ಗುದ್ದಲಿ ಪೂಜೆ ಮುನ್ನ ವಿದ್ಯುತ್ ಕಂಬಕ್ಕೆ ಬೆಂಕಿ
ಸೋಮವಾರ ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡುವ ಮುನ್ನ ಹಲವು ಗೊಂದಲ ನಡೆದು ಹೋದವು.
ಕೋಣಂದೂರು ಚತುಷ್ಪಥ ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ನಡೆಸಲು ಗೃಹಸಚಿವರು ಆಗಮಿಸುತ್ತಿದ್ದಂತೆ ವಿದ್ಯುತ್ ಕಂಬದಲ್ಲಿ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. 30 ಹಾಸಿಗೆಯ ಮಾದರಿ ಸಮುದಾಯ ಆಸ್ಪತ್ರೆ, ಹಾಗೂ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟಿಸಿ ವೇದಿಕೆ ಕಾರ್ಯಕ್ರಮ ಇನ್ನೇನು ಆರಂಭಗೊಳ್ಳಬೇಕು ಎನ್ನುವಷ್ಟರಲ್ಲಿ ಹಿಂಬದಿ ಅತಿಥಿಗಳಿಗೆ ಹಾಕಿದ್ದ ಛೇರು ಇದ್ದಕ್ಕಿದ್ದ ಹಾಗೆ ಪಲ್ಟಿ ಹೊಡೆಯಿತು. ಛೇರು ಪಲ್ಟಿಹೊಡದ ಕಾರಣ ಅದರ ಮೇಲೆ ಕುಳಿತಿದ್ದ ಅತಿಥಿಗಳು ಕೆಳಗೆ ಬಿದ್ದು ಇನ್ನಷ್ಟು ಗೊಂದಲ ಸೃಷ್ಟಿಯಾಯಿತು. ಕೆಳಗೆ ಬಿದ್ದು ಪಲ್ಪಿಹೊಡೆದ ಅತಿಥಿಗಳನ್ನು ವೇದಿಕೆಯ ಮೇಲಿದ್ದವರು ಕೈಹಿಡಿದು ಮೇಲಕ್ಕೆತ್ತಿದರು. ಒಟ್ಟಿನಲ್ಲಿ ಕಾರ್ಯಕ್ರಮ ಆರಂಭಕ್ಕೂ ಮುನ್ನ ಹಲವು ವಿಘ್ನ ನಡೆಯಿತು.
ಗೃಹಸಚಿವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಹಲವು ಶಿಷ್ಟಾಚಾರ ಇರುತ್ತದೆ. ವೇದಿಕೆ ಹಾಗೂ ಛೇರುಗಳನ್ನು ಪರಿಶೀಲಿಸುವ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು ಎಂದು ಸಾರ್ವಜನಿಕರು ದೂರಿದ್ದಾರೆ.