ಕುರುವಳ್ಳಿ ಕಲ್ಲು ಬಂಡೆಯಲ್ಲಿ ಲಾರಿ ಮಾಲೀಕರ ಚಕ್ರವ್ಯೂಹ

ದಿನಕ್ಕೆ 1-2 ಲಕ್ಷದ ವರೆಗೆ ತೆರಿಗೆ ರಹಿತ ಕಮಾಯಿ
ದೋಚಿದ ಹಣ ತಮಿಳುನಾಡಿನಲ್ಲಿ ಹೂಡಿಕೆ…?
ಖತರ್ನಾಕ್‌ ಅಸಾಮಿಗಳ ಕಿಲಾಡಿ ತಂತ್ರಗಾರಿಕೆಗೆ ಸಾರ್ವಜನಿಕರು ಕಂಗಾಲು
ಕಲ್ಲು ಬೆಲೆ ಗಗನಕ್ಕೆ… ಗೃಹಸಚಿವ ಆರಗ ಮೌನಕ್ಕೆ….!

ನ್ಯಾಯವಾದ ಬೆಲೆ ನಿಗದಿ ಮಾಡುವರೇ..?

ಕಲ್ಲು ಸಾಮಾಗ್ರಿ ದರ ಗಗನಕ್ಕೇರಿದ ಕುರಿತು ಅನೇಕರು ಗೃಹಸಚಿವ ಆರಗ ಜ್ಞಾನೇಂದ್ರ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ. ಆರಗ ಅವರಿಗೆ ಕಲ್ಲು ಮಾಫಿಯಾದ ಗ್ಯಾಂಗಿನ ಮೇಲೆ ಅದೇನೋ ಮಮಕಾರ. ಕಲ್ಲು ಸಾಮಾಗ್ರಿ ಖರೀದಿ ಮಾಡುವವರ ಕಷ್ಟದ ಕುರಿತು ಆರಗ ಕಿಂಚಿತ್ತೂ ಗಮನಹರಿಸಿಲ್ಲ. ಈಗಲಾದರೂ ಕಲ್ಲಿಗೆ ನ್ಯಾಯವಾದ ಬೆಲೆ ನಿಗದಿಗೆ ಆರಗ ಪ್ರಯತ್ನಿಸುವರೇ. ಅಥವಾ ಮೌನದಲ್ಲೇ ಕಾಲ ಕಳೆಯುವರೆ?

ಗಣಿಗಾರಿಕೆ ಸಚಿವ ಹಾಲಪ್ಪ ಆಚಾರ್‌ ಮತ್ತು ಕ್ಷೇತ್ರದ ಶಾಸಕ, ಗೃಹಸಚಿವ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಗ್ರಾ.ಪಂ. ಬುಕ್ಲಾಪುರ ಗ್ರಾಮದ ಸರ್ವೆ ನಂಬರ್‌ 38, 75, 64ರ ಅಪ್ಪಟ ನೈಸರ್ಗಿಕ ಸಂಪನ್ಮೂಲವಾದ ಕುರುವಳ್ಳಿಯ ಕಲ್ಲು ಬಂಡೆಯ ಬೇಲಿ ಕಲ್ಲು, ಚಪ್ಪರ ಕಲ್ಲು ಹಾಗೂ ಕಟ್ಟಡ ನಿರ್ಮಾಣಕ್ಕೆ ಅವಶ್ಯಕವಾಗಿ ಬೇಕಾದ ಸೈಜು ಹಾಗೂ ಬೋಡ್ರಸ್‌ ಕಲ್ಲುಗಳ ದರವನ್ನು ಕೆಲವೇ ಮಂದಿ ಲಾರಿ ಮಾಲೀಕರು ಗಗನಕ್ಕೇರಿಸಿದ್ದು ಇವರ ಮಾಫೀಯಾದ ಮುಂದೆ ಗೃಹಸಚಿವ ಆರಗ ಜ್ಞಾನೇಂದ್ರರ ಕಿಮ್ಮತ್ತಾಗಲಿ ಪೊಲೀಸ್‌ ಹಾಗೂ ಗಣಿ ವಿಜ್ಞಾನ ಇಲಾಖೆಯ ಅಧಿಕಾರವಾಗಲಿ ಲೆಕ್ಕಕ್ಕೆ ಇಲ್ಲವಾಗಿದೆ.

