ಈ ನಿರ್ಧಾರ 2006ರ ಸಾರ್ಕ್ ದೇಶಗಳ ಒಪ್ಪಂದದ ಭಾಗ
ಆರಗ ಜ್ಞಾನೇಂದ್ರ ಸೂಕ್ತ ಮಾರ್ಗದರ್ಶಿ ಸೂತ್ರ ಅನುಸರಿಸಲಿದ್ದಾರೆ
ಭೂತಾನ್ ಅಡಿಕೆ ಆಮದು ನಿರ್ಧಾರಕ್ಕೆ ಹೆಚ್ಚು ಕಿವಿಗೊಡದಿರಿ. ಕರ್ನಾಟಕದ ಅದರಲ್ಲಿಯೂ ಮಲೆನಾಡ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಭೂತಾನ್ ದೇಶದಿಂದ 17000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ರಾಜಕೀಯ ಪ್ರೇರಿತ ಚರ್ಚೆಗಳು ಆರಂಭ ಆಗಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ರಾಜ್ಯ ಅಡಿಕೆ ಕಾರ್ಯ ಪಡೆಯ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರ ಅವರು ಕೇಂದ್ರದ ನಿರ್ಧಾರಕ್ಕೆ ಹಾಗೂ ಈಗಿರುವ ಆತಂಕವನ್ನು ಪರಿಹರಿಸುತ್ತಾರೆ ಎಂಬ ಆಶಯ ನಮ್ಮೆಲ್ಲರಲಿದೆ ಎಂದು ತೀರ್ಥಹಳ್ಳಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮೇಗರವಳ್ಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಅಡಿಕೆಗೆ ಈ ನಿರ್ಧಾರದಿಂದ ಯಾವುದೇ ತೊಂದರೆ ಆಗದೆ ಇರುವ ರೀತಿ ಜ್ಞಾನೇಂದ್ರ ಅವರು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರುವ ಪ್ರಯತ್ನವನ್ನು ಶೀಘ್ರದಲ್ಲೇ ಕೈಗೊಳ್ಳಲಿದ್ದಾರೆ. ಹಾಗೂ ಸಮಸ್ತ ಮಲೆನಾಡಿನ ಅಡಿಕೆ ಬೆಳೆಗಾರರ ಹಿತ ಕಾಯಲಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದೆಲ್ಲ ಅಡಿಕೆ ನಿಷೇಧದ ಗುಮ್ಮ ಬಂದಾಗ ಅಡಿಕೆ ಕಾನ್ಸರ್ ತರುವ ವಸ್ತು ಎಂದು ವರದಿ ನೀಡಿದಾಗ ರೈತರ ಪರವಾಗಿ ಸರ್ಕಾರಗಳ ಗಮನ ಸೆಳೆದು ಬೆಳೆಗಾರರ ಹಿತ ಕಾಯ್ದ ಆರಗ ಜ್ಞಾನೇಂದ್ರ ಅವರು ಮತ್ತೊಮ್ಮೆ ನಮ್ಮೆಲ್ಲರ ಪರ ನಿಲ್ಲಲಿದ್ದಾರೆ. ಹಿಂದೆ ಕನಿಷ್ಠ ಆಮದು ಶುಲ್ಕ ವಿಧಿಸಲು ಹೋರಾಟ ನಡೆಸಿ ವಾಣಿಜ್ಯ ಸಚಿವರಾಗಿದ್ದ ನಿರ್ಮಲ ಸೀತರಾಮನ್ ಅವರಿಗೆ ಸಮಸ್ಯೆಯ ಗಂಭೀರತೆಯನ್ನು ತಿಳಿಸಿ ಆಮದಿಗೆ ಶುಲ್ಕ ಪಾವತಿ ಮಾಡುವ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಪರಿಣಾಮವಾಗಿ ಇಂದು ಕನಿಷ್ಠ ಆಮದು ಸುಂಕದ ನಿಯಮ ಜಾರಿಯಲ್ಲಿದೆ. ಇದರ ಫಲವಾಗಿ ಈ ದಿನ ಅಡಿಕೆ ಬೆಲೆ ಸ್ಥಿರವಾಗಿ ಉತ್ತಮ ದರವನ್ನು ನಾವು ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಡಿಕೆ ಬೆಲೆ ಹಾಗೂ ಅದರ ಸುತ್ತಲಿನ ಸಾಕಷ್ಟು ಸಮಸ್ಯೆಗೆ 35 ವರ್ಷಗಳ ಸತತ ಹೋರಾಟ ಮಾಡಿ ರೈತರ ಪರವಾಗಿ ಸರ್ಕಾರಗಳು ಯಾವುದೇ ಇರಲಿ ಅದಕ್ಕೆ ಸಮಸ್ಯೆ ಎದುರಾದಾಗ ತಮ್ಮ ಸಂಪರ್ಕ ಬಳಸಿ ಸಂಬಂಧಿಸಿದ ಸಚಿವರನ್ನು ಕೇಂದ್ರ ಮಟ್ಟದಲ್ಲಿ ಭೇಟಿ ಮಾಡಿ ನಿಯೋಗ ತೆಗೆದುಕೊಂಡು ಹೋಗಿ ಅಡಿಕೆಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ಅದೇ ರೀತಿ ಬೆಳೆಗಾರರ ಹಿತವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರ ಹೋರಾಟದ ರೀತಿಗೆ ನಾವು ಮೆಚ್ಚುಗೆ ವ್ಯಕ್ತಪಡಿಸಬೇಕು. ಅಲ್ಲದೆ ಈ ಬಾರಿ ಕೂಡ ಅವರು ನಮ್ಮೆಲ್ಲರ ಜೊತೆ ನಿಲ್ಲುವ ಮೂಲಕ ಸಮಸ್ಯೆಯನ್ನು ಶೀಘ್ರ ಇತ್ಯರ್ಥಕ್ಕೆ ಮತ್ತೊಮ್ಮೆ ನಮ್ಮೊಂದಿಗೆ ಕೈ ಜೋಡಿಸಲಿದ್ದಾರೆ.
ಈ ಆಮದು ಗುಮ್ಮದ ಸುದ್ದಿಗೆ ರೈತರು ದೃತಿಗೆಡಬೇಡಿ ಧೈರ್ಯ ಕಳೆದುಕೊಳ್ಳದಿರಿ.
ನಿಮ್ಮಂದಿಗೆ ಸಾಮಾನ್ಯ ರೈತ ಕುಟುಂಬದ ಆರಗ ಜ್ಞಾನೇಂದ್ರ ಇರಲಿದ್ದಾರೆ. ಈ ವಿಚಾರದಲ್ಲಿ ಮತ್ತೊಮ್ಮೆ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡಲಿದ್ದಾರೆ. ಆಮದು ಗುಮ್ಮಕ್ಕೆ ಭಯ ಬೇಡ ಎಂದು ರಕ್ಷಿತ್ ಮೇಗರವಳ್ಳಿ ತಿಳಿಸಿದ್ದಾರೆ.