ಹಾದಿಗಲ್ಲು ಗ್ರಾಮದಲ್ಲಿ ಹಾಡಹಗಲೆ ಘಟನೆ

ನೀರು ಕೇಳುವ ನೆಪದಲ್ಲಿ ದರೋಡೆಗೆ ಯತ್ನ

ಜನ ಸಂಪರ್ಕ ಸಭೆ ಮಾಡದ ಪೊಲೀಸ್ ಇಲಾಖೆ ವ್ಯರ್ಥ
ಜನ ಸ್ನೇಹಿಯಾಗಿರದ ಪೊಲೀಸರು
ನಾಗರೀಕರನ್ನು ಭಯದಲ್ಲಿರಿಸಿದ ಸಿಬ್ಬಂದಿಗಳು

ಗಾಯಗೊಂಡ ಮಹಿಳೆ

ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗ ಗ್ರಾಮದ ಸಿದ್ದಾಪುರದಲ್ಲಿ ದರೋಡೆಗೆ ಪ್ರಯತ್ನಿಸಿ ಸಿಕ್ಕಿ ಬಿದ್ದ ಪ್ರಕರಣ ದಾಖಲಾಗಿದೆ. ಕೋಣಂದೂರಿನಲ್ಲಿ ಜೆಸಿಬಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಯುವಕರು ಮಹಿಳೆಯೊಬ್ಬರು ಮನೆಯಲ್ಲಿ ಇರುವುದನ್ನು ಗಮನಿಸಿ ಓರ್ವ ಯುವಕ ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದಾನೆ. ಮತ್ತೊಬ್ಬ ಕಾರಿನಲ್ಲಿ ಪರಾರಿಯಾಗುವುದಕ್ಕೆ ಸಹಕಾರ ನೀಡಿದ್ದಾನೆ. ನೀರು ತರುತ್ತಿದ್ದಂತೆ ಮಹಿಳೆಯ ಬಾಯಿ ಮುಚ್ಚಿ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತುಕೊಳ್ಳುವ ಯತ್ನ ನಡೆಸಿದ್ದಾನೆ. ಮಹಿಳೆ ಪ್ರತಿರೋಧ ತೋರಿಸಿ ಆತನಿಂದ ತಪ್ಪಿಕೊಂಡು ಕಿರುಚಾಡಿದ್ದಾರೆ. ಮಹಿಳೆಯ ಕೂಗು ಕೇಳುತ್ತಿದ್ದಂತೆ ಅಕ್ಕಪಕ್ಕದ ಜನರು ಒಟ್ಟಾಗಿದ್ದಾರೆ. ಅಷ್ಟರಲ್ಲಿ ಯುವಕ ಹೌಹಾರಿ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದವ ಓಡಿಹೋಗಲು ಆಗದೆ ಸಿಕ್ಕಿಬಿದ್ದಿದ್ದಾನೆ.
ಇಬ್ಬರು ಯುವಕರು ಬಯಲು ಸೀಮೆಯಿಂದ ಜೆಸಿಬಿ ಕೆಲಸಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಕಾರು ಮಾಲೀಕರು ಕೋಣಂದೂರಿನವರದ್ದೇ ಆಗಿರುವುದರಿಂದ ಕಳ್ಳ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಕೋಣಂದೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ.
ಕುತ್ತಿಗೆ ಭಾಗದಲ್ಲಿ ಗಾಯಗೊಂಡಿರುವುದು.

ಗೃಹಸಚಿವರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಪದೇ ಪದೇ ಇಂತಹ ಕಳ್ಳತನ ಪ್ರಕರಣ ನಡೆಯುತ್ತಿದ್ದರು ಪೊಲೀಸ್ ಇಲಾಖೆ ಮೌನ ವಹಿಸಿದಂತಿದೆ. ಪೊಲೀಸ್ ಸಿಬ್ಬಂದಿಗಳು ನಾಗರೀಕರನ್ನು ಭಯದಲ್ಲಿ ಇರಿಸಿದ್ದರಿಂದ ಇಲಾಖೆಯ ಯಾವುದೇ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗುತ್ತಿಲ್ಲ. ಗ್ರಾಮ ಪಂಚಾಯಿತಿಯ ಕೆಡಿಪಿ ಸಭೆ, ಗ್ರಾಮಸಭೆ ಮತ್ತು ಇಲಾಖೆ ವತಿಯಿಂದ ಜನರನ್ನು ಮನವೊಲಿಸುವ ಕಾರ್ಯಕ್ರಮಗಳು ದೂರವಾದಂತಿದೆ.
ಆರೋಪಿ ಕಾರು ಚಾಲಕ

ಬೈಕ್ ಹಿಡಿಯಲು ಸೀಮಿತರಾದರೇ...
ಪೊಲೀಸ್ ಇಲಾಖೆ ಕಾನೂನುಗಳನ್ನು ಮೀರಿ ಮನಸೋಇಚ್ಚೆ ಬೈಕು, ಕಾರುಗಳನ್ನು ಮಾತ್ರ ಹಿಡಿಯಲು ಸೀಮಿತರಾಗಿದ್ದಾರೆ. ಬಡಬಗ್ಗರನ್ನು ಮಾತ್ರ ಸುಲಿಗೆ ಮಾಡುತ್ತಿದ್ದಾರೆ. ಕೆಲವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿದೆ. ಇಂತಹ ಹತ್ತಾರು ವಿಚಾರಗಳ ಬಗ್ಗೆ ದೂರುಗಳು ಇರುವಾಗ ಜನಸಾಮಾನ್ಯರಿಗೆ ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನು ನೋಡಿದರೇ ಭಯ ಆವರಿಸಿದೆ. ಇದರಿಂದಾಗಿ ಅನುಮಾನಗಳಿದ್ದರೂ ತಿಳಿಸದಂತಹ ಪರಿಸ್ಥಿತಿ ನಿರ್ಮಾಣವಾದಂತಿದೆ. ಕ್ಷೇತ್ರದ ಶಾಸಕ, ಗೃಹಸಚಿವ ಆರಗ ಜ್ಞಾನೇಂದ್ರರ ಸ್ವಂತ ಇಲಾಖೆ ಸಿಬ್ಬಂದಿಗಳ ಈ ನಡೆಯಿಂದಾಗಿ ಕಳ್ಳತನ ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ವಿಫಲವಾದಂತಿದೆ.
ಕೋಣಂದೂರು ಮೂಲದ ಕಾರು ಸಿಕ್ಕಿಬಿದ್ದಿರುವುದು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post