ಏಕಾಏಕಿ ಈಗ ಸ್ಥಳೀಯ ಮಟ್ಟದಲ್ಲಿ ಬೇಲಿ ಕಲ್ಲುಗಳ ದರವನ್ನು 220 ರಿಂದ 275ರ ವರೆಗೆ, ಒಂದು ಸಾವಿರ ಸೈಜುಗಲ್ಲುಗಳ ದರವನ್ನು 27 ಸಾವಿರಕ್ಕೆ, ಬೋಡ್ರಸ್‌ ಒಂದು ಲೋಡಿಗೆ 15 ಸಾವಿರದ ವರೆಗೆ, ಒಂದು ಅಡಿ ಚಪ್ಪಡಿ ಕಲ್ಲು ದರವನ್ನು 60 ರೂಪಾಯಿಗೆ ಏರಿಸಲಾಗಿದೆ. ಮೊದಲೇ ಸಿಮೆಂಟು ಹಾಗೂ ಕಬ್ಬಿಣದ ದರದಿಂದ ತತ್ತರಿಸಿರುವ ಜನತೆ ಅದರಲ್ಲೂ ಮದ್ಯಮ ವರ್ಗದವರು ಏರಿಕೆಯಾದ ಈ ದರದ ಮುಂದೆ ಸೆಣಸಾಡಲು ಸಾಧ್ಯವಾಗದೆ ಹತಾಶರಾಗುತ್ತಿದ್ದಾರೆ. ಎಷ್ಟೋ ಮಂದಿ ಗುತ್ತಿಗೆದಾರರು ಕಟ್ಟಡ ಕಟ್ಟುತ್ತೇವೆ ಎಂದು ಒಪ್ಪಂದ ಮಾಡಿಕೊಂಡು ಅದನ್ನು ಪೂರೈಸಲಾಗದೇ ಮನೆ ಕಟ್ಟುವವರಿಗೆ ಕೈಕೊಟ್ಟು ಪರಾರಿಯಾಗುವ ಸಂದರ್ಭ ಎದುರಾಗಿದೆ.

ನಿಜಕ್ಕೂ ಕಲ್ಲಿನ ದರ ಇಷ್ಟು ದುಬಾರಿ ಎಂದು ಹುಡುಕ ಹೊರಟಾಗ ಕೇವಲ 7 ರಿಂದ 8 ಮಂದಿ ಕೊಬ್ಬಿದ ಲಾರಿ ಮಾಲೀಕರು ನಡೆಸುತ್ತಿರುವ ಆಟೋಟೋಪ ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತದೆ. ಅಸಲಿಗೆ ಕುರುವಳ್ಳಿ ಬಂಡೆಯಲ್ಲಿ ಒಂದು ಬೇಲಿ ಕಲ್ಲು ಎಲ್ಲಾ ತಯಾರಿಕಾ ವೆಚ್ಚವನ್ನು ಸೇರಿಕೊಂಡು 100 ರಿಂದ 125 ರೂಪಾಯಿಯ ಒಳಗೆ ಬಂಡೆಯಲ್ಲಿ ಸಿಗುತ್ತದೆ. ಇದರಲ್ಲಿ ನೇರವಾಗಿ ಲಾರಿ ಮಾಲೀಕರಿಗೆ ಮಾರಾಟ ಮಾಡುವ ಬಂಡೆ ಮಾಲೀಕರು 125 ರೂಗಳಿಗೆ ಒಂದು ಬೇಲಿ ಕಲ್ಲು ಹಾಗೂ ಹೆಚ್ಚೆಂದರೆ 35 ರೂಪಾಯಿಗಳಿಗೆ ಒಂದು ಅಡಿ ಚಪ್ಪಡಿ ಕಲ್ಲುಗಳನ್ನು ಮಾರುತ್ತಾರೆ. ಇನ್ನೂ ಇದೇ ಲಾರಿ ಮಾಲೀಕರಿಂದ ದೊಡ್ಡ ಮೊತ್ತದ (5 ರಿಂದ 10 ಲಕ್ಷ ವರೆಗೆ) ದೊಡ್ಡ ಮೊತ್ತದ ಮುಂಗಡವನ್ನು ಪಡೆದುಕೊಂಡ ಬಂಡೆ ಮಾಲೀಕರು ಸದರಿ ಲಾರಿ ಮಾಲೀಕರಿಗೆ 100-110 ರೂಪಾಯಿಗೆ ಒಂದು ಬೇಲಿ ಕಲ್ಲು ಹಾಗೂ 30 ರೂಪಾಯಿಯವರೆಗೆ ಒಂದು ಅಡಿ ಚಪ್ಪಡಿ ನೀಡುತ್ತಾರೆ. ಮುಂಗಡ ಹಣಕ್ಕೆ ಲಾರಿ ಮಾಲೀಕರು ಬಡ್ಡಿ ವಿಧಿಸುವುದಿಲ್ಲ. ಇದೊಂದು ಅಲಿಖಿತ ಒಪ್ಪಂದ.

