ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಬೃಹತ್ ಪ್ರತಿಭಟನೆ

‌ರೊಚ್ಚಿಗೆದ್ದ ಗ್ರಾಮಸ್ತರು

ಯಾವುದೇ ಬಿಲ್‌ಗೆ ಸಹಿ ಹಾಕುತ್ತಿಲ್ಲ - ಆರೋಪ

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ತರೇ ಅಹೋರಾತ್ರಿ ಪ್ರತಿಭಟನೆಯನ್ನು ಮಂಗಳವಾರ ಬೆಳಗ್ಗೆಯಿಂದ ನಡೆಸಿದ್ದಾರೆ. ಅಧ್ಯಕ್ಷರಾದ ಭವ್ಯ ರಾಘವೇಂದ್ರ ಕಳೆದ ವರ್ಷದ ಮೇ ತಿಂಗಳಿನಿಂದ ಇಲ್ಲಿಯವರೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಜವಾಬ್ದಾರಿಯಿಂದ ನುಣುಚಿಕೊಂಡಿರುವುದಲ್ಲದೇ ಜನಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿತಾ ವಿರುದ್ದ ಕಾನೂನು ಬಾಹೀರವಾದ ಆರೋಪ ಮಾಡುತ್ತ ಜನತೆಯ ಹಿತಾಸಕ್ತಿಯನ್ನು ಕಡೆಗಣಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ವಿ. ಅನಿಲ್‌ ಅಧ್ಯಕ್ಷರು ಸಂಪೂರ್ಣ ಸ್ವಹಿತಾಸಕ್ತಿಗೆ ಒಳಗಾಗಿದ್ದಾರೆ. ಪಿಡಿಓ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ ಎಂದರೆ ಸಾಮಾನ್ಯ ಸಭೆ ನಡೆಸಿ ಅವರ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಬಹುದಾಗಿತ್ತು. ಮತ್ತು ಸೇವಾ ನಿಯಮ ಉಲ್ಲಂಘಟನೆಯಾಗಿದ್ದರೆ ಕಾನೂನು ಬದ್ಧವಾಗಿಯೇ ಕ್ರಮ ಕೈಗೊಳ್ಳಲು ಬೇಕಾದಷ್ಟು ದಾರಿಗಳಿವೆ. ಅವರು ಪೂರ್ವಗ್ರಹ ಪೀಡಿತಲ್ಲದಿದ್ದರೆ ಇಂದಿನ ಪ್ರತಿಭಟನಾ ಸಭೆಯಲ್ಲಿ ಸಾರ್ವಜನಿಕರ ಎದುರು ನಿಂತು ಉತ್ತರಿಸುವ ಮೂಲಕ ಸತ್ಯವೇನೆಂದು ತಿಳಿಸಬೇಕಾಗಿತ್ತು. ಆದರೆ ಕೇವಲ ಇಬ್ಬರು ಸದಸ್ಯರ ಹಿತಾಸಕ್ತಿಗಾಗಿ ಪಂಚಾಯಿತಿ ವ್ಯವಸ್ಥೆಯನ್ನು ಬಲಿಕೊಟ್ಟಿದ್ದಾರೆ. ಇದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳು ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ ಮಾತನಾಡಿ, ಹಲವಾರು ತಿಂಗಳಿನಿಂದ ಅಧ್ಯಕ್ಷರು ಯಾವುದೇ ಕಡತ ಹಾಗೂ ಬಿಲ್ಲುಗಳಿಗೆ ಸಹಿ ಮಾಡದೆ ಜನ ಹಾಗೂ ಸಿಬ್ಬಂದಿಗಳ ಆಕ್ರೋಶ ಪಿಡಿಓ ಮೇಲೆ ತಿರುಗಿಸುವಂತ ತಂತ್ರ ಮಾಡುತ್ತಿದ್ದಾರೆ. ಗ್ರಾಮ ಸಭೆ ಹಾಗೂ ಸಾಮಾನ್ಯ ಸಭೆ ಕರೆಯದೆ ಜನತೆಯು ಬವಣೆ ಪಡುತ್ತಿದ್ದಾರೆ. ವರ್ಗ 1, 15ನೇ ಹಣಕಾಸು, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರು ಪೂರೈಕೆ, ಬೀದಿದೀಪ ನಿರ್ವಹಣೆಗೆ ಕ್ರಿಯಾಯೋಜನೆ ಸಿದ್ದವಾಗದ ಕಾರಣ ಅನುಷ್ಟಾನಗೊಂಡಿಲ್ಲ. ಇದಕ್ಕೆ ನೇರ ಹೊಣೆ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಅಧಿಕಾರ ದುರುಪಯೋಗ ಕಾರಣ ಇವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಕೃಷ್ಣಕುಮಾರ್‌ ಮಾತನಾಡಿ, ಚುನಾಯಿತ ಸದಸ್ಯರು ಅಧ್ಯಕ್ಷರ ಅಧಕ್ಷ ಆಡಳಿತ ಫಲವಾಗಿ ಗ್ರಾಮಗಳಲ್ಲಿ ಜನರಿಂದ ತಪ್ಪಿಸಿಕೊಂಡು ಹೋಗುವ ಸನ್ನಿವೇಶ ಸೃಷ್ಟಿಯಾಗಿದೆ. ಕಾರಣ ಯಾವುದೇ ಸಭೆಗಳು ನಡೆಯದೇ ಜನತೆಯ ಸಣ್ಣಪುಟ್ಟ ಅರ್ಜಿಗಳು ವಿಲೇವಾರಿ ಮಾಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಗ್ರಾಮದ ವ್ಯಾಪ್ತಿಯಲ್ಲಿ ತಾಂಡವವಾಡುತ್ತಿದೆ. ಬೀದಿ ದೀಪ ಕೆಟ್ಟು ನಿಲ್ಲುತ್ತಿದೆ. ಆದರೆ ಪ್ರತಿಯೊಂದು ಸಭೆ ಆರಂಭದಲ್ಲಿ ಜನತೆಯ ಸಮಸ್ಯೆಯ ಕುರಿತು ಮಾತನಾಡುವುದನ್ನು ಬಿಟ್ಟು ಪಿಡಿಓ ಇಲ್ಲಿಂದ ವರ್ಗಾವಣೆಯಾಗದ ಹೊರತು ತಾನು ಯಾವುದೇ ಕಡತಗಳಿಗೆ ಸಹಿ ಹಾಕುವುದಿಲ್ಲ ಎನ್ನುತ್ತಾರೆ ಎಂದು ಆರೋಪಿಸಿದರು.

