗದ್ದೆಗಳು ಇಲ್ಲದ ಸ್ಥಿತಿ ಬಡವರದ್ದಾಗಿದೆ. ಸಂಪೂರ್ಣ ಮನೆ ಕಳೆದುಕೊಳ್ಳುವ ಕುಟುಂಬಗಳು ಮತ್ತೊಮ್ಮೆ ಮನೆ ಕಟ್ಟಿಕೊಳ್ಳಲು ನಮ್ಮಿಂದ ಸಾಧ್ಯವೇ ಎಂದುಕೊಳ್ಳುತ್ತಿರುವಾಗ ಕೆಲವು ಸಂತ್ರಸ್ತರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಮೀನು ಕಳೆದುಕೊಂಡು ಆರಂಭದಲ್ಲಿ ಕೋಟಿ ಎಣಿಸಿ ಲಾಟ್ರಿ ಹೊಡೆದ ಸ್ಥಿತಿಯನ್ನು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಬದಲಿ ನಿವೇಶನ, ಜಮೀನು ಸಿಗದಿದ್ದರೆ ಮುಂದೇನು ಎನ್ನುವ ಸ್ಥಿತಿಯೂ ಸಂತ್ರಸ್ತರ ನಿದ್ದೆಗೆಡಿಸಿದೆ.