ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ
ದೀನದಯಾಳ್ ಉಪಾಧ್ಯಾಯ ಸ್ಮರಣೆಯಂದು ಕಮಲೋತ್ಸವ
ಗಾಂಧಿ, ಶಾಸ್ತ್ರಿ ಜಯಂತಿಯಂದು ಖಾದಿಮೇಳ
ಪ್ರಧಾನಿ ನರೇಂದ್ರ ಮೋದಿ ದೇಶಕಂಡ ಅಪ್ರತಿಮ ನಾಯಕ. ಬಡವರ ಕಲ್ಯಾಣಕ್ಕಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅಭಿವೃದ್ದಿಗೆ ಪೂರಕ ವಾತಾವರಣ ಕಲ್ಪಿಸಿದ ಕೇಂದ್ರ ಸರ್ಕಾರ ರಾಜ್ಯಕ್ಕೆ 1.29 ಲಕ್ಷ ಕೋಟಿ ಅನುದಾನ ನೀಡಿದೆ. ಸೇವೆಯೇ ಸಂಘಟನೆ ಎಂಬ ಘೋಷಣೆಯಡಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರ ವರೆಗೆ 15 ದಿನಗಳ ವಿವಿಧ ಕಾರ್ಯಕ್ರಮ ಒಳಗೊಂಡ ಸೇವಾಪಾಕ್ಷಿಕ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಜನರೊಂದಿಗೆ ಬೆರೆತು ಸಂಕಷ್ಟ ಪರಿಹರಿಸುವ ಕೆಲಸ ಮಾಡುತ್ತೇವೆ ಎಂದು ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಹೇಳಿದರು.
ಸೆ. 17,18 ರಂದು ಮೋದಿ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ, ವಿಶೇಷ ಚೇತನರಿಗೆ ಕೃತಕ ಕಾಲು ಜೋಡಣೆ, ಬೂಸ್ಟರ್ ಕೋವಿಡ್ ಲಸಿಕೆ ಅಭಿಯಾನ, ರಕ್ತದಾನ ಶಿಬಿರ, 22 ರಿಂದ 26ರವರೆಗೆ ಅಮೃತ ಸರೋವರ ಸಸಿನಡುವ ಕಾರ್ಯಕ್ರಮ, 24 ಮತ್ತು 25 ರಂದು ದೀನದಯಾಳ್ ಸ್ಮರಣೆ ಅಂಗವಾಗಿ ಪ್ರತಿ ಬೂತ್ ಮಟ್ಟದಲ್ಲಿ ಕಮಲೋತ್ಸವ, 25 ರಿಂದ 28ರವರೆಗೆ ಸರ್ಕಾರದ ಸೌಲಭ್ಯ ಪಡೆದಿರುವ ಫಲಾನುಭವಿಗಳ ಸಮಾವೇಶ, 29 ರಂದು ಪತ್ರ ಬರಹ, ಅಂಗನವಾಡಿ ಸೇವಾ ದಿವಸ್, 30 ರಂದು ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ, ಅಕ್ಟೋಬರ್ 2ರ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಸ್ವದೇಶಿ ಖಾದಿ ಮೇಳ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ನರೇಗಾ, ರಾಷ್ಟ್ರೀಯ ಕೃಷಿ ವಿಕಾಸ, ಕಿಸಾನ್ ಕ್ರೆಡಿಟ್, ಆರೋಗ್ಯ, ಮಹಿಳಾ-ಮಕ್ಕಳ ಸಬಲೀಕರಣ, ಹೆದ್ದಾರಿ ನಿರ್ಮಾಣ, ನಗರಾಭಿವೃದ್ದಿ, ಇ-ಶ್ರಮಿಕ್ ಕಾರ್ಡ್, ಅಟಲ್ ಪಿಂಚಣಿ, ಆತ್ಮನಿರ್ಭರ ನಿಧಿ, ಮೇಕ್ ಇನ್ ಇಂಡಿಯಾ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ತಂತ್ರಜ್ಞಾನ ಬಳಕೆಗೆ ಉತ್ತೇಜನ, ಕೋವಿಡ್ ಲಸಿಕೆ, ಗ್ರಾಮ ಪಂಚಾಯಿತಿಗಳಿಗೆ ಅಮೃತ ಯೋಜನೆ ಮುಂತಾದ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಪಕ್ಷ ತಲುಪಲು ಸಾಧ್ಯವಾಗದ ಜನರನ್ನು ತಲುಪಿ ಯಶಸ್ಸಿಯಾಗಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪದ್ಮಿಣಿ, ಮುಖಂಡ ಋಷಿಕೇಶ್, ಸೇವಾ ಪಾಕ್ಷಿಕ ಸಂಚಾಲಕರಾದ ಮಧುರಾಜ್ ಹೆಗಡೆ, ಹಸಿರುಮನೆ ನಂದನ್, ಪ್ರಶಾಂತ್ ಕುಕ್ಕೆ ಇದ್ದರು.