ಎಸ್ಪಿ, ಡಿವೈಎಸ್ಪಿ ವಾಗ್ದಾನ - ಪ್ರತಿಭಟನೆ ಬೆಳಿಗ್ಗೆ ವಾಪಾಸ್
'ಬಿ' ರಿಪೋರ್ಟ್ ಹಾಕದಿದ್ದರೆ ಸೋಮವಾರದಿಂದ ಉಪವಾಸ ಸತ್ಯಾಗ್ರಹ -ಕಿಮ್ಮನೆ ಎಚ್ಚರಿಕೆ
"ಗೃಹಸಚಿವರು ಅಸಮರ್ಥರು ಅಂತ ಇಡೀ ರಾಜ್ಯದ ಜನ ಹೇಳುತ್ತಿದ್ದಾರೆ. ಸ್ವತಃ ಬಿಜೆಪಿಯರೇ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಗೃಹ ಇಲಾಖೆ ಅಲ್ಲ ಯಾವ ಇಲಾಖೆಯೂ ಇವರುಗೆ ಆಗಲ್ಲ. ಕ್ಷೇತ್ರದಲ್ಲಿ ಬೇಡದ ಕೆಲಸಗಳನ್ನು ಮಾಡಿಕೊಂಡು ಸೆಕ್ಯುರಿಟಿಯಾಗಲು ಮಾತ್ರ ಸಾಧ್ಯ" ಎಂದು ಕಿಮ್ಮನೆ ದೂರಿದರು.
ಮಂಗಳವಾರ ರಾತ್ರಿ ತೀರ್ಥಹಳ್ಳಿ ಪಟ್ಟಣದ ಹೋಟೆಲ್ ನಲ್ಲಿ ಐದು ಜನರ ನಡುವೆ ಮಾರಾಮಾರಿ ನಡೆದಿತ್ತು. ಬುಧವಾರ 8 ಜನರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಇದರಲ್ಲಿ ಮೂವರು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸತ್ಯಾಸತ್ಯತೆ ತಿಳಿಯದೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬುಧವಾರ ರಾತ್ರಿ 8 ಗಂಟೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದರು.
ರಾತ್ರಿ ಸುಮಾರು 12.30 ರ ವರೆಗೆ ಡಿವೈಎಸ್ಪಿ ತಪ್ಪು ಸರಿಪಡಿಸುತ್ತೇವೆ ಎಂಬ ವಾದ ಮುಂದಿಟ್ಟು ನಿರ್ದೋಶಿಗಳಿಗೆ 'ಬಿ' ರಿಪೋರ್ಟ್ ಹಾಕುತ್ತೇವೆ. ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂದಾನ ಮಾತುಕತೆ ನಡೆಸಿದರು. ಆದರು 'ಬಿ' ರಿಪೋರ್ಟ್ ನೀಡುವವರೆಗೆ ಧರಣಿ ಮುಂದುವರೆಸುವುದಾಗಿ ತಿಳಿಸಿದ್ದರು. ಬೆಳಿಗ್ಗೆ 6.30ಕ್ಕೆ ಎಸ್ಪಿ ಕರೆ ಮಾಡಿ ಪ್ರಕರಣದಲ್ಲಿ ಭಾಗಿಯಾಗದವರನ್ನು ಕೈಬಿಟ್ಟು ಚಾರ್ಜ್ ಶೀಟ್ ತಯಾರಿಸುವುದಾಗಿ ಭರವಸೆ ನೀಡಿದರು. ಇದರಿಂದ ಧರಣಿ ಹಿಂಪಡೆದು ಭರವಸೆ ಈಡೇರದಿದ್ದರೆ ಸೋಮವಾರದಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.