ಕೆ.ಟಿ. ಗುರುರಾಜ್ಗೆ ಸೈಬರ್ ಕಾಪ್ ಅವಾರ್ಡ್
ಶಿವಮೊಗ್ಗ: ಸೈಬರ್ ಕ್ರೈಂ ಪ್ರಕರಣವನ್ನು ಅತ್ಯುತ್ತಮವಾಗಿ ತನಿಖೆ ಮಾಡಿದ ಪೊಲೀಸರಿಗೆ ರಾಷ್ಟ್ರಮಟ್ಟದಲ್ಲಿ ನೀಡುವ ಇಂಡಿಯಾ ಸೈಬರ್ ಕಾಪ್ ಅವಾರ್ಡ್ಗೆ ಶಿವಮೊಗ್ಗದ ಸೈಬರ್, ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧ ಠಾಣೆ (CEN) ಹಿಂದಿನ ಅಧಿಕಾರಿ ಕೆ.ಟಿ.ಗುರುರಾಜ್ ಪಾತ್ರರಾಗಿದ್ದಾರೆ.ಗುರುರಾಜ್ ತನಿಖೆ ಮಾಡಿದ ಪ್ರಕರಣವು ರಾಷ್ಟ್ರಮಟ್ಟದ ಅತ್ಯುತ್ತಮ ಪ್ರಕರಣಗಳಲ್ಲೊಂದು ಎಂಬ ಶ್ರೇಯಕ್ಕೂ ಪಾತ್ರವಾಗಿದೆ. ಭೋಪಾಲ್ನ ಸೈಬರ್ ಆ್ಯಂಡ್ ಹೈಟೆಕ್ ಪೊಲೀಸ್ ಸ್ಟೇಷನ್ನ ಇನ್ಸ್ಪೆಕ್ಟರ್ ನೀತೂ ಕನಸರಿಯಾ ಹಾಗೂ ಮುಂಬೈನ ವೆಸ್ಟ್ ರೀಜನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುವರ್ಣ ಶಿಂಧೆ ಅಂತಿಮ ಸುತ್ತಿನಲ್ಲಿ ಗುರುರಾಜ್ ಅವರೊಂದಿಗೆ ಸ್ಪರ್ಧೆಯಲ್ಲಿದ್ದರು.
ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪರಿಸರದಲ್ಲಿ ಆರು ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಮಕ್ಕಳ ಅಶ್ಲೀಲ ಚಿತ್ರದ ಮಾಹಿತಿ ಆಧರಿಸಿ ಗುರುರಾಜ್ ಆರೋಪಿಯ ಪತ್ತೆ ಮಾಡಿದ್ದರು. ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗಿ 20 ವರ್ಷ ಶಿಕ್ಷೆಗೆ ಒಳಗಾಗಿದ್ದಾನೆ.