ಬಿಎಸ್ಎನ್ಎಲ್ ಟವರ್ ಎಂದು ಸುಳ್ಳು ಹೇಳಿ
ಜಾಗ ಕಬಳಿಕೆ
ತೆರವುಗೊಳಿಸದಿದ್ದರೆ ಹೋರಾಟದ ಎಚ್ಚರಿಕೆ
ನೀಡಿದ ಗ್ರಾಮಸ್ಥರು
ತೀರ್ಥಹಳ್ಳಿ ತಾಲ್ಲೂಕಿನ ಗಡಿ ಗ್ರಾಮವಾದ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರುಳಿ ಗ್ರಾಮದ ಬೊಬ್ಬಿ ಮಜಿರೆ ಗ್ರಾಮದಲ್ಲಿ ಬಿಎಸ್ಎನ್ಎಲ್ ನಿರ್ಮಾಣಕ್ಕೆ ಎಂದು ಮಂಕುಬೂದಿ ಎರಚಿ ಗ್ರಾ.ಪಂ. ಸದಸ್ಯನೊಬ್ಬ ಜಾಗ ಕಬಳಿಕೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಟವರ್ಗಾಗಿ ನಿಗಧಿಪಡಿಸಿದ ಜಾಗವನ್ನು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಅಕ್ರಮವಾಗಿ ವಶಪಡಿಸಿಕೊಂಡಿದಲ್ಲದೇ ತಂತಿ ಬೇಲಿ ಸುತ್ತಿರುವುದು ಅಕ್ರಮ ಎಂದು ಅಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಲಗಾಯ್ತಿನಿಂದಲೂ ಸೊಪ್ಪು, ದರಗು ಇತ್ಯಾದಿ ಕೃಷಿ ಚಟುವಟಿಕೆಗಳಿಗಾಗಿ ರೂಢಿಸಿಕೊಂಡಿದ್ದ ಈ ಸ್ಥಳದಲ್ಲಿ ಕೆಲವು ಸಮಯದ ಹಿಂದೆ ಜೆಸಿಬಿ ಯಂತ್ರದ ಮೂಲಕ ಸಮತಟ್ಟು ಕೆಲಸ ಮಾಡಿಸಲಾಗಿದ್ದು ವಿಚಾರಿಸಿದಾಗ ಬಿಎಸ್ಎನ್ಎಲ್ ಟವರ್ ನಿರ್ಮಾಣಕ್ಕಾಗಿ ಕೆಲಸ ಮಾಡಲಾಗುತ್ತಿದೆ ಎಂಬ ಸಬೂಬು ದೊರೆತಿತ್ತು. ಆದರೆ ಈಗ ಇದಕ್ಕೂ ನಮಗೂ ಸಂಬಂಧ ಇಲ್ಲವೆಂದು ಬಿಎಸ್ಎನ್ಎಲ್ ಅಧಿಕಾರಿ ಹೇಳಿದರೆ ವಿಚಾರ ತಿಳಿದಿದ್ದೂ ಕೂಡ ಮೌನಕ್ಕೆ ಶರಣಾಗಿರುವ ಅರಣ್ಯ ಇಲಾಖೆ ಇದರ ಒಳಗುಟ್ಟು ಏನೆಂದು ಸಾರ್ವಜನಿಕರಿಗೆ ತಿಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.