ಕಟ್ಟಡ ಮಾರಾಟದ ದಾಖಲೆ ಪರಿಶೀಲನೆ
ಶಾರೀಖ್ ನ 1ಕೋಟಿಗೂ ಹೆಚ್ಚಿನ ವ್ಯವಹಾರ ಶೋಧ
ಬಿಜೆಪಿ ಸುಳ್ಳಿಗೆ ಮಾಧ್ಯಮ ಬಳಕೆ - ಕಿಮ್ಮನೆ ಗರಂ
'ನನ್ನ ಮನೆಯ ಮೇಲೆ ಇಡಿ ದಾಳಿಯಾಗಿದೆ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡಿದೆ. ಮನೆ ಪರಿಶೀಲನೆ ನಡೆಸಿದರೆ ₹10 ಸಾವಿರ ರೂಪಾಯಿ ಸಿಗುವುದಿಲ್ಲ. ಬಿಜೆಪಿಯ ಸುಳ್ಳುಗಳಿಗೆ ದೃಶ್ಯಮಾಧ್ಯಮ ಪೂರಕವಾಗಿ ಸುದ್ದಿ ಭಿತ್ತರಿಸಿದೆ. ದೇಶ ಮತ್ತು ನಾಡು ಶಾಂತಿಯಿಂದ ಇರಲಿ. ಕಾಂಗ್ರೆಸ್ ಪಕ್ಷಕ್ಕೂ ಶಾರಿಖ್ ಕುಟುಂಬಕ್ಕೂ ಸಂಬಂಧ ಇಲ್ಲ. ಇಡಿ ಅಧಿಕಾರಿಗಳು ಕಚೇರಿ ಬಾಡಿಗೆಯ ಕುರಿತು ಮಾಹಿತಿ ಕೇಳಿದ್ದು ಪೂರೈಸಿದ್ದೇನೆ. ಆರಗ ಜ್ಞಾನೇಂದ್ರ ನಾನು ನೀಡಿದ ಮುಂಗಡ ಹಣ 10 ಲಕ್ಷ ನೀಡಿದರೆ ತಕ್ಷಣ ಕಟ್ಟಡ ತೆರವುಗೊಳಿಸುತ್ತೇನೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಖ್ ಅಜ್ಜಿ ಮನೆಯಲ್ಲಿ ಬುಧವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು.
ಶಾರೀಖ್ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿ, ಆರ್ಥಿಕ ವಹಿವಾಟು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈಚೆಗೆ ಶಾರಿಕ್ ತಂದೆಗೆ ಸೇರಿದ ಆಸ್ತಿ ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿ ಇರುವ ಎರಡು ಅಂತಸ್ತಿನ ಕಟ್ಟಡ 1ಕೋಟಿಗೂ ಅಧಿಕ ಮೊತ್ತಕ್ಕೆ ದುಬೈನಲ್ಲಿರುವ ವ್ಯಕ್ತಿಗೆ ಮಾರಾಟವಾಗಿದ್ದು ಹಣದ ವಹಿವಾಟು ಮೂಲ ಕಂಡು ಹಿಡಿಯಲು ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಟ್ಟಡದ ಬಾಡಿಗೆದಾರರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹೋದರನ ಮಗ ಕೆ.ಜಿ. ನವೀನ ಬಿನ್ ಕೆ.ಎಂ. ಗೋಪಾಲಕೃಷ್ಣ ಅವರು 2015ರ ಜೂನ್ ತಿಂಗಳಲ್ಲಿ ಸ್ವತ್ತಿನ ಮಾಲೀಕ ಅಸಿಮ್ ಅಬ್ದುಲ್ ಮಜೀದ್ ಬಿನ್ ದಿ ಅಬ್ದುಲ್ ಮಜೀದ್ ಅವರಿಂದ 8 ವರ್ಷದ ಅವಧಿಗೆ 10 ಲಕ್ಷ ರೂಪಾಯಿ ಮುಂಗಡ ಹಾಗೂ ತಿಂಗಳಿಗೆ 1,000 ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಾಡಿಗೆ ಅವಧಿ 2023ರ ಜೂನ್ ನಲ್ಲಿ ಕೊನೆಗೊಳ್ಳಲಿದೆ.
ಕರಾರು ಪತ್ರವನ್ನು ಕಿಮ್ಮನೆ ರತ್ನಾಕರ್ ಇಡಿ ಅಧಿಕಾರಿಗೆ ನೀಡುವ ಮೂಲಕ ತನಿಖೆಗೆ ಸಹಕರಿಸಿದ್ದಾರೆ.