ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಅವ್ಯವಸ್ಥೆ
ಎಳ್ಳಮಾವಾಸ್ಯೆ ಜಾತ್ರೆಯ ಭದ್ರತೆಗೆ ಆಗಮಿಸಿದ ಸಿಬ್ಬಂದಿಗಳ ಪೇಚಾಟ
ಸಾಂದರ್ಭಿಕ ಚಿತ್ರ |
ತೀರ್ಥಹಳ್ಳಿಯ ಅದ್ದೂರಿ ಎಳ್ಳಮಾವಾಸ್ಯೆ ಜಾತ್ರೆ ಆರಂಭವಾಗಿದ್ದು ಮೂರು ದಿನಗಳ ವೈಭವ ಶುಕ್ರವಾರ ಬೆಳಗ್ಗಿನ ತೀರ್ಥಸ್ನಾನದಿಂದ ಆರಂಭಗೊಳ್ಳಲಿದೆ. ಸುಮಾರು 13 ಲಕ್ಷ ಬಜೆಟ್ ಅಲ್ಲಿ ಎಳ್ಳಮಾವಾಸ್ಯೆ ಸಂಭ್ರಮ ಕಳೆಗಟ್ಟಿದೆ. ಈ ನಡುವೆ ತೀರ್ಥಹಳ್ಳಿಯ ಜಾತ್ರೆಯ ಭದ್ರತೆಗೆ ಆಗಮಿಸಿರುವ ಜಿಲ್ಲೆಯ ವಿವಿಧ ತಾಲ್ಲೂಕಿನ ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್ಆರ್ ಪಿ ಸಿಬಂದಿಗಳಿಗೆ ವಸತಿ ಸೌಕರ್ಯ ಇಲ್ಲದಿರುವುದು ಗೊಂದಲದ ವಾತಾವರಣ ನಿರ್ಮಿಸಿದೆ.
ಪುರುಷ ಸಿಬ್ಬಂದಿಗಳು ಸ್ನೇಹಿತರು, ಕೆಎಸ್ಆರ್ ಪಿ ವಾಹನದಲ್ಲಿ ಮೂರು ದಿನಗಳು ಆರಾಮಾಗಿ ನಿದ್ರಿಸಬಹುದು. ಆದರೆ ಮಹಿಳಾ ಸಿಬ್ಬಂದಿಗಳಿಗೆ ಈ ಅವ್ಯವಸ್ಥೆ ಇರುಸು ಮುರುಸಿಗೆ ಕಾರಣವಾಗಿದೆ. ಗುರುವಾರ ಸಂಜೆ ತೀರ್ಥಹಳ್ಳಿ ಪಟ್ಟಣದ ರಥಬೀದಿಗೆ ಬಂದಿಳಿದಿರುವ ಸಿಬ್ಬಂದಿಗಳ ಲಗೇಜ್ ಇಡಲು ಕೂಡ ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರದ ಭದ್ರತೆಗಾಗಿ ಬಂದಿರುವ ಮಹಿಳಾ ಸಿಬ್ಬಂದಿಗಳಿಗೆ ಅಭದ್ರತೆ ನಿರ್ಮಾಣವಾದಂತಿದೆ.
ಗೃಹಸಚಿವ ಆರಗ ಜ್ಞಾನೇಂದ್ರರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲೇ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಭದ್ರತೆ ಇಲ್ಲದಂತಾಗಿದೆ. ಸಚಿವರ ಸ್ವಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿದ್ದು ಸಿಬ್ಬಂದಿಗಳು ತಮ್ಮೊಳಗೆ ನೊಂದು ಬೆಂದ ಘಟನೆ ಗುರುವಾರ ರಾತ್ರಿ ನಡೆದಿದೆ. ಇದೇನಿದು ವ್ಯವಸ್ಥೆ? ಪೊಲೀಸ್ ಠಾಣೆಯೇ ಗತಿಯಾ? ಕೆಎಸ್ಆರ್ ಪಿ ವಾಹನ ಏರಬೇಕು? ಎಲ್ಲಿಗೆ ಹೋಗುವ? ನಮ್ಮ ಪರಿಸ್ಥಿತಿ ಹೀಗೇಕೆ ಎಂಬ ಗೊಂದಲ ಸಿಬ್ಬಂದಿಗಳ ನಡುವೆಯೇ ಎದ್ದು ತೋರುತ್ತಿತ್ತು. ಭದ್ರತೆ ನೀಡುವವರ ಮೇಲೆ ಜಾತ್ರಾ ಸಮಿತಿ ನಿರ್ಲಕ್ಷ್ಯ ವಹಿಸಬಾರದು. ಮಾನವೀಯ ನೆಲೆಗಟ್ಟಿನಲ್ಲೂ ಸಿಬ್ಬಂದಿಗಳನ್ನು ನೋಡಬೇಕು ಎಂಬ ಗಂಭೀರ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.