ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಹುತ್ತಳ್ಳಿ ಗ್ರಾಮದ ವಾಸಿ ಗುರುಮೂರ್ತಿ ಎಂಬುವವರು ತನ್ನ ವಾಸದ ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದಾರೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಅಕ್ರಮ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ.ಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ, ತೀರ್ಥಹಳ್ಳಿ ಪೊಲೀಸ್ ಉಪಾಧೀಕ್ಷ ಗಜಾನನ ವಾಮನ ಸುತರ, ನೇತೃತ್ವದ ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಅಡಿಕೆ ಗಿಡಗಳ ಮದ್ಯೆ ಬೆಳೆದಿದ್ದ ಅಂದಾಜು ಮೌಲ್ಯ 2,50,000/- ರೂಗಳ 9 ಕೆಜಿ 524 ಗ್ರಾಂ ತೂಕದ ಒಟ್ಟು 14 ಹಸಿ ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆಃ 0148/2024 ಕಲಂ 8C, 20 (a) (i) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.