ಕ್ಯೂರಿಂಗ್ ಇಲ್ಲದೆಯೇ ಕಟ್ಟಡ ಉದ್ಘಾಟನೆಗೆ
ಸಜ್ಜು
ಸೋಲಿನ ಭಯದಲ್ಲಿ ಆರಗ ಜ್ಞಾನೇಂದ್ರರಿಂದ ಆತುರ
- ಅಮ್ರಪಾಲಿ ಸುರೇಶ್
ತೀರ್ಥಹಳ್ಳಿ ಪಟ್ಟಣದಲ್ಲಿ ಸುಮಾರು 14.5 ಕೋಟಿ ರೂಪಾಯಿಯಲ್ಲಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತಾಲ್ಲೂಕು ಪಂಚಾಯಿತಿ ಕಟ್ಟಡ ಅಥವಾ ಗ್ರಾಮೀಣಾಭಿವೃದ್ದಿ ಭವನ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವ ಮುಂಚೆಯೇ ಗೃಹಸಚಿವ ಆರಗ ಜ್ಞಾನೇಂದ್ರ ಭವನ ಉದ್ಘಾಟನೆಗೆ ಸಜ್ಜಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಕಟ್ಟಡ ಉದ್ಘಾಟನೆ ಮಾಡುವ ಯೋಜನೆ ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಮ್ರಪಾಲಿ ಸುರೇಶ್ ಟೀಕಿಸಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಮತ್ತೊಮ್ಮೆ ನಾನು ಗೆಲ್ಲುವುದಿಲ್ಲ, ಮುಂದೆ ಶಾಸಕನಾಗುವುದಿಲ್ಲ ಎಂಬುದು ಆರಗ ಜ್ಞಾನೇಂದ್ರರಿಗೆ ತಿಳಿದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಕಿಮ್ಮನೆ ರತ್ನಾಕರ್ ಪರವಾಗಿ ಅಲೆ ಜೋರಾಗಿದೆ. ಕ್ಷೇತ್ರದಲ್ಲಿ ನಡೆದಿರುವ ಭ್ರಷ್ಟಾಚಾರ, ಅಕ್ರಮ ವ್ಯವಹಾರಗಳಿಗೆ ಬಿಜೆಪಿ ಪೂರಕ ವಾತಾವರಣ ಸೃಷ್ಟಿಯಾಗಿರುವುದು ಗೃಹಸಚಿವರಿಗೆ ತಿಳಿದಿದೆ. ಈ ಹಿನ್ನಲೆಯಲ್ಲಿ ಕ್ಯೂರಿಂಗ್ ಕೂಡ ಸರಿಯಾಗದೆ ಇದ್ದರು ಪರವಾಗಿಲ್ಲ. ನಾನು ಉದ್ಘಾಟನೆ ಮಾಡಿಯೇ ಸಿದ್ದ ಎಂದು ಪಣ ತೊಟ್ಟಿದ್ದರು. ಗೆಲ್ಲುವ ವರ್ಚಸ್ಸು ಆರಗ ಜ್ಞಾನೇಂದ್ರರಿಗೆ ಉಳಿದಿದ್ದರೆ ಯಾವುದೇ ಕಾರಣಕ್ಕೂ ತರಾತುರಿಯ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಎಂದು ಅಮ್ರಪಾಲಿ ಸುರೇಶ್ ದೂರಿದ್ದಾರೆ.