ಆದರೆ ಲಾರಿ ಮಾಲೀಕರುಗಳು ಗ್ರಾಹಕರಿಗೆ ಬೇಲಿ ಕಲ್ಲನ್ನು 250 ರಿಂದ275ರ ವರೆಗೆ ಮಾರಾಟ ಮಾಡುತ್ತಾರೆ. ಅಂದರೆ ಸ್ಪಲ್ಪವೂ ಮೈಕೈ ನೋವಿಲ್ಲದೇ ಅನಾಯಾಸವಾಗಿ 140 ರೂಪಾಯಿಗಳ ಲಾಭವನ್ನು ಲಾರಿ ಮಾಲೀಕ ಪಡೆಯುತ್ತಾನೆ. ಒಂದು ಲೋಡಿಗೆ 420 ಬೇಲಿಕಂಬ ಎಂದರೆ ಅಂದಾಜು 55 ಸಾವಿರ ರೂಪಾಯಿಗಳ ವರೆಗಿನ ಲಾಭವನ್ನು ಲಾರಿ ಮಾಲೀಕ ಕಿಸೆಗೆ ಇಳಿಸುತ್ತಾನೆ. ಇದರಲ್ಲಿ 6 ರಿಂದ 7 ಸಾವಿರ ಲೋಡು ಅನ್‌ ಲೋಡ್‌ ಹಾಗೂ ಸ್ಥಳೀಯ ಮಟ್ಟದಲ್ಲಿ ಆದರೆ ಹೆಚ್ಚೆಂದರೆ 3 ಸಾವಿರ ವರೆಗೆ ಡೀಸೆಲ್‌ ಹಾಗೂ 2 ಸಾವಿರದ ವರೆಗೆ ಇತರೆ ಹೆಚ್ಚೆಂದರೆ 11 ಸಾವಿರದ ಒಳಗೆ ಮಾತ್ರ ಲಾರಿ ಮಾಲೀಕನ ಖರ್ಚು. ಏನಾದರೂ ಕನಿಷ್ಠ 45 ಸಾವಿರ ರೂಪಾಯಿಗಳ ನಿವ್ವಳ ಲಾಭ ಗ್ಯಾರಂಟಿ. ಇದರಲ್ಲಿ ಪ್ರತಿ ಲಾರಿಯ 10 ಟನ್‌ನ ಒಂದು ಲೋಡಿಗೆ 850 ರೂ ಸರ್ಕಾರದ ಖಜಾನೆಗೆ ಜಮಾ ಆಗುತ್ತದೆ. ಇದರಲ್ಲೂ ಕೂಡ ರಾಯಲ್ಟಿ ಬಿಲ್‌ ತೆಗೆಯದೆ ಮೋಸ ಮಾಡುವ ದಂಧೆಯೂ ಇದೆ. ಒಂದೇ ರಾಯಲ್ಟಿ ಬಿಲ್‌ನಲ್ಲಿ ನಾಲ್ಕಾರು ಲಾರಿ ಲೋಡ್ ಕಲ್ಲು ಸಾಮಾಗ್ರಿ ಸಾಗಿಸಲಾಗುತ್ತದೆ. ರೈತರಿಗಾಗಲಿ ಸಾರ್ವಜನಿಕರಿಗಾಗಲಿ ಜನಸಾಮಾನ್ಯರಿಗಾಗಲಿ ಇವರಿಂದ ನಯಾಪೈಸೆ ಪ್ರಯೋಜನ ಇಲ್ಲ. ಯಾವ ರೀತಿಯ ಆದಾಯ ತೆರಿಗೆಯನ್ನು ಇವರು ಕಟ್ಟುವುದಿಲ್ಲ. ಮತ್ತು ಇವರ ವಹಿವಾಟಿಗೆ ಯಾವ ಇಲಾಖೆಯಿಂದಲೂ ಕಡಿವಾಣವೂ ಇಲ್ಲ. ಅಂದ ಹಾಗೆ ಹೆಚ್ಚು ಕೆಲಸಗಾರರನ್ನು ಹೊಂದಿರುವ, ಹೆಚ್ಚು ಮಂದಿಗೆ ಮುಂಗಡ ಹಣ ನೀಡಿ ಮಾಲನ್ನು ತನ್ನ ಲಾರಿಗೆ ನೀಡಬೇಕೆಂದು ಒಪ್ಪಂದ ಮಾಡಿಕೊಂಡಿರುವ ಲಾರಿ ಮಾಲೀಕ ಗರಿಷ್ಠ ದಿನಕ್ಕೆ 4 ಲೋಡ್‌ ಬೇಲಿ ಕಲ್ಲು ಸರಬರಾಜು ಮಾಡುತ್ತಾನೆ. ಅಲ್ಲಿಗೆ ಆತನ ದಿನದ ಆದಾಯವೇ 1,60,000 ರಿಂದ 2,00,000 ಲಕ್ಷದ ವರೆಗೆ ಇದೆ. (ಜೊತೆಗೆ ಚಪ್ಪಡಿ, ಸೈಜು, ಬೋಡ್ರಸ್‌ ಸೇರಿದರೆ ಇನ್ನೂ ಹೆಚ್ಚಾಗುತ್ತದೆ.) ಕಡೇ ಪಕ್ಷ ದಿನಕ್ಕೆ ಒಂದು ಲೋಡ್‌ ಬೇಲಿ ಕಲ್ಲು ಮತ್ತು ಚಪ್ಪಡಿ ಸೈಜು ಬೋಡ್ರಸ್‌ ಸರಬರಾಜು ಮಾಡುವವನ ಕನಿಷ್ಠ ಅದಾಯವೇ 1 ಲಕ್ಷ ರೂಪಾಯಿ ಇದೆ.

