ಬೆಂಗಳೂರಿನಲ್ಲಿ ಒಂದೂವರೆ
ಲಕ್ಷ ಜನರಿಂದ ಧರಣಿ
ಅವೈಜ್ಞಾನಿಕ ಆದೇಶ ;
ಪಂಚಾಯಿತಿಗೆ ಆರ್ಥಿಕ ಹೊರೆ
ಪ್ರತಿಭಟನೆಗೆ ಸಾಥ್ ನೀಡಲು
ರಾಜ್ಯ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಒಕ್ಕೂಟದ ಉಪಾಧ್ಯಕ್ಷ ಯು.ಡಿ. ವೆಂಕಟೇಶ್ ಕರೆ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಸಿನಮನೆ ಸ್ಥಾಪಿಸಬೇಕು ಎಂಬ ಅವೈಜ್ಞಾನಿಕ ಆದೇಶ ಹೊರಡಿಸಲಾಗಿದೆ. ಇದು ಸ್ವಂತ ಸಂಪನ್ಮೂಲ ಇಲ್ಲದ ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಹೊರೆಯಾಗಲಿದೆ. ರಾಜ್ಯದ 5,628 ಗ್ರಾ.ಪಂ. ಸದಸ್ಯರ ಬೇಡಿಕೆಗಳಿಗೆ ಅನುಗುಣವಾಗಿ ರಾಜ್ಯ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಒಕ್ಕೂಟದ ವತಿಯಿಂದ ಫೆಬ್ರವರಿ 8 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ರಾಜ್ಯಾದ್ಯಂತ ಒಂದೂವರೆ ಲಕ್ಷ ಜನರು ಬೆಂಬಲ ಸೂಚಿಸಿದ್ದು ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ನಾಗರೀಕರು, ಜನಪ್ರತಿನಿಧಿಗಳು ಪ್ರತಿಭಟನೆಗೆ ಸಾಥ್ ನೀಡಬೇಕು ಎಂದು ರಾಜ್ಯ ಒಕ್ಕೂಟದ ಉಪಾಧ್ಯಕ್ಷ, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಡಿ. ವೆಂಕಟೇಶ ಕರೆನೀಡಿದ್ದಾರೆ.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕೂಲಿ ಕಾರ್ಮಿಕರು, ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವರ 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳ ಲಾಲನೆ-ಪಾಲನೆ ಮಾಡುವ ಉದ್ದೇಶದಿಂದ ಕೂಸಿನಮನೆ ಅಥವಾ ಶಿಶುಪಾಲನಾ ಕೇಂದ್ರ ಸ್ಥಾಪನೆ ಉದ್ದೇಶ ಸ್ವಾಗತಾರ್ಹ. ಆದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕೂಸಿನ ಮನೆ ನಿರ್ಮಿಸಿದರೆ ಯೋಜನೆ ಲಾಭ ಸದುಪಯೋಗ ಆಗುವುದಿಲ್ಲ. ಇದು ಅನಗತ್ಯ ಪಂಚಾಯಿತಿಗೆ ಹೊರೆಯಾಗಲಿದೆ ಎಂದು ಹೇಳಿದ್ದಾರೆ.
ಪಂಚಾಯತಿ ವ್ಯಾಪ್ತಿಯ ನಾನಾ ಪ್ರದೇಶಗಳಲ್ಲಿ ನರೇಗಾ ಯೋಜನೆ ನಡೆಯುತ್ತಿರುತ್ತದೆ. ಎಲ್ಲಾ ಮಕ್ಕಳನ್ನು ಒಂದೇ ಕೂಸಿನ ಮನೆಯಲ್ಲಿ ತಂದು ಬಿಡುವುದು ಅಸಾಧ್ಯ. ವರ್ಗ-1 ರಲ್ಲಿ ಹಣವೇ ಇಲ್ಲ. ಆದಗ್ಯೂ ರಾಜ್ಯದಲ್ಲಿ ನಾಲ್ಕು 4000 ಕೂಸಿನ ಮನೆಯನ್ನು ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ. 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳ ಲಾಲನೆ ಹಾಗೂ ಪಾಲನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಹಿಸುತ್ತಿದೆ. ಆ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಸದೃಢ ಗೊಳಿಸುವುದು ಸೂಕ್ತ ಹಾಗೂ ಪ್ರತಿ ಗ್ರಾಮಗಳಲ್ಲೂ ಅಂಗನವಾಡಿ ಕೇಂದ್ರ ಗಳು ಕಾರ್ಯನಿರ್ವಹಿಸುತ್ತಿದ್ದು ಅದೂ ಸಹ ಕೂಸಿನ ಮನೆಯ ಕಲ್ಪನೆಯೇ ಆಗಿರುವುದರಿಂದ ಇಂತಹ ಅವೈಜ್ಞಾನಿಕ ಯೋಜನೆಯ ಅವಶ್ಯಕತೆ ಇದ್ದಂತೆ ಕಂಡುಬರುತ್ತಿಲ್ಲ ಎಂದಿದ್ದಾರೆ.