ಕನ್ನಡ ಭವನ ಕಟ್ಟಡ ಕಾಮಗಾರಿಗೆ ಚಾಲನೆ
ಸ್ವಂತ ಕಟ್ಟಡದ ಕನಸು ನನಸು ಮಾಡುವತ್ತ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ
ನಿವೇಶನ ದೊರಕಲು ಕಾರಣರಾಗಿದ್ದ ಕಿಮ್ಮನೆ
ಇಡೀ ರಾಷ್ಟ್ರದಲ್ಲಿ ವಿಶ್ವದ ಮೇರು ದಾರ್ಶನಿಕ ಸಾಹಿತಿ ಕುವೆಂಪು ಹಾಗೂ
ಕನ್ನಡದ ಸಾಕ್ಷಿ ಪ್ರಜ್ಞೆಯಂತಿದ್ದ ಡಾ.ಯು.ಆರ್. ಅನಂತಮೂರ್ತಿ ಅವರ ಮೂಲಕ ಎರಡು ಜ್ಞಾನಪೀಠ ಪ್ರಶಸ್ತಿ
ಪಡೆದ ಏಕಮಾತ್ರ ತಾಲ್ಲೂಕು ಎಂಬ ಹೆಗ್ಗಳಿಕೆ ತೀರ್ಥಹಳ್ಳಿಗಿದೆ. ಆದರೆ ಇಲ್ಲಿಯ ತನಕವೂ ಇಲ್ಲಿನ ಸಾಹಿತ್ಯ
ಪರಿಷತ್ತಿಗೆ ಸ್ವಂತದೊಂದು ಕಟ್ಟಡ ಇಲ್ಲವೆಂಬ ಕೊರಗು ಸಾಹಿತ್ಯ ಪ್ರಿಯರಿಗೆ ಕಾಡುತ್ತಲೇ ಇತ್ತು. ಇದೀಗ
ಕಸಾಪ ಸ್ವಂತ ಕಟ್ಟಡದಲ್ಲಿ ತನ್ನ ಚಟುವಟಿಕೆ ಕೈಗೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ.
ಬಾಳೇಬೈಲಿನಲ್ಲಿ ಕಳೆದ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ ಭವನ ಕಟ್ಟಡ ಕಾಮಗಾರಿಗೆ 5 ಲಕ್ಷ ರೂಪಾಯಿ ವೆಚ್ಚದ ನಿರ್ಮಾಣ ಕಾರ್ಯಕ್ಕೆ ಇಂದು ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಚಾಲನೆ ನೀಡಿದ್ದಾರೆ. ಈ ಅನುದಾನವನ್ನು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ನೀಡಿದೆ.
ರಾಜೇಂದ್ರ ಬುರಡಿಕಟ್ಟಿ ಅಧ್ಯಕ್ಷಾವಧಿಯಲ್ಲಿ ಶಾಲೆಯ ಆವರಣದಲ್ಲಿ ಚಟುವಟಿಕೆ ಆರಂಭಗೊಂಡಿತ್ತು. ನಂತರ ನೆಂಪೆ ದೇವರಾಜ್ ಅಧ್ಯಕ್ಷತೆಯಲ್ಲಿ ಕಸಾಪಕ್ಕೆ ಜಾಗ ಮಂಜೂರಾಯಿತು. ಜೊತೆಗೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿ ಕಟ್ಟಡ ನಿರ್ಮಾಣಗೊಂಡಿತ್ತು. ಆದರೆ ನಂತರ ಆರು ವರ್ಷದ ಅವಧಿಯಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ.
ತಾಲ್ಲೂಕು ಕೇಂದ್ರದಲ್ಲಿ ಸಾಹಿತ್ಯ ಚಟುವಟಿಕೆಗೆ ಕಟ್ಟಡ ಅವಶ್ಯಕತೆ
ಇತ್ತು. ಅದನ್ನು ಬಹಳ ಹತ್ತಿರದಿಂದ ಗುರುತಿಸಿದ್ದೇನೆ. ನನ್ನ ಅವಧಿಯಲ್ಲಿ ಇನ್ನಷ್ಟು ಸಹಾಯ ಮಾಡುತ್ತೇನೆ
ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ,
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ,
ಮುಖ್ಯಾಧಿಕಾರಿ ಕುರಿಯಾ ಕೋಸ್, ಮಾಜಿ ಅಧ್ಯಕ್ಷೆ ಶಬನಮ್, ಸದಸ್ಯರಾದ ಗೀತಾ ರಮೇಶ್, ಜೋತಿ ಮೋಹನ್,
ಬಿ.ಗಣಪತಿ, ಮಂಜುಳಾ ಉಪಸ್ಥಿತರಿದ್ದರು.