ಖಾಯಂ ವರದಕ್ಷಿಣೆ ಕೊಡುವ ನೆಂಟರು ನನಗೆ ಸಿಕ್ಕಿಲ್ಲ
ಕಿಮ್ಮನೆ ವೈಚಾರಿಕವಾಗಿ ಗಾಂಧಿ ನಿಲುವು ಪ್ರತಿಪಾದಿಸಲಿ – ಆರಗ ಜ್ಞಾನೇಂದ್ರ
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಚನ್ನವೀರಪ್ಪ ಅವರ ಅವಧಿಯಲ್ಲಿ ನೇಮಕಾತಿ ಹಗರಣ ನಡೆದಿದ್ದರೆ ತನಿಖೆ ಆಗಲಿ. ತಪ್ಪು ಯಾರೇ ಮಾಡಿದ್ದರು ಶಿಷ್ಯೆಯಾಗಬೇಕು. ವಿಧಾನಸಭಾ ಚುನಾವಣೆಯಲ್ಲಿ ನಾನು 70 ಕೋಟಿ ಖರ್ಚು ಮಾಡಿದ್ದೇನೆ ಎನ್ನುವುದಕ್ಕೆ ಸಾಕ್ಷಿ ತನಿಖೆ ಮಾಡಿಸಲಿ. ಕಿಮ್ಮನೆ ತಾಕತ್ತು ಇದ್ದರೆ ನಾನು ಗೃಹಸಚಿವ, ಶಾಸಕನಾಗಿರುವ ಅವಧಿಯ ಯಾವುದೇ ಹಗರಣ ಬೇಕಾದರು ತನಿಖೆ ಮಾಡಿಸಲಿ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಗಾಂಧಿ ವಾದಿಗಳು ಕಳ್ಳ ಸುಳ್ಳ ಎಂದು ಬಾಯಿಗೆ ಬಂದಂತೆ ಆರ್.ಎಂ. ಮಂಜುನಾಥ ಗೌಡರ ವಿರುದ್ಧ ಹಿಂದೆ ವಿಷಕಾರಿದ್ದರು. ಪಕ್ಷ ಸೇರ್ಪಡೆ ನಂತರ ಸಹಾನುಭೂತಿ ಹೆಚ್ಚಾಗಿದೆ. ನಿನ್ನೆ ನಡೆದ ಪಾದಯಾತ್ರೆಯಲ್ಲಿ ಮುಂದೆ ಸಾಗಲು ಹೆದರಿ ಅಳುಕಿನಿಂದ ಮುಖಂಡರ ಮಧ್ಯೆ ಕಿಮ್ಮನೆ ಹೆಜ್ಜೆ ಹಾಕಿದ್ದಾರೆ. ಎಲ್ಲಿ ಮಂಜುನಾಥ ಗೌಡರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುತ್ತಾರೋ ಎಂಬ ತೊಳಲಾಟ ಕಾಡುತ್ತಿದ್ದು. ಕಿಮ್ಮನೆ ಹಿಂದೆಂದೂ ಇಂತಹ ಗೊಂದಲಕ್ಕೆ ಸಿಲುಕಿರಲಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಕಿಮ್ಮನೆ ವಿರುದ್ಧ ಹರಿಹಾಯ್ದರು.
ವೈಯಕ್ತಿಕ ತೇಜೋವಧೆ, ವಾಮಮಾರ್ಗದ ರಾಜಕಾರಣದ ಮಾಡುವ ಅಗತ್ಯ ಬಿಜೆಪಿಗಿಲ್ಲ. ಜಾರಿ ನಿರ್ದೇಶನಾಲಯ (ಇಡಿ) ಶೋಧಾಚರಣೆಗೆ ಅತ್ಯಂತ ಸಂತೋಷ ಪಡುವ ವ್ಯಕ್ತಿ ಇದ್ದರೆ ಅದು ಮಾಜಿ ಸಚಿವ ಕಿಮ್ಮನೆ ರತ್ನಾಕರ್. ಅವರಿಗೆ ಸಿಕ್ಕಂತೆ ಖಾಯಂ ವರದಕ್ಷಿಣೆ ಕೊಡುವ ನೆಂಟರು ನನಗೆ ಸಿಕ್ಕಿಲ್ಲ. ಹಿಂದೆ ಮಂಜುನಾಥ ಗೌಡರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರಲಿಲ್ಲ. ಪಕ್ಷ ಸೇರ್ಪಡೆ ನಂತರ ಒಂದೇ ಹಾರಕ್ಕೆ ಕೊರಳೊಡ್ಡುತ್ತಿದ್ದಾರೆ. ಭಾಷಣಗಳಲ್ಲಿ ಗಾಂಧಿ ವಿಚಾರಗಳನ್ನು ಹೇಳುವ ಬದಲು ವೈಚಾರಿಕವಾಗಿ ಗಾಂಧಿ ನಿಲುವನ್ನು ಪ್ರತಿಪಾದಿಸಲಿ ಎಂದು ಟೀಕಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಇದ್ದ ಸಂದರ್ಭ ಮನಸ್ಸು ಮಾಡಿದ್ದರೆ ನಾನು ಮತ್ತು ಸಂಸದರು ಏನು ಬೇಕಾದರು ಮಾಡಬಹುದಿತ್ತು. ಕೆಲವು ಮಿತ್ರರು ಇಡಿ ವಿಚಾರದಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಅಗತ್ಯ ಬಿದ್ದಾಗ ಹೊಗಳಿ ಉಳಿದ ಸಂದರ್ಭದಲ್ಲಿ ತೊಗಳುವ ಅವಶ್ಯಕತೆ ನನಗಿಲ್ಲ. ರಾಜಕೀಯ ಅಲೆಮಾರಿ, ಕಬ್ಬಿಣ ಕಳ್ಳ ಎಂದು ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ) ಹಿತದೃಷ್ಟಿಯಿಂದ ಸೈದ್ಧಾಂತಿಕ ಹೋರಾಟ ಮಾಡಿದ್ದೇನೆ. ರೈತರ ಬ್ಯಾಂಕ್ ಪಾವಿತ್ರ್ಯತೆ ಉಳಿಯಲಿ. ಚಿನ್ನಾಭರಣ ಸಾಲ ಹಗರಣದ 62 ಕೋಟಿ ರೂಪಾಯಿ ಹಣ ಇದೆ. ಬಡ್ಡಿ ಸಹಿತ ಅಂದಾಜು 150 ಕೋಟಿ ರೂಪಾಯಿ ಆಗಿದ್ದು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ನಾಗರಾಜ ಶೆಟ್ಟಿ, ಸಂದೇಶ್ ಜವಳಿ, ಚಂದುವಳ್ಳಿ ಸೋಮಶೇಖರ್, ಪೂರ್ಣೇಶ್ ಪೂಜಾರಿ ಇದ್ದರು.