ಬಿಳಿ ಕಮಲ ಕೊಟ್ಟು ಶುಭ ಹಾರೈಸಿದ ಕಾರ್ಮಿಕರು
ಪ್ರಚಾರಕ್ಕಾಗಿಯೇ ಸಿಬ್ಬಂದಿಗೆ ರಜೆ ನೀಡಿದ ವಿವಿಧ ಕಾರ್ಖಾನೆ ಶೋರೂಂಗಳು
ಶಿವಮೊಗ್ಗದಲ್ಲಿ
ಇಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಲೋಕಸಭಾ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ
ಮಿಂಚಿನ ಸಂಚಾರ ನಡೆಸಿ ಮತ ಯಾಚಿಸಿದರು. ನನ್ನದು ವೈಯಕ್ತಿಕ ಲಾಭದ ಸ್ಪರ್ಧೆಯಲ್ಲ ಬಿಜೆಪಿ ಪಕ್ಷ ಹಿಂದುತ್ವ
ಮತ್ತು ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಸಾಧಾರಣ ಮನೋಬಲದ ಕಾರ್ಯಕರ್ತರು ನನಗೆ ಎಲ್ಲವನ್ನು ನೀಡಿದ್ದಾರೆ.
ಆದರೆ ಈಗ ಪಕ್ಷದ ತತ್ವ ಸಿದ್ಧಾಂತ ಹಿಂದುತ್ವದ ಹಿರಿಮೆಯನ್ನು ಕಡೆಗಣಿಸಿ ಕುಟುಂಬ ರಾಜಕಾರಣಕ್ಕೆ ಮಣೆ
ಹಾಕಲಾಗುತ್ತಿದೆ. ಇದು ತೊಲಗಬೇಕು. ಹಿಂದುತ್ವದ ತತ್ವ ಸಿದ್ಧಾಂತ ಗಟ್ಟಿಯಾಗಿ ಉಳಿಯಬೇಕು. ಹಾಗಾಗಿ
ಬಂಡಾಯ ಎದ್ದಾದರೂ ಬಿಜೆಪಿ ಪಕ್ಷ ಶುದ್ಧವಾಗಬೇಕು ಎಂದು ನನ್ನ ಖಚಿತ ನಿಲುವು ಎಂದರು.
ಈ ಸಂದರ್ಭದಲ್ಲಿ
ಶಿವಮೊಗ್ಗ ನಗರದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ಪರ್ಫೆಕ್ಟ್ ಅಲಾಯ್ ಕಾರ್ಖಾನೆಗೆ ಮತ ಯಾಚಿಸಲು
ತೆರಳಿದಾಗ ಅಲ್ಲಿನ ಕಾರ್ಮಿಕರು ಕೆ.ಎಸ್.ಈಶ್ವರಪ್ಪ ರವರಿಗೆ ಬಿಳಿ ಕಮಲ ನೀಡಿ ಸ್ವಾಗತ ಕೋರಿದ್ದು ಭಾವನಾತ್ಮಕ
ಕ್ಷಣಗಳನ್ನು ಸೃಷ್ಟಿಸಿತ್ತು.
ಪರ್ಫೆಕ್ಟ್
ಅಲಾಯ್ ಕಾಂಪೊನೆಂಟ್ ನಿರ್ದೇಶಕರಾದ ಬಿ.ಸಿ.ನಂಜುಂಡ ಶೆಟ್ಟಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ
ನಾವು ಹಿಂದುತ್ವದ ಕಾರಣಕ್ಕಾಗಿ ಇಲ್ಲಿಯವರೆಗೂ ಬಿಜೆಪಿಗೆ ಮತ ನೀಡುತ್ತಾ ಬಂದಿದ್ದೇವೆ. ಈ ಬಾರಿ ಕೂಡ
ಹಿಂದುತ್ವದ ಉಳಿವಿಗಾಗಿ ಕೆ.ಎಸ್.ಈಶ್ವರಪ್ಪ ರವರಿಗೆ ಮತ ಹಾಕಬೇಕು ಎಂದರು.
ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ ನಗರದ ಅನೇಕ ವಾಹನಗಳ ಶೋರೂಮ್ಗಳಿಗೆ ತೆರಳಿ ಮತ ಯಾಚನೆ ಮಾಡಿದರಲ್ಲದೇ ಎಲ್ಲಾ ಶೋರೂಮ್ಗಳ
ಮಾಲೀಕರ ಬಳಿ ತೆರಳಿ ತಮ್ಮ ಪರ ಪ್ರಚಾರ ಮಾಡಲು ಸಿಬ್ಬಂದಿಗಳಿಗೆ ಭಾನುವಾರ ಹೊರತು ಪಡಿಸಿ ಒಂದು ದಿನದ
ರಜೆ ನೀಡಬೇಕೆಂದು ಮನವಿ ಮಾಡಿದರು. ಈಶ್ವರಪ್ಪ ರವರ ಮನವಿ ಸ್ಪಂಧಿಸಿದ ಪರ್ಫೆಕ್ಟ್ ಅಲಾಯ್ ಕಾರ್ಖಾನೆ,
ಆರ್ಯ ಟಿ.ವಿ.ಎಸ್. ಕಾರ್ತಿಕ್ ಹೀರೋ ಶೋರೂಮ್, ಪ್ರಭು ಮೋಟಾರ್ಸ್, ಮಂಹತಾ ಶೋರೂಮ್, ರಾಹುಲ್ ಹುಂಡೈ,
ಆದಿಶಕ್ತಿ ಕಾರ್ಸ್, ಮಾರುತಿ ಶೋರೂಮ್ ಗಳ ಮಾಲೀಕರು ಈಶ್ವರಪ್ಪ ಪರ ಪ್ರಚಾರ ಮಾಡಲು ಕಾರ್ಮಿಕ ಹಾಗೂ
ಸಿಬ್ಬಂದಿಗಳಿಗೆ ಒಂದು ದಿನದ ರಜೆ ಕೊಡುವುದಾಗಿ ವಾಗ್ದಾನ ನೀಡಿದ್ದಾರೆ.
ಈ ಸಂಧರ್ಭದಲ್ಲಿ
ಪರ್ಫೆಕ್ಟ್ ಅಲಾಯ್ ಕಾಂಪೋನೆಂಟ್ ನಿರ್ದೇಶಕರಾದ ವಸಂತ್ ದಿವೇಕರ್, ಬಿ.ಸಿ ನಂಜುಂಡ ಶೆಟ್ಟಿ, ಪಾಲಿಕೆ
ಮಾಜಿ ಸದಸ್ಯ ಇ.ವಿಶ್ವಾಸ್, ಮಹಾಲಿಂಗ ಶಾಸ್ತ್ರಿ ಉಪಸ್ಥಿತರಿದ್ದರು.