ಕಬ್ಬಿಣದ ಕಡಲೆಯಾದ ಕಾಂಗ್ರೆಟ್ ಟಿಕೆಟ್ ಹಂಚಿಕೆ
ಸ್ಪಷ್ಟ ನಿರ್ಧಾರ ತಿಳಿಸದ ಹೈಪವರ್ ಕಮಿಟಿ
ಬಿಜೆಪಿಯ ಪಾಲಿಗೆ ಮುಂಬರುವ ವಿಧಾನಸಭಾ ಚುನಾವಣಾ ಫಲಿತಾಂಶ ಆಶಾದಾಯಕವಾಗಿಲ್ಲ ಎಂಬ ಸೂಚನೆ ಎರಡರಿಂದ
ಮೂರು ಸುತ್ತಿನ ಸರ್ವೆಯಲ್ಲಿ ಸಿಗುತ್ತಲೇ ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ಹೆಚ್ಚುತ್ತಿದೆ. ಈ ಬಾರಿ ಬಹುತೇಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಟಿಕೇಟ್ಗಾಗಿ
ಪೈಪೋಟಿ ಕಂಡು ಬರತೊಡಗಿದೆ.
ಇದರ ಪರಿಣಾಮ ತೀರ್ಥಹಳ್ಳಿ ಕ್ಷೇತ್ರದ ಮೇಲೂ ಆಗಿದ್ದು ಇತ್ತೀಚೆಗಷ್ಟೇ ಮಾಜಿ ಸಚಿವ ಹಾಗೂ ಕಳೆದ
ನಾಲ್ಕು ಬಾರಿ ಟಿಕೆಟ್ ಗಿಟ್ಟಿಸಿಕೊಂಡಿರುವ ಕಿಮ್ಮನೆ ರತ್ನಾಕರ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಇದಾಗುತ್ತಿದ್ದಂತೆಯೇ ಈ ಬಾರಿ ಶತಾಯಗತಾಯ ಕಾಂಗ್ರೆಸ್ ಟಿಕೆಟ್ನೊಂದಿಗೆ ತೀರ್ಥಹಳ್ಳಿ ವಿಧಾನಸಭಾ
ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿರುವ ಆರ್.ಎಂ. ಮಂಜುನಾಥ ಗೌಡ ಕೂಡ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಮತ್ತಷ್ಟು ಕುತೂಹಲ ಹೆಚ್ಚಿಸುವಂತೆ ಕಾಂಗ್ರೆಸ್ನ ಹಿರಿಯ ನಾಯಕರಲ್ಲಿ ಒಬ್ಬರಾದ ಕಡ್ತೂರು ದಿನೇಶ್
ಕೂಡ ಯಾರೂ ನಿರೀಕ್ಷಿಸದ ರೀತಿಯಲ್ಲಿ ಟಿಕೆಟ್ಗಾಗಿ ಆರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.
ಹಾಗೆ ನೋಡಿದರೆ ಮಂಜುನಾಥ ಗೌಡರು ಕಾಂಗ್ರೆಸ್ ಪಕ್ಷಕ್ಕೆ ಆಗಮನದ ತನಕ ಕಿಮ್ಮನೆ ರತ್ನಾಕರ್ ವಿರುದ್ದ
ಅಥವಾ ಜೊತೆಯಲ್ಲಿ ಟಿಕೆಟ್ಗಾಗಿ ಅರ್ಜಿ ಹಾಕುವ ಪ್ರತಿಸ್ಪರ್ಧಿಗಳೇ ಇರಲಿಲ್ಲ ಎನ್ನಬಹುದು. ಅಕಸ್ಮಾತ್
ಅರ್ಜಿ ಸಲ್ಲಿಸಿದರೂ ಅದು ನಾಮಕಾವಸ್ಥೆ ಎನ್ನುವಂತಿತ್ತು. ಆದರೀಗ ಮಂಜುನಾಥ ಗೌಡ ಟಿಕೆಟ್ಗಾಗಿ ಅರ್ಜಿ
ಸಲ್ಲಿಸುತ್ತಿರುವಂತೆ ಸಹಜವಾಗಿ ಕ್ಷೇತ್ರದ ರಾಜಕಾರಣ ವಲಯದಲ್ಲಿ ಈ ಬಾರಿಯ ಕಾಂಗ್ರೆಸ್ ಟಿಕೆಟ್ ಯಾರ
ಪಾಲಾಗಲಿದೆ ಎಂಬ ಚರ್ಚೆ ಗರಿಗೆದರಿದೆ.
