ಮುಂಡೊಳ್ಳಿ ಕ್ವಾರಿಯ ಮರಳು...?
ನಿಯಂತ್ರಣ ತಪ್ಪಿದ ಮರಳು ಮಾಫಿಯಾ
ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಮರಳು ಮಾಫಿಯಾ ಎದ್ವತದ್ವ ನಡೆಯುತ್ತಿದೆ. ಅನುಮತಿ ಇಲ್ಲದೆ ಅಕ್ರಮ ಮರಳು ಸಾಗಾಟ ದಿನೇದಿನೇ ಹೆಚ್ಚುತ್ತಿದೆ. ಗಣಿ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಕಣ್ಣುತಪ್ಪಿಸಿ ನಡೆಯುತ್ತಿರುವ ಈ ದಂಧೆಗೆ ಬ್ರೇಕ್ ಹಾಕುವವರು ಇಲ್ಲದಂತಿದೆ.
ಇಂದು ಸಂಜೆ ಮುಂಡೊಳ್ಳಿ ಕ್ವಾರಿಯಿಂದ ಹೋಗುತ್ತಿತ್ತು ಎನ್ನಲಾದ ಎರಡು ಲಾರಿಗಳನ್ನು ಮಂಡಗದ್ದೆ ಅರಣ್ಯ ಇಲಾಖೆ ಹೆದ್ದೂರು-ಮಹಿಷಿ ಹೊಸ ಸೇತುವೆ ಬಳಿ ವಶಪಡಿಸಿಕೊಂಡಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದರು ಅಕ್ರಮ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ನಿರಂತರ ಅಕ್ರಮ ಮರಳು ಸಾಗಾಣೆಯಾಗುತ್ತಿದ್ದರು ತಡೆಹಿಡಿಯಲು ಆಡಳಿತ ವಿಫಲವಾದಂತಿದೆ.
ಗೃಹಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರದಲ್ಲಿ ಅಧಿಕಾರಿಗಳು ಲಜ್ಜೆ ಬಿಟ್ಟಂತೆ ವರ್ತಿಸುತ್ತಿದ್ದು, ಗೃಹಸಚಿವರ ಘನತೆ ಹಾಳುಮಾಡಲು ಪಣತೊಟ್ಟಂತಿದೆ. ಅಕ್ರಮ ಮರಳು ಸಾಗಣೆ ಅಧಿಕಾರಿಗಳ ಚಿತಾವಣೆಯಿಂದ ನಡೆಯುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಕೂಡಲೇ ಗೃಹಸಚಿವರು ಗಮನ ಹರಿಸಬೇಕಾಗಿದೆ.