ಗ್ರಾ.ಪಂ. ಮಾಜಿ ಅಧ್ಯಕ್ಷ ಹಸಿರುಮನೆ ನಂದನ್ ಆಗ್ರಹ
ಕಳೆದ ನಾಲ್ಕಾರು ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ಘಟ್ಟ ಪ್ರದೇಶದ ಎಲ್ಲಾ ಜಿಲ್ಲೆಗಳಿಗೆ ಪ್ರಮುಖ ಸಾರಿಗೆ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಗಳು ಶಿಥಿಲಗೊಳ್ಳುತ್ತಿದೆ. ಇದು ಆತಂಕಕಾರಿ.
ಈಗ ಮಳೆಗಾಲ ಆರಂಭವಾಗುತ್ತಿದ್ದು ದಕ್ಷಿಣ ಭಾರತದ ಚಿರಾಪುಂಜಿ ಎನಿಸಿರುವ ಆಗುಂಬೆಯಲ್ಲಿ ಸದಾಕಾಲ
ರಭಸದ ಮಳೆ ಸುರಿಯುತ್ತದೆ. ಇತ್ತೀಚೆಗೆ ರಸ್ತೆಯ ದುರಸ್ಥಿಯ ಕಾರಣ ಒಂದು ಬದಿಯಲ್ಲಿ ಚರಂಡಿ
ಸಂಪೂರ್ಣ ಮುಚ್ಚಲ್ಪಟ್ಟಿದ್ದು ನೀರು ಒಂದು ಭಾಗದ ಚರಂಡಿಯಿಂದ ಅದರ ಮಾಮೂಲಿ ಹಾದಿಯನ್ನು ಬಿಟ್ಟು
ಎಲ್ಲೆಂದರಲ್ಲಿ ನುಗ್ಗುತ್ತಿದೆ. ಮಾಮೂಲಿ ಹಾದಿಗಳು ನೂರಾರು ವರ್ಷಗಳು ನೀರಿನ ಹರಿಯುವಿಕೆಯಿಂದ ಸ್ವಾಭಾವಿಕವಾಗಿ
ನಿರ್ಮಾಣಗೊಂಡು ಅಲ್ಲಿನ ಪರಿಸಕ್ಕೆ ಪೂರಕವಾಗಿತ್ತು. ಆದರೆ ಈಗ ದೊಡ್ಡ ಗಾತ್ರ ಹಾಗೂ ರಭಸವಾಗಿ ಹರಿಯುವ
ನೀರು ತನಗೆ ತೋಚಿದ ಕಡೆ ಹಾದಿಯನ್ನು ನಿರ್ಮಿಸಿಕೊಂಡು ಕಂದಕ್ಕೆ ಧುಮುಕುತ್ತಿರುವುದರಿಂದ ಮಣ್ಣಿನ
ಪದರಗಳೇ ಸಡಿಲವಾಗುತ್ತಿದೆ. ಹಾಗಾಗಿ ಪ್ರತೀವರ್ಷವೂ ಇಲ್ಲಿ ಭೂ ಕುಸಿತ ಸಾಮಾನ್ಯ ಎಂಬಂತಾಗಿದ್ದು ಪರಿಸ್ಥಿತಿ
ಹೀಗೆ ಮುಂದುವರೆದರೆ ಶಾಶ್ವತವಾಗಿ ಘಾಟಿ ರಸ್ತೆಗಳು ಮುಚ್ಚಿಹೋಗಲಿದೆ.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಈ ತಕ್ಷಣ ಎಚ್ಚೆತ್ತುಕೊಂಡು ಮಳೆ ನೀರು ಅದರ ಹಿಂದಿನ
ಹಾದಿಯಲ್ಲಿ ಹೋಗುವಂತೆ ಅಥವಾ ಸುರಕ್ಷಿತ ಸ್ಥಳದಲ್ಲಿ ಧುಮುಕುವಂತೆ ಮಾಡಲು ಟಾಸ್ಕ್ಪೋರ್ಸ್ ಪಡೆಯನ್ನು
ಮಳೆಗಾಳ ಮುಗಿಯುವ ತನಕ ನೇಮಿಸಬೇಕು. ಮತ್ತು ಅವರ ಸುಪರ್ಧಿಗೆ ಕಟ್ಟಿಕೊಳ್ಳುವ ಚರಂಡಿ ಹಾಗೂ
ನೀರನ್ನು ಶೀಘ್ರವಾಗಿ ಸರಿಪಡಿಸುವ ಜವಾಬ್ದಾರಿ ನೀಡಬೇಕು.
ಒಂದು ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇದನ್ನು ನಿರ್ವಹಿಸಲು ಸಾಧ್ಯವಿಲ್ಲದಲ್ಲಿ
ಅವರ ಮೂಲಕ ಗ್ರಾಮ ಪಂಚಾಯಿತಿಗೆ ಶಿಫಾರಸ್ಸು ಮಾಡಿ ಪಂಚಾಯಿತಿ ಮೂಲಕವಾದರೂ ಟಾಸ್ಕ್ಪೋರ್ಸ್ ಪಡೆ
ನೇಮಿಸಬೇಕೆಂದು ಆಗುಂಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಆ ಭಾಗದ ಪರಿಸರ ಸೂಕ್ಷ್ಮತೆ
ಹಾಗೂ ವೈವಿಧ್ಯತೆಯನ್ನು ಸಮರ್ಥವಾಗಿ ಬಲ್ಲ ಹಸಿರುಮನೆ ನಂದನ್ ಆಗ್ರಹಿಸಿದ್ದಾರೆ.

