ಟೀ, ಬಿಸ್ಕತ್ಗೆ ಸದಸ್ಯರು ಸೀಮಿತ
ಗ್ರಾಮ ಪಂಚಾಯಿತಿ ಒಕ್ಕೂಟ ಅಭಿಮತ
ಯೋಜನೆಗಳನ್ನು ಪ್ರಶ್ನಿಸಬಾರದಾ…?
ಜನಪ್ರತಿನಿಧಿಗಳಿಗೆ ಆಧ್ಯತೆ ನೀಡಬೇಕು
ಮನವಿ ಸಲ್ಲಿದ ಒಕ್ಕೂಟದ ಪದಾಧಿಕಾರಿಗಳು |
ಸ್ವಚ್ಚಭಾರತ್ ಯೋಜನೆ, ಜಲ್ ಜೀವನ್ ಮಿಷನ್, ಆಡಿಟ್ ವ್ಯವಸ್ಥೆ,
ನರೇಗಾ, ವಸತಿ ಯೋಜನೆ, 15ನೇ ಹಣಕಾಸು, ಎಸ್ಕ್ರೋ ಖಾತೆಗೆ ವಿದ್ಯುತ್ ಬಿಲ್ ಕುರಿತ ಯಾವುದೇ ಪ್ರಶ್ನೆ
ಮಾಡುವ ಅಧಿಕಾರ ಪಂಚಾಯಿತಿ ಕಳೆದುಕೊಂಡಿದೆ. ಕಸ ಸಂಗ್ರಹಣೆ ವಿಲೇವಾರಿ ಬಿಕ್ಕಟ್ಟಿಗೆ ಕಾರಣವಾಗಿದೆ.
ನರೇಗಾ ಕ್ರಿಯಾಯೋಜನೆ ರದ್ದುಪಡಿಸಲಾಗುತ್ತಿದೆ. ಕೆಡಿಪಿ ಸಭೆಗೆ ಅಧಿಕಾರಿಗಳು ಹಾಜರಾಗದಿದ್ದರೂ ಕ್ರಮ
ಕೈಗೊಳ್ಳದಂತಹ ಸ್ಥಿತಿ ಇದೆ. 15ನೇ ಹಣಕಾಸು, ಅಭಿವೃದ್ಧಿ ಮೊತ್ತ ಹೆಚ್ಚಿಸಬೇಕು. ಖಾಲಿ ಇರುವ ಹುದ್ದೆಗಳ
ಭರ್ತಿಗೆ ಕ್ರಮ ವಹಿಸಬೇಕು ಎಂದು ತೀರ್ಥಹಳ್ಳಿಯ ವಿದ್ಯಾಧಿರಾಜ ಸಭಾಭವನದಲ್ಲಿ ಶನಿವಾರ ತಾಲ್ಲೂಕು ಗ್ರಾಮ
ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಒಕ್ಕೂಟ ಹಮ್ಮಿಕೊಂಡಿದ್ದ ಸಶಕ್ತ ಗ್ರಾಮ ಸದೃಢ ಭಾರತ ಕಾರ್ಯಕ್ರಮದ
ಸಂವಾದದಲ್ಲಿ ಸದಸ್ಯರು ಆಗ್ರಹಿಸಿದರು.
ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಗ್ರಾಮದ ಹೊಣೆ ಹೊತ್ತು ಕೆಲಸ
ನಿರ್ವಹಿಸಿದಾಗ ಬದಲಾವಣೆ ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸರ್ಕಾರವಾಗಿ ಬದ್ಧತೆ
ವಹಿಸಬೇಕು. ರಾಜ್ಯ ಸರ್ಕಾರ ಒಕ್ಕೂಟದ ಮನವಿಯನ್ನು ಪುರಸ್ಕರಿಸಲಿದೆ. ಅನುಷ್ಟಾನದ ಹಂತದಲ್ಲಿ ಜವಾಬ್ದಾರಿ
ಗ್ರಾಮ ಪಂಚಾಯಿತಿಗೆ ಇದೆ. ಅಧಿಕಾರಿ ವರ್ಗದವರಿಗಿಂತ ಚುನಾಯಿತ ಪ್ರತಿನಿಧಿಗಳಿಗೆ ಪ್ರಾಧಾನ್ಯತೆ ಸಿಗಬೇಕು.
ಕೂಲಿ ಕಾರ್ಮಿಕ ಸದಸ್ಯರಿದ್ದು ಗೌರವಧನ ಏರಿಕೆಯಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಗ್ರಾಮೀಣಾಭಿವೃದ್ದಿ
ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಕುರಿತ ಅಧ್ಯಯನ ನಡೆಸಲಾಗಿದೆ. ಹಲವಾರು ಸಮಸ್ಯೆಗಳಿಗಳ ಪರಿಹಾರಕ್ಕೆ
ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನಷ್ಟು ಗಂಭೀರ ಸಮಸ್ಯೆಗಳಿದ್ದು ಸದಸ್ಯರು ಅವುಗಳನ್ನು ಮುಕ್ತವಾಗಿ
ಹೇಳಿಕೊಳ್ಳಬೇಕು ಎಂದರು.
ಒಕ್ಕೂಟದ ಅಧ್ಯಕ್ಷ ಬಿ.ಆರ್. ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿ ಮಾತನಾಡಿ, ಅಧಿಕಾರ ವಿಕೇಂದ್ರಿಕರಣ ಲಭ್ಯವಾಗುತ್ತಿಲ್ಲ. ಕ್ರಿಯಾ ಯೋಜನೆ ಸಿದ್ಧಪಡಿಸುವುದು
ಸವಾಲಾಗಿದೆ. ಅನುದಾನದ ಕೊರತೆಯಿಂದ ಜನರ ಬೇಡಿಕೆ ಈಡೇರುತ್ತಿಲ್ಲ. ಒಕ್ಕೂಟ ಸಲ್ಲಿಸಿದ ಮನವಿಗೆ ವಿಶೇಷ
ಆಧ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ಸಿಇಓ ಎಂ.ಎನ್. ವೈಶಾಲಿ, ಇಓ ಶೈಲ ಎನ್. ಇದ್ದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಂಬಳ ಮುರುಳಿ ಮನವಿ ಪತ್ರ ಓದಿದರು. ಒಕ್ಕೂಟದ ಪ್ರಮುಖರಾದ ಮಧುರಾಜ
ಹೆಗ್ಡೆ, ಕಾರಬೈಲು ಸತೀಶ್, ಗುಡ್ಡೇಕೊಪ್ಪ ಪ್ರದೀಪ್ ಮುಂತಾದವರು ಇದ್ದರು.