ಸೆಪ್ಟೆಂಬರ್ 19: ಸುವರ್ಣ ಸಂಸ್ಕೃತಿ ಭವನದಲ್ಲಿ ಕಾರ್ಯಕ್ರಮ
"ರಂಗ ಭೀಷ್ಮನ ನೆನೆವಿನಲ್ಲಿ" ರಂಗಗೀತೆ, ನಾಟಕ
ರಂಗಭೂಮಿ ದಿಗ್ಗಜ ಬಿ.ವಿ. ಕಾರಂತರ ಜನ್ಮದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 19ರ ಸೋಮವಾರ ಶಿವಮೊಗ್ಗ ರಂಗಾಯಣದ ಸುವರ್ಣ ಸಂಸ್ಕೃತಿ ಭವನದಲ್ಲಿ ಸಂಜೆ 6.30ಕ್ಕೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರಂತ ಸಂಗೀತ ಸಂಯೋಜನೆ ರಂಗಗೀತೆಗಳನ್ನು ರಂಗಾಯಣ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ. ನಂತರ ಕರ್ನಾಟಕದ ಕ್ರಿಯಾಶೀಲ ರಂಗನಿರ್ದೇಶಕ ಶ್ರೀಪಾದ ಭಟ್ಟ್ ನಿರ್ದೇಶನದ "ಮಾಧವಿ" ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಹೇಳಿದರು.
ಸ್ತ್ರೀ ಸಂವೇದನೆಯ ಕಥಾಹಂದರ ಹೊಂದಿರುವ ಮಾಧವಿ ನಾಟಕದ ಸಹ ನಿರ್ದೇಶನವನ್ನು ಎಂ. ಗಣೇಶ್ ಭೀಮನಕೋಣೆ ಮಾಡಿದ್ದು, ಉದಯೋನ್ಮುಖ ರಂಗ ಕಲಾವಿದರಾದ ದಿವ್ಯಶ್ರೀ ನಾಯಕ್ ಸುಳ್ಯ ಮತ್ತು ಶರತ್ ಬೋಪಣ್ಣ ಅಭಿನಯವಿದೆ. ರಾಜ್ಯಾದ್ಯಾಂತ ಈ ನಾಟಕ ಯಶಸ್ವಿ ಪ್ರದರ್ಶನಗೊಂಡಿದೆ ಎಂದರು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮೈಸೂರಿನ ಹಿರಿಯ ರಂಗಕರ್ಮಿ ಹುಲಿಗೆಪ್ಪ ಕಟ್ಟೀಮನಿ ಭಾಗವಹಿಸಲಿದ್ದಾರೆ. ರಂಗ ಸಮಾಜದ ಸದಸ್ಯ ಡಾ.ಟಿ.ಆರ್. ಗುರುಪ್ರಸಾದ್ ಅವರು ಕಾರಂತರ ವ್ಯಕ್ತಿತ್ವ, ಸುದೀರ್ಘ ರಂಗಭೂಮಿ ಸೇವೆಗಳ ಬಗ್ಗೆ ಮಾತನಾಡಲಿದ್ದಾರೆ. ವೇದಿಕೆಯಲ್ಲಿ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಡಾ.ಎ.ಸಿ. ಶೈಲಜಾ ಉಪಸ್ಥಿತಿ ಇದೆ ಎಂದಿದ್ದಾರೆ."ರಂಗ ಭೀಷ್ಮ" ರಂಗಾಯಣ ಸಂಸ್ಥಾಪಕ ಬಿ.ವಿ. ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ರಂಗಾಸಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಂಗಚಟುವಟಿಕೆ ಪ್ರೋತ್ಸಾಹಿಸಬೇಕೆಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಕೋರಿದ್ದಾರೆ.