ವಾಡಿಕೆಯಂತೆ ಪಕ್ಷದ ಜಿಲ್ಲಾ ಸಮಿತಿ ಪ್ರತಿ ತಾಲ್ಲೂಕುಗಳ ಅಂತಿಮ ಅಭ್ಯರ್ಥಿಯ ಹೆಸರನ್ನು ಶಿಫಾರಸ್ಸು
ಮಾಡುವುದು ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಕೆಲವೊಮ್ಮೆ ಈ ಸಂಪ್ರದಾಯ ಬದಿಗೊತ್ತಿ
ಅನಿರೀಕ್ಷಿತವಾಗಿ ಟಿಕೆಟ್ ಗಿಟ್ಟಿಸಿದವರೂ ಇದ್ದಾರೆ. ಆದರೆ ಕಾಂಗ್ರೆಸ್ನ ಜಿಲ್ಲಾ ಸಮಿತಿ ಇಲ್ಲಿಯವರೆಗೆ
ತೀರ್ಥಹಳ್ಳಿ ತಾಲ್ಲೂಕು ಸೇರಿದಂತೆ ಉಳಿದ ತಾಲ್ಲೂಕುಗಳಿಂದ ಕೂಡ ನಿಖರವಾಗಿ ಅಭ್ಯರ್ಥಿಗಳ ಪಟ್ಟಿ ಸಲ್ಲಿಸಿಲ್ಲ
ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದಲ್ಲದೇ ಕಿಮ್ಮನೆ ರತ್ನಾಕರ್ ಸಹಜವಾಗಿಯೇ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಆರ್.ಎಂ.
ಮಂಜುನಾಥ ಗೌಡ ಕೂಡ ಪ್ರಬಲವಾಗಿ ಟಿಕೆಟ್ಗಾಗಿ ಪ್ರಯತ್ನಿಸುತ್ತಿರುವುದರಿಂದ ಇಬ್ಬರನ್ನೂ ಪಕ್ಷದ ರಾಷ್ಟ್ರೀಯ
ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ,
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಚುನಾವಣೆ ಉಸ್ತುವಾರು
ಮಯೂರ್ ಜೈಕುಮಾರ್ ಮುಂತಾದವರನ್ನು ಒಳಗೊಂಡ ರಾಜ್ಯದ ಹೈಪರ್ ಕಮಿಟಿ ಅಭಿಪ್ರಾಯ ಕೇಳಿದ್ದು. ಮತ್ತು
ಪಕ್ಷದ ಅದೇಶದ ಪ್ರಕಾರ ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡುವಂತೆ ಸ್ಪಷ್ಟವಾಗಿ ಸೂಚಿಸಿದೆ ಎನ್ನಲಾಗಿದೆ.
ತೀರ್ಥಹಳ್ಳಿ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರಗಳ ಟಿಕೆಟ್ ವಿಚಾರದಲ್ಲಿ ಇಲ್ಲಿಯ ತನಕ ಹೈಕಮಾಂಡ್
ತನ್ನ ಸ್ಪಷ್ಟ ನಿರ್ಧಾರವನ್ನು ತಿಳಿಸಿಲ್ಲ ಎಂದು ಹೇಳಲಾಗುತ್ತಿದೆ.
ಹಾಗಾಗಿ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ. ಮಂಜುನಾಥ ಗೌಡರ ಆಪ್ತ ವಲಯದಲ್ಲಿ ಟಿಕೆಟ್ ಕುರಿತ
ಕುತೂಹಲ ಹಾಗೆ ಉಳಿದುಕೊಂಡಿದೆ.