ರಸ್ತೆಯಲ್ಲಿ ಸಸಿ ನಾಟಿ…!

ಗೃಹಸಚಿವರಿಗೆ ಧಿಕ್ಕಾರ
ಜನಪ್ರತಿನಿಧಿ, ಶಾಸಕರಿಗೆ ಧಿಕ್ಕಾರ…
ಅಡಿಕೆ, ಬಾಳೆ, ಭತ್ತ ನಾಟಿ ಮೂಲಕ ಪ್ರತಿಭಟನೆ
ನಮ್ಮೂರಗೋಳು ಕೇಳೊರ್ಯಾರು
?

ಬೆಳ್ಳಂಬೆಳಗ್ಗೆ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಊರಿನ ಹಿರಿ-ಕಿರಿಯ ನಾಗರೀಕರು ಗೃಹಸಚಿವ ಆರಗ ಜ್ಞಾನೇಂದ್ರ, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ, ರಸ್ತೆ ಪ್ರಾಧಿಕಾರ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳ ವಿರುದ್ದ ಧಿಕ್ಕಾರ ಕೂಗಿದ ಘಟನೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ವಾರಂಬಳ್ಳಿ, ನಿವಣೆ ಸಮೀಪ ನಡೆದಿದೆ.


ತೀರ್ಥಹಳ್ಳಿ - ಹೊಸನಗರ ತಾಲ್ಲೂಕಿನ ಗಡಿ ಭಾಗದ ವಾರಂಬಳ್ಳಿ, ನಿವಣೆ, ಗೊರಗೋಡು, ಜಯನಗರ, ಹೇರಗಲ್ಲು, ಕೊಳಗಿ, ಗೊರದಳ್ಳಿ, ಅಲಗಾರು, ಹುಣಸೆಮಕ್ಕಿ ಗ್ರಾಮಸ್ಥರು ಅಡಿಕೆ, ಬಾಳೆ ಸಸಿ, ಭತ್ತದ ಸಸಿಗಳನ್ನು ಕೆಸರಿನಿಂದ ಮುಚ್ಚಿಕೊಂಡಿರುವ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ವಿಶೇಷವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿನಿತ್ಯ ಈ ಭಾಗದಲ್ಲಿ 100ಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿದ್ದು ಗ್ರಾಮದ ಸಂಪರ್ಕ ಕೊಂಡಿಯಾಗಿದೆ. ಎಷ್ಟೇ ಮನವಿ ನೀಡಿದರು ರಸ್ತೆ ಅಭಿವೃದ್ದಿ ಆಗುತ್ತಿಲ್ಲ. ಆರಗ ಜ್ಞಾನೇಂದ್ರ ಅವರನ್ನು ವಿಚಾರಿಸಿದರೆ ನಿಮ್ಮ ರಸ್ತೆ ಸದ್ಯದಲ್ಲೇ ಮಾಡಿಸಿಕೊಡುತ್ತೇನೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.


ಸ್ವಾತಂತ್ರ್ಯ ಲಭಿಸಿ 75ನೇ ವರ್ಷದ ಅಮೃತ ಮಹೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿದ್ದೇವೆ. ಆದರೆ ಗ್ರಾಮೀಣ ಪ್ರದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ನಾಲ್ಕು ವರ್ಷಗಳ ಹಿಂದೆ ನೆಟ್ವರ್ಕ್‌ ಸಮಸ್ಯೆ ಎಂದು ಪತ್ರ ಬರೆದಿದ್ದಾಗಲು ಇಂತಹದ್ದೇ ತಾತ್ಸಾರದ ಉತ್ತರಗಳು ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಪ್ರತಿನಿತ್ಯ ವಾರಂಬಳ್ಳಿ ಶಾಲೆಗೆ ನಡೆದುಕೊಂಡು ಹೋಗುತ್ತೇವೆ. ಸ್ನೇಹಿತರು ಸೈಕಲ್‌ನಲ್ಲಿ ಶಾಲೆಗೆ ಹೋಗಲು ಆಗುತ್ತಿಲ್ಲ. ಹಾಳಾದ ರಸ್ತೆ ದುರಸ್ಥಿಯಾಗದೆ ವಿದ್ಯಾರ್ಥಿಗಳು, ಸವಾರರು ಜಾರಿ ಬೀಳುವಂತಾಗಿದೆ ಎಂದು ಶಾಲಾ ವಿದ್ಯಾರ್ಥಿನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.








ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post