ತೀರ್ಥಹಳ್ಳಿ ಮಿತ್ರ ವಾರಪತ್ರಿಕೆಯ ಸಂಪಾದಕ ಮಂಜುನಾಥ ಪಿ. (38) ಮಂಗಳೂರಿನ ಎಂಐಎ ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಕೆಲವು ತಿಂಗಳಿನಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಎಂಐಎ ಆಸ್ಪತ್ರೆಯಲ್ಲಿ 16 ರೇಡಿಯೇಶನ್ ಥೆರಪಿಗೆ ಒಳಗಾಗಿದ್ದರು. ರೇಡಿಯೇಷನ್ ಪಡೆಯುತ್ತಿದ್ದ ಅವರಿಗೆ ಪ್ಲೇಟ್ ಲೈಟ್ಸ್ ಕೊರತೆ ಇಂದ ನ್ಯೂಮೋನಿಯಾಕ್ಕೆ ಒಳಗಾಗಿದ್ದರು. ಶ್ವಾಸಕೋಶದಲ್ಲಿ ರಕ್ತಸ್ರಾವವಾಗಿದ್ದರಿಂದ ಮಧ್ಯಾಹ್ನದಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.
ಮಂಜುನಾಥ್ ಅವರು ಪತ್ನಿ, 8 ವರ್ಷದ ಪುತ್ರಿ, ಅಕ್ಕ, ತಂಗಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ತಾಯಿ ಮೃತಪಟ್ಟಿದ್ದರು. ತಾಯಿ ಅಪರಕ್ರಿಯೆಗಾಗಿ ಓಡಾಡಿದ್ದ ಅವರಿಗೆ ನ್ಯೂಮೋನಿಯಾ ಇರುವುದು ಪತ್ತೆಯಾಗಿತ್ತು.
ಜೀವನಕ್ಕಾಗಿ ನಾನಾ ವೃತ್ತಿ ನಿರ್ವಹಿಸಿದ್ದ ಮಿತ್ರ ಮಂಜು ಪತ್ರಕರ್ತರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದರು. ತರಕಾರಿ ಅಂಗಡಿ, ಸೌಂಡ್ಸ ಅಂಡ್ ಲೈಟಿಂಗ್, ಡೆಕೊರೇಷನ್, ವಿದ್ಯುತ್ ಗುತ್ತಿಗೆದಾರ ಸೇರಿದಂತೆ ಪತ್ರಿಕೆ ವಿತರಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದರು.
ಮಂಜುನಾಥ್ ಅವರಿಗೆ 6 ವರ್ಷ ವಯಸ್ಸಿರುವಾಗ ತಂದೆ ತೀರಿಕೊಂಡಿದ್ದರು. ಅಂದಿನಿಂದ ತಾಯಿ ನಾಲ್ಕು ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಸಾಕಿ ಬೆಳೆಸಿದ್ದರು. ಶಾಲಾ ದಿನಗಳನ್ನು ಮುಗಿಸುತ್ತಿದ್ದಾಗಲೇ ಅರೆಕಾಲಿಕ ವೃತ್ತಿಗಳನ್ನು ಮಾಡುವ ಮೂಲಕ ತಾಯಿಗೆ ನೆರವಾಗಿದ್ದರು. ಅಲ್ಲದೇ ಅಕ್ಕ, ತಂಗಿಯಂದಿರಿಗೂ ಮದುವೆ ಮಾಡಿಸುವ ಜವಾಬ್ದಾರಿ ನಿಭಾಯಿಸಿದ್ದರು. ಬಡತನವಿದ್ದರು ಸಮಾಜದೊಳಗೆ ತೋರಿಸಿಕೊಳ್ಳದೆ ಎಲ್ಲವನ್ನು ಪರಿಶ್ರಮದಿಂದ ನಿಭಾಯಿಸುವ ಮೂಲಕ ಕುಟುಂಬಕ್ಕೆ ನೆರವಾಗಿದ್ದರು.
ಮಂಜುನಾಥ್ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸಲ್ಲಿಸಿದೆ.