ತಾಲ್ಲೂಕು ಯುವ ಜೆಡಿಎಸ್‌ ಅಧ್ಯಕ್ಷ ತಲಬಿ ರಾಘವೇಂದ್ರ ಮಾತನಾಡಿ, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಟಿ.ಎಸ್.‌ ರೇಮೇಗೌಡ, ಮುನ್ನೂರು ಜಗನ್ನಾಥ ಪೂಜಾರಿ, ಕುರುವಳ್ಳಿ ಅನಿಲ್‌ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತ್ತು. ಆದರೆ ಈಗ ಜನ ದಂಗೆ ಏಳುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಷಾಧನೀಯ. ಪಂಚಾಯಿತಿಯ ಇಂದಿನ ದುಸ್ಥಿತಿಗೆ ಕೆಲವೇ ಸದಸ್ಯರು ಕಾರಣವಾಗುತ್ತಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಹುಣಸವಳ್ಳಿಯಲ್ಲಿ ಸದಸ್ಯರೊಬ್ಬರ ಚಿತಾವಣೆ ಮೇರೆಗೆ ಅಕ್ರಮ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಒಂದೇ ಹಕ್ಕುಪತ್ರ ತೋರಿಸಿ ಎಕರೆ ಗಟ್ಟಲೇ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಬೇಲಿ ಸುತ್ತಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಮಹಿಳಾ ಮುಖಂಡರಾದ ಪವಿತ್ರ ಮಾತನಾಡಿ, ಹಿಂದಿನ ಪಿಡಿಓ ಇದ್ದಾಗ ನಮ್ಮ ಮನೆಯ ನಲ್ಲಿ ನೀರಿನ ಸಂಪರ್ಕಕ್ಕಾಗಿ ಶಾಸಕರಾದ ಆರಗ ಜ್ಞಾನೇಂದ್ರ ಅವರ ಹತ್ತಿರ ಹೋಗಬೇಕಾದ ಪರಿಸ್ಥಿತಿ ಇಲ್ಲಿತ್ತು. ಆದರೆ ಈಗಿನ ಪಿಡಿಓ ಕಾನೂನು ಬದ್ದವಾದ ಯಾವುದೇ ಕೆಲಸವನ್ನು ಸ್ವಲ್ಪವೂ ವಿಳಂಬಿಸದೆ ಮಾಡುತ್ತಿದ್ದಾರೆ. ಅವರ ಮೇಲೆ ಕೆಲವರು ಮಾಡುತ್ತಿರುವ ಆರೋಪ ಸಂಪೂರ್ಣ ಸ್ವಹಿತಾಸಕ್ತಿಯಿಂದ ಕೂಡಿದೆ ಎಂದು ಹೇಳಿದರು.

ಕಸಬಾ ಸೊಸೈಟಿ ಅಧ್ಯಕ್ಷ ರಾಜ್‌ ಕಮಲ್, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಉಮೇಶ್‌, ಹೊರಬೈಲು ಕೃಷ್ಣಮೂರ್ತಿ, ಮುತ್ತುಗುಂಡಿ ಆದರ್ಶ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಮಾತನಾಡಿದರು.

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಭಾಗಗಳಿಂದ ಸಾರ್ವಜನಿಕರು ಪ್ರತಿಭಟನೆಗೆ ಆಗಮಿಸಿದ್ದರು. ಪ್ರತಿಭಟನೆಯಲ್ಲಿ ರಮ್ಯ ಅನಿಲ್‌, ನಾಗರಾಜ್‌ ಕುಲಾಲ್‌, ಚಿತ್ರಾ, ಹೊರಬೈಲು ಪೂರ್ಣೇಶ್, ರೇವತಿ ಭಾಸ್ಕರ್‌, ನಿಶ್ಚಲ್‌ ಜಾದೂಗಾರ್‌, ಅನಿತಾ ರಾಜ್‌, ಸುಮಿತ್ರ ಸತೀಶ್‌, ಹೊರಬೈಲು ನಾಗರಾಜ್‌, ವಿನಯ್‌ ಆಚಾರ್‌, ಕೋಮನೆ ದಿನೇಶ್‌, ಪ್ರಶಾಂತ್‌, ತಲಬಿ ಅಮರ್‌, ಗಿರಿಜಾ, ಸರಸ್ವತಿ, ಲಿಂಗರಾಜ್‌, ಮೇಲಿನಕುರುವಳ್ಳಿ ಮಂಜುನಾಥ್‌, ಚಂದ್ರಶೇಖರ್ ತಲಬಿ, ಪಾವನ ಆದರ್ಶ ಮುಂತಾದವರು ಭಾಗವಹಿಸಿದ್ದರು.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post