ಗೃಹಸಚಿವರ ವ್ಯರ್ಥ ಓಡಾಟ
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಈಗೆಲ್ಲಿ…?
ಶೀಘ್ರ ಪರಿಹಾರಕ್ಕೆ ಅಮರನಾಥ್ ಶೆಟ್ಟಿ ಆಗ್ರಹ
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಳೆಯಿಂದ ಭಾರಿ ಪ್ರಮಾಣದ ಹಾನಿಯಾಗಿದೆ. ಗೃಹಸಚಿವ ಆರಗ ಜ್ಞಾನೇಂದ್ರ ಒತ್ತಡದ ನಡುವೆಯೂ ತಾಲ್ಲೂಕಿನಲ್ಲಿ ಆಗಿರುವ ಹಾನಿಗಳನ್ನು ವೀಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಶೀಘ್ರ ಪರಿಹಾರ ನೀಡುವ ಕೆಲಸ ಇನ್ನೂ ಆರಂಭಿಸಿಲ್ಲ. ಜಿಲ್ಲೆಯ ಸಮಸ್ಯೆಗಳನ್ನು ಆಲಿಸುವ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹಾಗೂ ಸಂಸದ ಬಿ.ವೈ. ರಾಘವೇಂದ್ರ ತೀರ್ಥಹಳ್ಳಿಯನ್ನು ನಿರ್ಲಕ್ಷಿಸಿದ್ದಾರೆ. ಎಲ್ಲಾ ತಾಲ್ಲೂಕು ಕೇಂದ್ರಗಳಿಗೂ ಭೇಟಿ ನೀಡಿ ಶೀಘ್ರ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ತಾಲ್ಲೂಕಿನಲ್ಲಿ ಆಗಿರುವ ಮಳೆಹಾನಿಗೆ ಪರಿಹಾರ ನೀಡುತ್ತಿಲ್ಲ. ಕಾಟಾಚಾರದ ಓಡಾಟ ಮಾಡಲು ಮಾತ್ರ ಗೃಹಸಚಿವ ಆರಗ ಜ್ಞಾನೇಂದರ ಸೀಮಿತರಾಗಿದ್ದಾರೆ ಎಂದು ತೀರ್ಥಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ ಆರೋಪಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಈವರೆಗೂ 100ಕ್ಕೂ ಹೆಚ್ಚು ಮನೆಗಳು ಹಾಳಾಗಿವೆ. ಗಾಳಿ ಮಳೆಗೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಇಲ್ಲದೆ ರೈತಾಪಿ, ಬಡವರ್ಗ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೈಚಳಿ ಬಿಟ್ಟು ಕೆಲದ ಮಾಡುವ ಅಧಿಕಾರಿಗಳು ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿಲ್ಲ. ಮನೆ ನೆಲಸಮಗೊಂಡರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ವಿಶೇಷ ಕಾರ್ಯಕ್ರಮಗಳ ಅತಿಥಿಯಾಗಿ ಆಗಮಿಸುವ ಉಸ್ತುವಾರಿ ಸಚಿವರು, ಸಂಸದರು ಜನರ ಸಮಸ್ಯೆ ಕೇಳುತ್ತಿಲ್ಲ. ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಅಮರನಾಥ ಶೆಟ್ಟಿ ಆಗ್ರಹಿಸಿದ್ದಾರೆ.