ಸಾಧಕರಿಗೆ ಸಾರ್ಥಕ ಸನ್ಮಾನ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ
ಸಂಘ ತೀರ್ಥಹಳ್ಳಿ ಘಟಕದಿಂದ ವರ್ಣ ರಂಜಿತವಾಗಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳ
ಸಾಧಕರು ಮತ್ತು ಪತ್ರಿಕಾ ಬಳಗದ ವಿಶೇಷ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು
ವೇದಿಕೆಯಲ್ಲಿದ್ದ ಗಣ್ಯರು ನೆರವೇರಿಸಿದರು,
ಸಹಕಾರ, ರಾಜಕಾರಣ, ಶಿಕ್ಷಣ, ಸಮಾಜ ಸೇವೆಯಲ್ಲಿ ಜಿ.ಎಸ್. ನಾರಾಯಣ ರಾವ್, ಅತ್ಯಂತ ವಿಶಿಷ್ಠ ಹಾಗೂ ಬಡಜನತೆ ಪಾಲಿನ ಅಪತ್ಬಾಂದವನೆಂದು ಕರೆಸಿಕೊಂಡಿರುವ ಮೇಲಿನ ಕುರುವಳ್ಳಿ ಗೋಪಾಲ ಪೂಜಾರಿ, ಹಿರಿಯ ಯಕ್ಷಗಾನ ಕಲಾವಿದ ಕೊಕೊಡ್ತಿ ಕೃಷ್ಣಮೂರ್ತಿ, ಹಿರಿಯ ವಾಹನ ಚಾಲಕ, ಮಾಲೀಕ ಬಿ. ಮಂಜುನಾಥ ಶೆಟ್ಟಿ ತಮ್ಮ ಕ್ಷೇತ್ರಗಳಲ್ಲಿ 50 ವರ್ಷಕ್ಕೂ ಮಿಗಿಲಾಗಿ ನಿರಂತರ ಸೇವೆ ಸಲ್ಲಿಸಿರುವುದು ಗಮನ ಸೆಳೆಯಿತು. ಅಲ್ಲದೇ ತೀರ್ಥಹಳ್ಳಿಯಂತಹ ಊರಿನಲ್ಲಿ ವೃತ್ತಿಪರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಧೈರ್ಯ ತೋರಿದ ಮಹಮ್ಮದ್ ಶಫಿ, ನರ್ಸಿಂಗ್ ಕ್ಷೇತ್ರವನ್ನು ಆಯ್ದುಕೊಂಡು ವಿಶಿಷ್ಠ ಸಾಧನೆ ಮಾಡಿದ ಡಾ. ಅನುಪಮಾ ಮೋಹನ್, ನಿಜವಾಗಿಯೂ ತಮಗೆ ಸಲ್ಲಬೇಕಾದ ಗೌರವಾದರಗಳಿಂದ ವಂಚಿತರಾಗಿರುವ ನಾಲ್ಕು ದಶಕಕ್ಕೂ ಹೆಚ್ಚು ಕಾಲ ರಂಗ ಚಟುವಟಿಕೆಯಲ್ಲಿ ತೊಡಗಿರುವ ಸುರಾನಿ ಮ್ಯಾಥ್ಯೂ, ವಿಶೇಷ ಚೇತನ ಮಕ್ಕಳ ಪಾಲಿಗೆ ನಿಜವಾದ ಬಂಧುವಾಗಿರುವ ಶಿಕ್ಷಕ ಕುಮಾರ್, ವರನಟ ರಾಜ್ ಅವರ ಗೀತೆಗಳನ್ನು ಅಚ್ಚರಿ ಮುಟ್ಟಿಸುವಷ್ಟು ಸೊಗಸಾಗಿ ಹಾಡಬಲ್ಲ ರಮೇಶ್ ಗಾಂವಸ್ಕರ್, ಸಹಕಾರ ಮತ್ತು ಕೃಷಿಯಲ್ಲಿ ಮಹತ್ವ ಸಾಧನೆ ಮಾಡುತ್ತಿರುವ ವಿಶ್ವನಾಥ್ ಡಿ.ಪಿ. ಇವರುಗಳು ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಅಭಿನಂದನೆಗೆ ಪಾತ್ರರಾದರು.