ಸ್ಕೂಟಿ ಅಪಘಾತದಿಂದ ವ್ಯಕ್ತಿ ಮರಣ...?
ಅಕ್ರಮ ಮರಳು ದಂಧೆ ಮುಳುವಾಯಿತೇ...!
ಕೋಣಂದೂರು ಸಮೀಪದ ಹೊಸಕೇರಿ ಗ್ರಾಮದ ದೋಡ್ಡಹಕ್ಲು ಗ್ರಾಮದಲ್ಲಿ ತಡರಾತ್ರಿ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ನೊಣಬೂರು ಗ್ರಾಮದ ಚಂದವಳ್ಳಿ ಪ್ರದೀಪ್ (34) ಎಂದು ಗುರುತಿಸಲಾಗಿದೆ.
ರಾತ್ರಿ ಸುಮಾರು 12 ಗಂಟೆಯಾದರು ಪ್ರದೀಪ್ ಮನೆಗೆ ಬಾರದಿದ್ದಾಗ ಕುಟುಂಬದ ಸದಸ್ಯರು ಆತಂಕದಲ್ಲಿ ಹುಡುಕಲು ಆರಂಭಿಸಿದ್ದಾರೆ. ರಸ್ತೆ ಮಧ್ಯೆ ಸ್ಕೂಟಿಯಿಂದ ಕೆಳಗೆ ಬಿದ್ದಿದ್ದ ಪ್ರದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರಿಗೆ ತೆರಚಿದ ಗಾಯ ಹಾಗೂ ತಲೆಗೆ ಸಣ್ಣ ಪೆಟ್ಟಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಮರಳನ್ನು ಕಡಿಮೆ ದರದಲ್ಲಿ ಸರಬರಾಜು ಮಾಡುತ್ತಿದ್ದ ಎಂಬ ಕಾರಣಕ್ಕೆ ಕೆಲವರೊಂದಿಗೆ ಕಿತ್ತಾಟ ನಡೆದಿತ್ತು. ಹೀಗಾಗಿ ಪ್ರದೀಪ್ ಮೇಲೆ ದೊಡ್ಡ ಪಿತೂರಿ ನಡೆದಿತ್ತು ಎಂಬ ಗುಮಾನಿ ಗ್ರಾಮದಲ್ಲಿ ವ್ಯಕ್ತವಾಗುತ್ತಿದೆ.
ಅಕ್ರಮ ಮರಳು ಸಾಗಣೆ ವಿವಿಧ ಗಲಾಟೆಗೆ ಕಾರಣವಾಗುತ್ತಿದೆ. ಆರಗ ಗ್ರಾಮದಲ್ಲಿ ವಾರದ ಹಿಂದೆ ಗಲಾಟೆ ಮಾಡುವುದಾಗಿ ಪೊಲೀಸರಿಗೆ ಮಾಹಿತಿ ನೀಡಿ ದೊಂಬಿ ನಡೆದಿತ್ತು. ಆರೋಪಿಗಳು ಗರ್ಭಿಣಿ ಮತ್ತು ಮಹಿಳೆಯರ ಮುಂದೆಯೇ ಬಿಯರ್ ಬಾಟಲ್ ಗಳನ್ನು ಒಡೆದು ರಂಪಾಟ ನಡೆಸಿದ್ದರು. ಅಲ್ಲದೆ ಹಲ್ಲೆಯನ್ನು ಮಾಡಿದ ಪ್ರಕರಣ ಮಾಸುವ ಮುನ್ನವೇ ಇಂತಹದ್ದೊಂದು ಅಪಘಾತ ಸುದ್ದಿ ವರದಿಯಾಗಿದೆ. ಪೊಲೀಸ್ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು ಮರಳು ಅಕ್ರಮ ವಹಿವಾಟಿಗೆ ಕಡಿವಾಣ ಹಾಕಬೇಕಾಗಿದೆ. ಇಲಾಖೆಗೆ ಮಾಹಿತಿ ಇದ್ದರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.