ಸಾಲಬಾಧೆ; ಎಸ್ಟಿ ಮುಖಂಡ ಆತ್ಮಹತ್ಯೆಗೆ ಯತ್ನ
ಜೀವ ಉಳಿಸಿದ ಆರಕ್ಷಕ ಸಿಬ್ಬಂದಿ
ಯಡೇಹಳ್ಳಿ ಕೆರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಕೆರೆಯಲ್ಲಿ ಮುಳುಗುತ್ತಿದ್ದ ಬಿಜೆಪಿಯ ಎಸ್ಟಿ ಮುಖಂಡರೊಬ್ಬರ ಜೀವ ಉಳಿಸುವ ಮೂಲಕ ತೀರ್ಥಹಳ್ಳಿ ಪೊಲೀಸರು ಸಾಹಸ ಮೆರೆದಿರುವ ಘಟನೆ ಬುಧವಾರ ನಡೆದಿದೆ.
ಗುತ್ತಿಗೆ ಹಣ ಸರಿಯಾಗಿ ಪಾವತಿಯಾಗದೆ ಸಾಲದ ಸುಳಿಗೆ ಎಸ್ಟಿ ಮುಖಂಡ ಸಿಲುಕಿದ್ದರು. ಇದರಿಂದ ಹಲವರ ಬಳಿ ನೋವು ತೋಡಿಕೊಂಡಿದ್ದಾರೆ. ಇದರ ಮಾಹಿತಿಯನ್ನು ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಯಡೇಹಳ್ಳಿ ಕೆರೆಯಲ್ಲಿ ಮುಳುಗುತ್ತಿದ್ದ ಎಸ್ಟಿ ಮುಖಂಡನನ್ನು ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ ಮತ್ತು ಲೋಕೇಶ್ ತಮ್ಮ ಪ್ರಾಣ ಲೆಕ್ಕಿಸದೆ ರಕ್ಷಿಸಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಗೆ ರಾತ್ರಿ 11 ಗಂಟೆಗೆ ಕರೆ ಬಂದ ಹಿನ್ನಲೆಯಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ 112 ರ ರೆಸ್ಪಾಂಡರ್ ರಾಮಪ್ಪ ಮಾಳೂರು ಪೊಲೀಸ್ ಠಾಣೆ ಮತ್ತು ಡ್ರೈವರ್ ಲೋಕೇಶ್ AHC50 ಇವರುಗಳು ಕೂಡಲೇ ದೂರುದಾರರು ತಿಳಿಸಿದ ಯಡೇಹಳ್ಳಿ ಕೆರೆಯ ಹತ್ತಿರ ತಲುಪಿದಾಗ ಕಾರೊಂದು ಅನುಮಾನಾಸ್ಪದವಾಗಿ ನಿಂತಿರುವುದು ಗೋಚರಿಸಿದೆ. ಅನುಮಾನಗೊಂಡು ಪರಿಶಿಲಿಸಿದಾಗ ಪಕ್ಕದ ಕೆರೆಯಲ್ಲಿ ವ್ಯಕ್ತಿಯೋರ್ವರು ಮುಳುಗುತಿದ್ದುದ್ದನ್ನು ನೋಡಿ ಪೊಲೀಸ್ 112 ಸಿಬ್ಬಂದಿಗಳಾದ ರಾಮಪ್ಪ ಮತ್ತು ಲೋಕೇಶ್ ತಮ್ಮ ಜೀವದ ಹಂಗು ತೊರೆದು ಹೂಳು ಮತ್ತು ನೀರು ತುಂಬಿದ್ದ ನೀರಿಗೆ ಹಾರಿ ಮುಳುಗುತ್ತಿದ್ದ ವ್ಯಕ್ತಿಯನ್ನು ಹರಸಾಹಸದಿಂದ ದಡಕ್ಕೆ ತಲುಪಿಸಿದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ಕರೆ ತಂದು, ಪ್ರಥಮ ಚಿಕಿತ್ಸೆಯನ್ನು ನೀಡಿ, ಹೆಚ್ಚಿನ ಚಿಕಿತ್ಸೆಗೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮುಖಂಡ ಪ್ರಾಣಪಾಯದಿಂದ ಪಾರಾಗಿದ್ದಾರೆ.