420 ಕಾರ್ಡ್ ವಿತರಿಸಿ ಅಮಾಯಕ ಜನರ ಹಾದಿ ತಪ್ಪಿಸಿದೆ
ಬಿಟ್ಟಿದಾನ ನೀಡಲು ಕಾಮಗಾರಿಗಳ ಬಿಲ್ ತಡೆ
ಮಾಜಿ ಗೃಹ ಸಚಿವ ಜ್ಞಾನೇಂದ್ರ
ಮತದಾರರನ್ನು ವಂಚಿಸಿ ಗೆಲ್ಲುವುದು ತಪ್ಪು. ಕಾಂಗ್ರೆಸ್ ನೀಡಿದ ಗ್ಯಾರಂಟಿ ಕಾರ್ಡ್ ಶೀಘ್ರ ಜಾರಿ ಮಾಡದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮೇಲಿನ ಕುರುವಳ್ಳಿಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ಈ ಮಟ್ಟದ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ. ಹಾಗಾಗಿ ಹುಸಿ ಭರವಸೆ ನೀಡಿತ್ತು. ಈಗ ಅದನ್ನು ಈಡೇರಿಸಲಾಗದೆ ಪರದಾಟ ನಡೆಸುತ್ತಿದೆ. ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಸದಸ್ಯರು ಜನರ ಕೆಲಸಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ ಇದು ಮುಂದುವರೆದರೆ ಪಂಚಾಯತ್ ಮುತ್ತಿಗೆ ಹಾಕ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಆರ್ ಮದನ್ ಮಾತನಾಡಿ ಜ್ಞಾನೇಂದ್ರ ವಿರುದ್ಧ ಆಡಳಿತ ವಿರೋಧಿ ಅಲೆ ಇರಲಿಲ್ಲ ಅವರು ತಾಲೂಕಿನಲ್ಲಿ ಮನೆ ಮನೆ ತಲುಪಿದ್ದಾರೆ. ಮೇಲಿನ ಕುರುವಳ್ಳಿ ಭಾಗದಲ್ಲಿ ಬಿಜೆಪಿ ಬೆಳೆಯಲು ಶಂಕರಶೆಟ್ರು ಕೊಡುಗೆ ದೊಡ್ಡದು. ಜ್ಞಾನೇಂದ್ರ ಅವರ ಅವಧಿಯಲ್ಲಿ 3250 ಕೋಟಿ ಅಭಿವೃದ್ಧಿ ಆಗಿರುವುದು ಅಭಿನಂದನೀಯ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ಹೆದ್ದೂರ್ ಮಾತನಾಡಿ ಜ್ಞಾನೇಂದ್ರ ಒಂದೇ ಸಿದ್ಧಾಂತ, ಪಕ್ಷದಲ್ಲಿದ್ದು 50 ವರ್ಷ ರಾಜಕಾರಣ ಮಾಡಿದ್ದಾರೆ ಇದು ಅಪರೂಪದ ಬದ್ಧತೆ ಜನ ಇದನ್ನು ಗುರುತಿಸಿ ಬೆಂಬಲ ನೀಡಿದ್ದಾರೆ ಎಂದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯ ಚಂದವಳ್ಳಿ ಸೋಮಶೇಖರ್ ಮಾತನಾಡಿ ಕಾಂಗ್ರೆಸ್ ಸುಳ್ಳಿನ ಪಕ್ಷ ಸುಳ್ಳು ಗ್ಯಾರಂಟಿ ನೀಡಿ ಅಧಿಕಾರ ಹಿಡಿದಿದೆ. ಆದರೆ ಜ್ಞಾನೇಂದ್ರ ವಿರುದ್ಧ ಯಾವ ಸುಳ್ಳೂ ನಡೆದಿಲ್ಲ ಅವರು ಸದಾಕಾಲ ಜನರ ಜೊತೆಗೆ ಬೆರೆಯುವ ವ್ಯಕ್ತಿ ಎಂಬುದಕ್ಕೆ ಇದು ಸಾಕ್ಷಿ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಅಣ್ಣಪ್ಪ ಮಾತನಾಡಿ ಮೇಲಿನ ಕುರುವಳ್ಳಿ ಶ್ರಮಿಕರು ವಾಸಿಸುವ ಪ್ರದೇಶ ಮೊದಲು ಇಲ್ಲಿ ಕಾಂಗ್ರೆಸ್ ಗೆಲ್ಲುತ್ತಿತ್ತು ಆದರೆ ಜ್ಞಾನೇಂದ್ರ ಅವರ ಜನಪ್ರಿಯತೆ ಮುಂದೆ ಈಗ ಕಾಂಗ್ರೆಸ್ ಹಿನ್ನಡೆಗೆ ಸರಿದಿದೆ. ಸದಾಕಾಲ ಇಲ್ಲಿನ ಸಾಧಾರಣ ಜನರ ಸಮಸ್ಯೆಗೆ ಮಿಡಿದಿದ್ದಾರೆ ಎಂದರು.
ವೇದಿಕೆಯಲ್ಲಿ ಹಾರೋಗೊಳಿಗೆ ವಾಸು, ಪ್ರಕಾಶ್ ಶೆಟ್ಟಿ, ಪೂರ್ಣೇಶ್ ಪೂಜಾರಿ, ಬುಕ್ಲಾಪುರ ಪೂರ್ಣೇಶ್, ಪೆರುಮಳ್, ಆದರ್ಶ ಮುತ್ತುಗುಂಡಿ, ನಂಬಳ ಮುರುಳಿ ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಶಂಕರ್ ಶೆಟ್ಟಿ ದಂಪತಿಗಳಿಗೆ ಆರಗ ಜ್ಞಾನೇಂದ್ರ ಸನ್ಮಾನಿಸಿದರು.