ಲೋಕಸಭೆ ಚುನಾವಣೆ ತಾಲೀಮು
ಕೋಮು ಗಲಭೆ ಸೃಷ್ಟಿಸಿ ಲಾಭ ಪಡೆಯುವ ದುರುದ್ದೇಶ – ಕಿಮ್ಮನೆ
“ತೌರೂರ ಸಂಮಾನ” ಕಾರ್ಯಕ್ರಮದ ಹಾಳು ಮಾಡುವ
ಹುನ್ನಾರ - ಆರ್ಎಂಎಂ ಬೆಂಬಲಿಗರ ಆರೋಪ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ವಿರೋಧ ಪಕ್ಷದ
ಮನೆಯ ಮೇಲೆ ರೈಡ್ ಮಾಡುವ ಕಾರ್ಯಕ್ರಮ ನಡೆಸುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಗುರುವಾರ ಬೆಳಿಗ್ಗೆ ಆರ್.ಎಂ.ಮಂಜುನಾಥ ಗೌಡರ ಬೆಟ್ಟಮಕ್ಕಿ, ಕರಕುಚ್ಚಿ, ಶಿವಮೊಗ್ಗದ
ಶಾಂತಿನಗರದ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಿಮ್ಮನೆ ಲೋಕಸಭೆ ಚುನಾವಣೆ
ಬಿಜೆಪಿ ತಾಲೀಮು ನಡೆಸುತ್ತಿದೆ ಎಂದು ದೂರಿದರು.
ಬಿಜೆಪಿ ಬತ್ತಳಿಕೆಯಲ್ಲಿ ಬಡವರ ಆರ್ಥಿಕ ಚೇತರಿಕೆಗೆ ಯಾವುದೇ ಕಾರ್ಯಕ್ರಮ ಇಲ್ಲವಾಗಿದೆ.
ಹೀಗಾಗಿ ಲೋಕಸಭೆ ಚುನಾವಣೆ ಗೆಲುವಿಗಾಗಿ ಹೊಸ ಅಸ್ತ್ರಗಳನ್ನು ತಯಾರಿಸುವ ಕಾರ್ಯ ನಡಸುತ್ತಿದೆ.
ಶಾಸಕ ಆರಗ ಜ್ಞಾನೇಂದ್ರ ಕೂಡ ನಂದಿತಾ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆದಿದ್ದಾರೆ.
ದೇಶಾದ್ಯಂತ ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವ ಹುನ್ನಾರ ನಡೆದಿದೆ. ದೇಶದಲ್ಲಿ ಧರ್ಮ ಸಂಘರ್ಷ ನಡೆದಿದ್ದರೆ
ಸ್ವತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಅದು ಬಿಜೆಪಿಯೇ ಕಾರಣ. ಬಿಜೆಪಿ ಪರಿವಾರ ಸಮಾಜವನ್ನು
ಒಡೆದು ಆಳುವ ತಂತ್ರ ಅನುಸರಿಸುತ್ತಿದೆ. ಬಾಂಬ್ ಹಾಕುವ ಬದಲಿಗೆ ದುರ್ಬಲ ವ್ಯಕ್ತಿಗಳನ್ನು
ಬಳಸಿಕೊಂಡು ಪ್ರಚೋದನೆ ನೀಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ತೌರೂರ ಸಂಮಾನ ಕಾರ್ಯಕ್ರಮ ಹಾಳು ಮಾಡುವ ಹುನ್ನಾರ
ಎಲ್ಲಾ ಕಾನೂನಾತ್ಮಕ ತೊಡಕುಗಳನ್ನು ಬಗೆಹರಿಸಿಕೊಂಡು ಡಿಸಿಸಿ ಬ್ಯಾಂಕ್
ಅಧ್ಯಕ್ಷರಾದ ಆರ್.ಎಂ. ಮಂಜುನಾಥ ಗೌಡರಿಗೆ ಶುಕ್ರವಾರ ಸಹಕಾರಿಗಳು, ಅಭಿಮಾನಿಗಳು “ತೌರೂರ ಸಂಮಾನ”
ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬಾರದು ಎಂಬ ಉದ್ದೇಶದಿಂದ ಬಿಜೆಪಿ
ಬೆಂಬಲಿತರು ವಿವಿಧ ಅಡಚಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅದೇ ರೀತಿ ಇಡಿ ದಾಳಿ ಕೂಡ
ಬೆಂಬಲಿಗರ ಮಾನಸಿಕ ಸ್ಥೈರ್ಯ ಅಡಗಿಸುವ ಪ್ರಯತ್ನ ನಡೆದಿದೆ. ಇಡಿ ದಾಳಿ ಕೂಡ ಕಾರ್ಯಕ್ರಮ ಮುಗಿಯುವ
ವರೆಗೆ ಮುಂದುವರೆಸುತ್ತಾರೆ ಎಂಬ ಆರೋಪಗಳು ಬೆಂಬಲಿಗರಿಂದ ವ್ಯಕ್ತವಾಗುತ್ತಿದೆ.
ವಿರೋಧಿಗಳ ಕುತಂತ್ರದ ನಡುವೆಯೂ ಮಂಜುನಾಥ ಗೌಡರ ತೌರೂರ ಸಂಮಾನ ಕಾರ್ಯಕ್ರಮ ಯಶಸ್ವಿಯಾಗಬೇಕು. ಸಂಮಾನ ಕಾರ್ಯಕ್ರಮಕ್ಕೆ ಇನ್ನಷ್ಟು ಉತ್ಪಾಹ ಪೂರ್ವಕವಾಗಿ ನಡೆಸುತ್ತೇವೆ. ಆರ್ಎಂಎಂಗೆ ಸೇರಿದ ಎಲ್ಲಾ ದಾಖಲೆಗಳು ಪಕ್ಕ ಇದ್ದು ದಾಖಲೆಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಬೆಂಬಲಿಗರು ಹೆದರುವ ಅಗತ್ಯ ಇಲ್ಲ ಎಂದು ಬೆಟ್ಟಮಕ್ಕಿ ಮನೆಯ ಮುಂಭಾಗ ಸೇರಿದ ಅಭಿಮಾನಿಗಳು ಹೇಳುತ್ತಿದ್ದಾರೆ. ತೌರೂರ ಸಂಮಾನ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸುತ್ತಿರುವ ಎಲ್ಲಾ ಕಾರ್ಯಕರ್ತರು, ಅಭಿಮಾನಿಗಳು, ಸಹಕಾರಿಗಳು ತಮ್ಮ ಕೆಲಸವನ್ನು ಮುಂದುವರೆಸುವಂತೆ ಆಪ್ತರು ಕೋರಿದ್ದಾರೆ.