ತಮ್ಮ ಹಿತಾಸಕ್ತಿಗೆ ಎಂದೂ ಧಕ್ಕೆ ಮಾಡಿಕೊಳ್ಳದ ಈ ಖತರ್ನಾಕ್‌ ಅಸಾಮಿಗಳು ಬಂಡೆಯಲ್ಲಿ ಏನೇ ಸಮಸ್ಯೆ ಉಂಟಾದರೂ ಮೊದಲು ಮುಂದು ಬಿಡುವುದು ಅಮಾಯಕ ಕಾರ್ಮಿಕರನ್ನ. ಆ ಮೂಲಕ ಅಲ್ಲಿ ಸಾವಿರಾರು ಕಾರ್ಮಿಕರ ಬದುಕಿಗೆ, ಹೊಟ್ಟೆ ಪಾಡಿಗೆ ತೊಂದರೆ ಉಂಟಾಗುತ್ತಿದೆ ಎಂದು ಬಿಂಬಿಸುವುದು. ಮತ್ತು ಪ್ರತಿಭಟನೆಗೆ ಬರುವಾಗ ಅತ್ಯಂತ ದುಬಾರಿ ಬೆಲೆ ಬಾಳುವ ಕಾರು, ಬಂಗಾರದ ಒಡವೆ ತೆಗೆದಿಟ್ಟು ಚೆನ್ನಾಗಿ ನಟನೆ ಮಾಡಿ ನೋಡುಗರ ಮನ ಕರಗಿಸುವುದು. ವಿಪರ್ಯಾಸವೆಂದರೆ ಕೇವಲ 7 ರಂದ 8 ಮಂದಿ ಲಾರಿ ಮಾಲೀಕರು ಕಲ್ಲಿನ ಬೆಲೆಯನ್ನು ನಿಗಧಿ ಮಾಡುತ್ತಿದ್ದಾರೆ ಮತ್ತು ತೀರಾ ಅನ್ಯಾಯದ ದರ ವಿಧಿಸಿ ಇಡೀ ಕ್ಷೇತ್ರದ ಜನತೆಗೆ ಮೋಸ ಮಾಡುತ್ತಿದ್ದಾರೆ ಮತ್ತು ಹಾದಿ ತಪ್ಪಿಸುತ್ತಿದ್ದಾರೆ. ಆದರೂ ಕೂಡ ಇವರ ವಿರುದ್ದ ರೈತರಾಗಲಿ, ರೈತ ಸಂಘಟನೆ, ದಲಿತ, ಕಾರ್ಮಿಕ ಸಂಘಟನೆಯಾಗಲಿ ಧ್ವನಿ ಎತ್ತದಿರುವುದು ಸೋಜಿಗದ ಸಂಗತಿಯಾಗಿದೆ. ದಿನಕ್ಕೆ 1000 ಸಾವಿರ ದುಡಿಯುವುದು ಕಷ್ಟ ಎಂದು ನಾಟಕವಾಡುವ ಇವರಲ್ಲಿ ಬಹುತೇಕರು ಇಲ್ಲಿ ದುಡಿದ ದುಡ್ಡನ್ನು ಇಲ್ಲಿಯೇ ವಿನಿಯೋಗಿಸದೇ ತಮಿಳುನಾಡಿನಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಜೊತೆಗೆ ಇವರು ಎಂಥಹ ನಟನ ನಿಪುಣರೆಂದರೆ ಬೆಳಗ್ಗೆ 6 ಗಂಟೆಗೆ ಆರಗ ಜ್ಞಾನೇಂದ್ರರ ಮನೆ, ಮಧ್ಯಾಹ್ನ 1 ಗಂಟೆಗೆ ಕಿಮ್ಮನೆ ರತ್ನಾಕರ್‌ ಮನೆ, ಸಂಜೆ 6 ಗಂಟೆಗೆ ಆರ್.ಎಂ. ಮಂಜುನಾಥ ಗೌಡರ ಮನೆಗೆ ಹೋಗಿ ಗೊತ್ತಾಗದ ಹಾಗೆ ಮಂಕುಬೂದಿ ಎರಚಿ ಬರುತ್ತಾರೆ.

ಅಕಸ್ಮಾತ್‌ ಬಂಡೆ ನಿಂತರೂ ಕೂಡ ಈ ಏಳೆಂಟು ಮಂದಿ ಯಾವ ತೊಂದರೆ ಇಲ್ಲದೆ ಬಚಾವ್‌ ಆಗುತ್ತಾರೆ. ಆದರೆ ಸಮಸ್ಯೆಗೆ ಸಿಲುಕುವುದು ಉಳಿದ ಕಾರ್ಮಿಕರು ಮಾತ್ರ. ಈ ಮಾಫಿಯಾದ ಕುರಿತು ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ, ತೆರಿಗೆ ಅಧಿಕಾರಿಗಳು ಏನಾದರೂ ಕ್ರಮ ಕೈಗೊಂಡು ಬಡವರಿಗೆ ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಕಲ್ಲು ಲಭಿಸುವಂತೆ ಮಾಡಬಲ್ಲರೇ…?

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post