ಪುರುಷೋತ್ತಮ ತಲವಾಟ
ಗರ್ತಿಕೆರೆ ರಾಘಣ್ಣ
ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
ರಂಗಕರ್ಮಿ ಪುರುಷೋತ್ತಮ ತಲವಾಟ ಮತ್ತು ಸಂಗೀತ ಕ್ಷೇತ್ರದಲ್ಲಿ ಅತಿಎತ್ತರದ ಸಾಧನೆ ಮಾಡಿದ ರಾಜ್ಯೋತ್ಸವ ಪುರಸ್ಕೃತ ಗರ್ತಿಕೆರೆ ರಾಘಣ್ಣ ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಪುರುಷೋತ್ತಮ ಅವರು ಪ್ರಸಾದನ, ಬೆಳಕು, ರಂಗಸಜ್ಜಿಕೆ ವಿಭಾಗದಲ್ಲಿ ಸಕ್ರಿಯವಾಗಿರುವ ಅವರು ನೀನಾಸಂ, ರಂಗಾಯಣ, ಸಾಣೇಹಳ್ಳಿ ಶಿವಕುಮಾರ್ ಕಲಾಸಂಘ, ರಾಷ್ಟ್ರೀಯ ನಾಟಕ ಶಾಲೆಗಳಲ್ಲಿ ಕೆಲಸ ಮಾಡಿದ್ದಾರೆ.
ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ದ್ವೀಪ’, ‘ಹಸೀನಾ’, ‘ಕನಸೆಂಬ ಕುದುರೆಯನ್ನೇರಿ’, ‘ಒಂದು ಕೊಲೆಯ ಸುತ್ತ’, ಪಿ.ಶೇಷಾದ್ರಿ ನಿರ್ದೇಶನದ ‘ವಿದಾಯ’ ಸೇರಿದಂತೆ ಹಲವು ಸಿನೆಮಾಗಳಲ್ಲಿ ಅವರು ನಟಿಸಿದ್ದಾರೆ.
ಸುಗಮ ಸಂಗೀತ ಕ್ಷೇತ್ರದಲ್ಲಿ ಗರ್ತಿಕೆರೆ ರಾಘಣ್ಣ ಅವರದ್ದು ಬಹುದೊಡ್ಡ ಸಾಧನೆ. ಸಾವಿರಾರು ಹಾಡುಗಳ ರಾಗ ಸಂಯೋಜನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಪ್ರಮುಖ 10 ಹಾಡುಗಳನ್ನು ಆಯ್ಕೆ ಮಾಡಿಕೊಂಡರೆ ಅದರಲ್ಲಿ ಕನಿಷ್ಠ 2 ಹಾಡುಗಳು ರಾಘಣ್ಣ ಅವರದ್ದಾಗಿರುತ್ತದೆ. ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ ಸಮಕಾಲೀನರು.
ಹೊಟ್ಟೆಪಾಡಿಗಾಗಿ ಸೈಕಲ್ ಶಾಪ್ ನಡೆಸುತ್ತಿದ್ದ ರಾಘಣ್ಣ ಅವರ ಕುಂಚದಲ್ಲಿ ತಾಯೆ ನಿನ್ನ ಮಡಿಲಲಿ, ಮಾನವನೆದೆಯಲಿ ಆರದೆ ಉಳಿಯಲಿ, ಮನಸು ಸಾರದ ಕನಸು ಕಾಣದ, ಅಮ್ಮಾ ಎಂಬ ಮಾತಿಗಿಂತ ಮುಂತಾದವು ಹಾಡುಗಳು ಅರಳಿದೆ.
ಇವರ ಸಾಧನೆಗೆ ರಾಜ್ಯೋತ್ಸವ, ಸಂತ ಶಿಶುನಾಳ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದೆ.