ಗಮನ ಸೆಳೆದ ಸೀಬಿನಕರೆ ಸ.ಹಿ.ಪ್ರಾ.ಶಾಲೆ
ವಿಶೇಷ ಆಸಕ್ತಿ ವಹಿಸಿ ಕಾರ್ಯಕ್ರಮದಲ್ಲಿ ಭಾಗಿಯಾದ ಆರಗ
ಶಾಲೆಗಳಲ್ಲಿ ಸಾಮರಸ್ಯದ ಭಾವನೆ ಮೂಡಲು ಉತ್ತಮವಾದ ಸಾಂಸ್ಕೃತಿಕ ವಾತಾವರಣ ಇರಬೇಕು. ಶಾಲೆಗಳು ಭವಿಷ್ಯದ ಮೆಟ್ಟಿಲುಗಳಾದ್ದರಿಂದ ಮಕ್ಕಳನ್ನು ನಮ್ಮ ದೇಶದ ಹೆಮ್ಮೆಯ ಸಂಸ್ಕೃತಿಯನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಬೆಳೆಸಬೇಕು. ಸೀಬಿನಕೆರೆಯ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ರೂಪುಗೊಳ್ಳುತ್ತಿದೆ. ಇಲ್ಲಿನ ಶಾಲಾಭಿವೃದ್ದಿ ಸಮಿತಿ, ಶಿಕ್ಷಕರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷ್ಣ ವೇಷದ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿದ ಪುಟಾಣಿಗಳು ಪಾಲ್ಗೊಂಡಿದ್ದಾರೆ. ವಿಶೇಷವೆಂದರೆ ಈ ಸ್ಪರ್ಧೆಯಲ್ಲಿ ಮುಸ್ಲಿಂ ಸಮುದಾಯದವರೂ ಕೂಡ ವಿಶೇಷ ಆಸಕ್ತಿವಹಿಸಿ ತಮ್ಮ ಮಕ್ಕಳನ್ನು ಸ್ಪರ್ಧೆಗೆ ಕಳಿಸಿರುವುದು ಮೆಚ್ಚಿಗೆ ಮೂಡಿಸಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ತಾಲ್ಲೂಕಿನ ಸೀಬಿನಕೆರೆ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ಅಂಗನವಾಡಿಯಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಏರ್ಪಡಿಸಿದ್ದ ಛದ್ಮವೇಷ ಹಾಗೂ ಕೃಷ್ಣವೇಷದ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ಶಾಲೆಯ ಅಭಿವೃದ್ದಿಗಾಗಿ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಿದ್ದೇವೆ. ಅದನ್ನು ಶಾಲಾಭಿವೃದ್ದಿ
ಮಂಡಳಿ ಮತ್ತು ಶಿಕ್ಷಕರು ಸದುಪಯೋಗ ಪಡಿಸಿಕೊಂಡಿರುವುದು ಮಾದರಿಯಾಗಿದೆ. ಎಲ್ಲಾ ಕಡೆ ಇದೇ ರೀತಿ ಸರ್ಕಾರಿ
ಶಾಲೆ ಅಭಿವೃದ್ದಿ ಹೊಂದಿದಲ್ಲಿ ಬಡಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿದೆ ಎಂದು ಹೇಳಿದರು.
ಶಾಲಾಭಿವೃದ್ದಿ ಸಮಿತಿಯ ನಾಗರಾಜ್ ಮತ್ತು ಮುಖ್ಯೋಪಾದ್ಯಾಯರ ನೇತೃತ್ವದಲ್ಲಿ ವಿಶೇಷ ಕಾಳಜಿ ವಹಿಸಿ
ಈ ಸ್ಪರ್ಧೆಯನ್ನು ಏರ್ಪಾಡು ಮಾಡಲಾಗಿತ್ತು. ಬಹುತೇಕ ಎಲ್ಲಾ ಮಕ್ಕಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ
ಭಾಗವಹಿಸಿದ್ದರು. ಅಂಗನವಾಡಿ ಎಲ್ಕೆಜಿ, ಯುಕೆಜಿ ಮಕ್ಕಳ ಅಚ್ಚುಕಟ್ಟಾದ ವೇಷಭೂಷಣ ಎಲ್ಲರ ಗಮನ ಸೆಳೆಯಿತು.
ತೀರ್ಪುಗಾರರಾಗಿ ಪತ್ರಕರ್ತ ಮೋಹನ್ ಮುನ್ನೂರು ಮತ್ತು ಕಲಾವಿದ, ವಕೀಲ ಆಡಿನಸರ ಸತೀಶ್ ಭಾಗವಹಿಸಿದ್ದರು.